ಅಯೋಧ್ಯೆಯ ರಾಮನಿಗೂ ನಮ್ಮೂರ ಕೊಂಪೆಯ ಮಾರಿಗೂ ಎತ್ತಣಿಂದೆತ್ತಣ ನಂಟು..?: ನಟ ಕಿಶೋರ್ ಪ್ರಶ್ನೆ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಪ್ರಮುಖ ಸೆಲಬ್ರಿಟಿಗಳ ಜೊತೆಗೆ ಹಲವು ನಟ ನಟಿಯರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇದರ ನಡುವೆಯೇ ನಟ ಕಿಶೋರ್ ಕುಮಾರ್ ಅವರು ರಾಮನ ಮಂದಿರದ ಅಕ್ಷತೆ ಕಾಳಿಗೆ ಮಾರಮ್ಮನ ಗುಡಿಯಲ್ಲಿ ಪೂಜೆ ಮಾಡುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಗ್ಗಾಗೆ ತಮ್ಮ ಅನಿಸಿಕೆ ಅಭಿಪ್ರಾಯಗಳ ಮೂಲಕವೇ ಸದಾ ಮುನ್ನೆಲೆಲ್ಲಿರುವ ನಟ ಕಿಶೋರ್ ಕುಮಾರ್ ಹುಲಿ, ದೇಶದ ಪ್ರಸಕ್ತ ಸನ್ನಿವೇಶಗಳಿಗೆ ರಿಯಾಕ್ಟ್ ಮಾಡುತ್ತಲೇ ಇರುತ್ತಾರೆ. ಈಗ ಬಾಬ್ರಿ ಮಸೀದಿ ಕೆಡವಿ ಅಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆ ರಾಮ ಮಂದಿರದ ಬಗ್ಗೆಯೂ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಬರಹ ಹಂಚಿಕೊಂಡಿಸಿದ್ದಾರೆ.

ರಾಮನ ಮಂದಿರದ ಅಕ್ಷತೆ ಕಾಳಿಗೆ ಮಾರಮ್ಮನ ಗುಡಿಯಲ್ಲಿ ಪೂಜೆಯೇ?
ರಾಮನ ಮಂದಿರದ ಅಕ್ಷತೆ ಕಾಳಿಗೆ ಮಾರಮ್ಮನ ಗುಡಿಯಲ್ಲಿ ಪೂಜೆ ಮಾಡಲಾಗುತ್ತದೆ ಎಂಬ ವರದಿಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿರುವ ಅವರು, "ಮಾರಮ್ಮನ ಜಾತ್ರೆಯೂ ರಾಮ ಮಂದಿರವೂ... ಅಯೋಧ್ಯೆಯ ರಾಮನಿಗೂ ನಮ್ಮೂರ ಕೊಂಪೆಯ ಮಾರಿಗೂ ಎತ್ತಣಿಂದೆತ್ತಣ ನಂಟು..?. ರಾಮನ ಮಂದಿರದ ಅಕ್ಷತೆ ಕಾಳಿಗೆ ಮಾರಮ್ಮನ ಗುಡಿಯಲ್ಲಿ ಪೂಜೆಯೇ..??, ನಮ್ಮ ಹಳ್ಳಿಯಲ್ಲಿ ನಡೆದ ಈ ಸೋಜಿಗ ಕಾಕತಾಳೀಯವಂತೂ ಅಲ್ಲ" ಎಂದು ಹೇಳಿದ್ದಾರೆ.
ಮುಂದುವರಿದು, "ಇದು ಧರ್ಮದ ವ್ಯವಸ್ಥಿತ ರಾಜಕೀಕರಣದ ಸಾಕ್ಷಿಯೇ..??, ಈ ಸಾಕ್ಷಿಯ ದರ್ಶನವು ನಿಜವಾಗಿ ದೈವೇಚ್ಛೆಯೇ ಸರಿ.. ಅಂದು ಮಾರಿಯನ್ನೂ ಮಾರಿಯ ಜಾತ್ರೆಯನ್ನೂ ಬಳಸಿ ನಡೆದ ರಾಜಕೀಯ ಇಂದು ರಾಮನನ್ನೂ ರಾಮನ ಮಂದಿರವನ್ನೂ ಬಳಸಿ ನಡೆಯುತ್ತಿದೆಯೇ..?" ಎಂದು ಪ್ರಶ್ನಿಸಿದ್ದಾರೆ.
"ಬ್ರಾಹ್ಮಣನೆಂದು ಸುಳ್ಳು ಹೇಳಿ ವೇದ ಕಲಿತು, ಬ್ರಾಹ್ಮಣ ಕನ್ನೆಯನ್ನು ಮದುವೆಯಾಗಿ ಮಕ್ಕಳು ಪಡೆದು ಇವರ ವರ್ಣಾಶ್ರಮವನ್ನು ಮೀರಿದ 'ಘೋರ ಅಪರಾಧ'ಕ್ಕೆ ಮಾರಿ ಕೊಟ್ಟ ಅದೇ ಶಿಕ್ಷೆ ಈಗ ರಾಮನನ್ನೂ ರಾಮನ ಮಂದಿರವನ್ನೂ ಬಳಸಿ ಕೊಡುತ್ತಾರೆಯೇ??... ಶೂದ್ರರೂ ದಲಿತರೂ ಮೇಲೇರುವ ಪ್ರಯತ್ನ ಮಾಡಿದರೆ.. ಇಲ್ಲವೇ 'ಉತ್ತಮ'ರ 'ಜಾತಿ ಕೆಡಿಸುವ' ಪ್ರಯತ್ನ ಮಾಡಿದರೆ, ಮಾರಿಯಂತೆಯೇ ಶೂದ್ರನನ್ನೂ ಅವನ ಮಕ್ಕಳನ್ನೂ ಸುಟ್ಟು ಹಾಕುತ್ತಾರೆಯೇ...??" ಎಂದು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
"ಮಾರಿಯ ಜಾತ್ರೆಯಲ್ಲಿ ಶೂದ್ರನೇ ತನ್ನದೇ ಸೂಚಕವಾದ ಕೋಣವನ್ನೂ ತನ್ನ ಮಕ್ಕಳ ಸೂಚಕವಾದ ಆಡು ಕುರಿಗಳನ್ನೂ ತಾನು ಮಾಡಿದ 'ಘೋರ ಪಾಪಕ್ಕೆ' ತನ್ನ ಕೈಯಲ್ಲೇ ಕಡಿದುಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಹಾಗೆ.. ದಲಿತ ಶೂದ್ರರ ಮತ್ತು ದಲಿತ ಶೂದ್ರರ ಮಕ್ಕಳ ತಲೆಯನ್ನೂ ದಲಿತ ಶೂದ್ರರ ಕೈಯಲ್ಲೇ ಕಡಿಸುತ್ತಾರೆಯೇ..??" ಎಂದಿದ್ದಾರೆ.
"ಶತಶತಮಾನಗಳು ಅದನ್ನೇ ಸಂಭ್ರಮಿಸುತ್ತಾ, ಜಾತ್ರೆ ಮಾಡುತ್ತಾ ಇವರ ಸಮಾಜದಲ್ಲಿ ನಮ್ಮ ಜಾಗವನ್ನು ನಮಗೆ ನೆನಪಿಸುವ ಹಾಗೆ .. ನಮ್ಮ 'ಪಾಪ'ವನ್ನು ನಾವೇ ಒಪ್ಪಿಕೊಳ್ಳುವ ಹಾಗೆ..ಅದನ್ನೇ ಸಂಭ್ರಮಿಸುತ್ತಾ , ತಮ್ಮನ್ನು ಒಳಗೆ ಸೇರಿಸಿಕೊಳ್ಳದ ಮಂದಿರದ ಹೆಸರಲ್ಲಿ ದಲಿತರೂ ಶೂದ್ರರೂ ಶತ ಶತಮಾನಗಳು ಓಟು ಒತ್ತಿ ಇವರನ್ನು ಅಧಿಕಾರಕ್ಕೆ ತರುತ್ತಲೇ ಇರುತ್ತೇವೆಯೇ..???" ಎಂದು ವರ್ಣಾಶ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಮಂದಿರದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿದೆ.


Click it and Unblock the Notifications











