'ಶಾಲಾ-ಕಾಲೇಜು ಶುಲ್ಕ ಕಡಿಮೆಗೊಳಿಸಿ': ಸಿಎಂಗೆ ಪತ್ರ ಬರೆದ ನಟ ಕಿರಣ್ ರಾಜ್
ಕೋವಿಡ್ ಭೀತಿಯಿಂದ ಶಾಲಾ-ಕಾಲೇಜುಗಳು ಮುಚ್ಚಿವೆ. ಪರ್ಯಾಯವಾಗಿ ಆನ್ಲೈನ್ ಮೂಲಕ ತರಗತಿಗಳು ನಡೆಸಲಾಗುತ್ತಿದೆ. ಆದರೆ, ಪ್ರವೇಶ ಶುಲ್ಕದಲ್ಲಿ ಯಾವುದೇ ರೀತಿಯ ರಿಯಾಯಿತಿ ಸಿಗದೆ ಇರುವುದು ಪೋಷಕರ ವಿರೋಧಕ್ಕೆ ಕಾರಣವಾಗಿದೆ.
Recommended Video
ಮೊದಲೇ ಲಾಕ್ಡೌನ್ ಜಾರಿಯಲ್ಲಿದೆ. ಕೆಲಸ ಬೇರೆ ಇಲ್ಲ. ಸಂಬಳ ಎಲ್ಲಿಂದ ಬರಬೇಕು. ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂದು ಆನ್ಲೈನ್ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡಿರುವ ಪೋಷಕರು ಪೂರ್ತಿ ಶುಲ್ಕ ಪಾವತಿಸಲು ಕಷ್ಟಪಡುತ್ತಿದ್ದಾರೆ.
ಈ ನಡುವೆ ಪೂರ್ತಿ ಶುಲ್ಕ ಪಾವತಿಸುವಂತೆ ಶಿಕ್ಷಣ ಸಂಸ್ಥೆಗಳು ಒತ್ತಡ ಹಾಕುತ್ತಿವೆ. ಇದನ್ನು ಖಂಡಿಸಿ ಪೋಷಕರು ಬೀದಿಗಿಳಿದು ಹೋರಾಟ ಮಾಡಿದ್ರು. ಯಾವುದೇ ಪ್ರಯೋಜನ ಆಗಲಿಲ್ಲ. ಇದೀಗ, ಕನ್ನಡ ನಟ ಕಿರಣ್ ರಾಜ್ ವಿದ್ಯಾರ್ಥಿಗಳು ಹಾಗೂ ಪೋಷಕರ ಪರವಾಗಿ ದನಿ ಎತ್ತಿದ್ದಾರೆ.

ಕೊರೊನಾ ಬಿಕ್ಕಟ್ಟಿನಲ್ಲಿ ಪೂರ್ತಿ ಶುಲ್ಕ ಪಾವತಿಸುವುದು ಕಷ್ಟಕರ. ಹಾಗಾಗಿ, ಸರ್ಕಾರ ಈ ಕುರಿತು ಪರಿಶೀಲಿಸಿ ಶುಲ್ಕ ಕಡಿಮೆ ಮಾಡುವಂತೆ ಕ್ರಮ ಜರುಗಿಸಬೇಕು ಎಂದು ಕಿರಣ್ ರಾಜ್ ಸಿಎಂ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
''ಜಗತ್ತಿನೆಲ್ಲೆಡೆ ಕೋವಿಡ್ 19 ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜನರು ಬದುಕು ಅಲ್ಲೋಲಕಲ್ಲೋಲವಾಗಿದೆ. ಇನ್ನು ಮಕ್ಕಳು ಶಾಲಾ-ಕಾಲೇಜು ಇಲ್ಲದೆ ಆನ್ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ, ಶಾಲಾ-ಕಾಲೇಜು ಶುಲ್ಕವೂ ಸ್ವಲ್ಪವೂ ಕುಗ್ಗಿಲ್ಲ. ದಯವಿಟ್ಟು ಶಾಲಾ-ಕಾಲೇಜುಗಳ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ಈ ಮೂಲಕ ನಿಮ್ಮಲ್ಲಿ ಎಲ್ಲಾ ಪೋಷಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ'' ಎಂದಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ನಟ ಕಿರಣ್ ರಾಜ್ ತಮ್ಮ ಫೌಂಡೇಶನ್ ಮೂಲಕ ಜನಸಾಮಾನ್ಯರಿಗೆ ಸಹಾಯ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಹಲವು ಕಡೆ ಪ್ರತಿನಿತ್ಯ ಆಹಾರದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.


Click it and Unblock the Notifications











