Cauvery Dispute: ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ- ಸುದೀಪ್
ಈ ವರ್ಷ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕಕ್ಕೆ ಸಂಕಷ್ಟ ತಲೆದೋರಿದೆ. ಮಂಡ್ಯ ಭಾಗದ ರೈತರು ಕಾವೇರಿ, ರೈತ ಸಂಘಗಳು ಮತ್ತು ಕನ್ನಡಪರ ಹೋರಾಟಗಾರು ಈಗಾಗಲೇ ಹೋರಾಟ ಆರಂಭಿಸಿದ್ದಾರೆ. ನಮಗೆ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದ್ದಾರೆ.
ಇನ್ನು ಕಾವೇರಿ ಹೋರಾಟಕ್ಕೆ ಸ್ಯಾಂಡಲ್ವುಡ್ ಬೆಂಬಲ ನೀಡುತ್ತಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಸಿನಿಮಾ ನಟರ ವಿರುದ್ಧ ಧಿಕ್ಕಾರದ ಪೋಸ್ಟ್ಗಳು ಹರಿದಾಡುತ್ತಿದೆ. ಇದೇ ವಿಚಾರವಾಗಿ ಫಿಲ್ಮ್ ಚೇಂಬರ್ ಎದುರು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೀಗ ನಿಧಾನವಾಗಿ ಕನ್ನಡ ಸಿನಿಮಾ ನಟರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನಟ ದರ್ಶನ್ ಮೊದಲು ಟ್ವೀಟ್ ಮಾಡಿ ಈ ಬಗ್ಗೆ ಸ್ಪಂದಿಸಿದ್ದರು. ದರ್ಶನ್ ಬಳಿಕ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. "ಸ್ನೇಹಿತರೆ.. ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ" ಎಂದು ಬರೆದುಕೊಂಡಿದ್ದಾರೆ.
ಬೇಗ ನ್ಯಾಯ ಸಿಗುವಂತಾಗಲಿ- ದರ್ಶನ್
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ನಟ ದರ್ಶನ್ "ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ" ಎಂದಿದ್ದರು.
ಸಿಂಗಲ್ಲಾಗಿ ಹೋಗಲ್ಲ- ರಾಘಣ್ಣ
ಮೈಸೂರಿನಲ್ಲಿ ಮಾತನಾಡಿರುವ ನಟ ರಾಘವೇಂದ್ರ ರಾಜ್ಕುಮಾರ್ "ಅಪ್ಪಾಜಿ ಹೇಳಿದ್ದಾರೆ. ನೆಲ, ಜಲದ ವಿಚಾರ ಬಂದಾಗ ಪ್ರಾಣ ಕೋಡೊಕು ಸಿದ್ಧ ಅಂತ. ಅದೇ ರೀತಿ ನಾವು ನಡೆದುಕೊಳ್ಳುತ್ತೇವೆ. ಇಡೀ ಚಿತ್ರರಂಗ ಅದಕ್ಕೆ ಬದ್ಧವಾಗಿ ನಿಲ್ಲುತ್ತೇವೆ. ನಾವು ಬರೀ ಸಿನಿಮಾ ಮಾಡೋಕ್ಕಲ್ಲ ಇರೋದು. ನೆಲಕ್ಕೆ ಜನಕ್ಕೆ ಭಾಷೆಗೆ ಕಷ್ಟ ಬಂದಾಗ ನಾವು ಹೋಗಲೇಬೇಕು. ಆ ಕರೆ ಬಂದಾಗ ನಾವೆಲ್ಲಾ ಬರುತ್ತೇವೆ" ಎಂದಿದ್ದಾರೆ.
"ಸಿಂಗಲ್ಲಾಗಿ ಬಂದರೆ ಒಬ್ಬೊಬ್ಬರು ಹೆಸರು ಮಾಡಿಕೊಳ್ಳಲು ಬಂದಂತೆ ಆಗುತ್ತದೆ. ಇಂಡಸ್ಟ್ರಿಯಿಂದ ಕರೆ ಬರುತ್ತದೆ. ಎಲ್ಲರೂ ಒಟ್ಟಾಗಿ ಬರ್ತೀವಿ" ಎಂದು ರಾಘಣ್ಣ ವಿವರಿಸಿದ್ದಾರೆ.
ಸಂಸದೆ ಸುಮಲತಾ ದನಿ
ಇತ್ತೀಚೆಗೆ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ಕಾವೇರಿ ನದಿ ನೀರಿನ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟಿದ್ದರು.
ಕಾವೇರಿ ಬಿಟ್ಟುಕೊಡಲ್ಲ- ದೊಡ್ಡಣ್ಣ
ದೆಹಲಿಯಲ್ಲಿ ಮಾತನಾಡಿದ ಹಿರಿಯ ನಟ ದೊಡ್ಡಣ್ಣ "ಸಿನಿಮಾ ನಟರು ಕಂಡಿತ ಮಾತನಾಡುತ್ತಾರೆ. ನಮ್ಮ ತಾಯಿ ಕಾವೇರಿ ನೀರು ಕುಡಿದವಳು. ಕೆ. ಆರ್ ನಗರದ ಚೆನ್ನಪ್ಪನ ಕೊಪ್ಪಲು ಆಕೆ ಹುಟ್ಟೂರು. ಹಂಗಾಗಿ ನಮಗೆ ಅದು ಜೀವನದಿ. ತಾಯಿ ನದಿ ಅದು. ಅದರ ಬಗ್ಗೆ ಬೇಕಾದಷ್ಟು ಮಾತನಾಡಬಹುದು. ಜಿ. ಮಾದೇಗೌಡರು ಸಾತ್ವಿಕ ಹೇಳಿಕೆ ಕೊಟ್ಟಿದ್ದರು. ರಕ್ತ ಬೇಕಾದರೂ ಕೊಡ್ತೀವಿ. ಕಾವೇರಿ ನೀರು ಕೊಡಲ್ಲ ಅಂತ. ನಾವು ಅದಕ್ಕೆ ಬದ್ಧರಾಗಿದ್ದೇವೆ. ಏನೇ ಆದರೂ ನಾವು ಕಾವೇರಿ ಬಿಟ್ಟುಕೊಡಲ್ಲ.


Click it and Unblock the Notifications











