ತಮಿಳಿನಿಂದ ಕನ್ನಡ ಬಂದಿದ್ದರೆ ತಪ್ಪೇನು ? ಕಮಲ್ ಹಾಸನ್ ಬೆಂಬಲಕ್ಕೆ ನಿಂತ ಕಿಶೋರ್..!
ಕಮಲ್ ಹಾಸನ್ ಕನ್ನಡಿಗರನ್ನು ಕೆಣಕಿದ್ದಾರೆ. ಕೆರಳಿಸಿದ್ದಾರೆ. ಭಾಷಾ ಜ್ಞಾನದ ಕೊರತೆಯಿಂದ ಡಾ.ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿಯೇ ಕನ್ನಡದ ಜನ್ಮಕ್ಕೆ ತಮಿಳು ಭಾಷೆ ಕಾರಣವೆಂದಿದ್ದಾರೆ. ಈ ಮೂಲಕ ಶಿವಣ್ಣ ಅವರನ್ನು ಕೂಡ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿಸಿದ್ದಾರೆ. ಕಮಲ್ ಅವರಾಡಿದ ಈ ಮಾತು ಇದೀಗ ಆಕ್ರೋಶದ ಜ್ವಾಲೆಯ ಸ್ವರೂಪ ಪಡೆದು ಕರುನಾಡಿನೆಲ್ಲೆಡೆ ಧಗಧಗಿಸುತ್ತಿದೆ. ಕಮಲ್ ಹಾಸನ್ ಅವರ ಚಿತ್ರಕ್ಕೆ ಬಿಡುಗಡೆಗೆ ಅವಕಾಶ ನೀಡಬಾರದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನು ಕಮಲ್ ಹಠಮಾರಿ. ಮಾಡಿದ ತಪ್ಪಿನ ಅರಿವಾದ ಮೇಲಾದರೂ ಕೂಡ ಕಮಲ್ ಹಾಸನ್ ಕ್ಷಮೆ ಕೇಳಬೇಕಿತ್ತು. ಆದರೆ, ಕಮಲ್ ಹಾಸನ್ ಮೊಂಡುತನದ ಪ್ರದರ್ಶನ ಮಾಡಿದ್ದಾರೆ. ಬೆದರಿಕೆ ನನಗೇನು ಹೊಸದಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ ಕ್ಷಮೆಯನ್ನು ಕೂಡ ಕೇಳಲ್ಲ ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಅವರ ಈ ಉದ್ದಟತನದಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರ ನಡುವೆ ಇದೀಗ ಕನ್ನಡದ ಪ್ರತಿಭಾವಂತ ಮತ್ತು ಬಹುಭಾಷಾ ನಟ ಕಿಶೋರ್ ಈ ವಿವಾದದ ಕುರಿತು ಮಾತನಾಡಿದ್ದಾರೆ. ಆಶ್ಚರ್ಯ ಅಂದರೆ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸದ ಕಿಶೋರ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿರುವ ಕಿಶೋರ್, ಕಮಲ್ ಹಾಸನ್ ಅವರ ಹೇಳಿಕೆಯನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು ? ಎಂದು ಪ್ರಶ್ನೆ ಮಾಡಿದ್ದಾರೆ. ಕಮಲ್ ಹಾಸನ್ ತುಂಬಾ ತಿಳಿದಂತಹ ವ್ಯಕ್ತಿ. ಅಂತಹ ವ್ಯಕ್ತಿ ಏನಾದರು ಒಂದು ಹೇಳಿದ್ದಾರೆ ಅಂದರೆ ಅದಕ್ಕೆ ತರ್ಕ ಇರಬಹುದು, ಏನೋ ಅರ್ಥ ಇರಬಹುದು, ಅದೇನು ಎನ್ನುವುದನ್ನು ನಾವು ಪ್ರಶ್ನೆ ಮಾಡಿ ತಿಳಿದುಕೊಳ್ಳಬೇಕು ಎಂದಿರುವ ಕಿಶೋರ್ ಅವರ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ ಹಾಗಂಥ ಒಂದು ಭಾಷೆ ಮೇಲೂ ಇನ್ನೊಂದು ಭಾಷೆ ಕೀಳು ಅಂತಲ್ಲ, ಕನ್ನಡವು ಎಲ್ಲಿಂದಲೋ ಹುಟ್ಟಿ ಬಂದಿದೆ ಹಾಗೇ ತಮಿಳು ಸಹ ಎಲ್ಲಿಂದಲೋ ಹುಟ್ಟಿ ಬಂದಿದೆ ಎಂದು ಕೂಡ ಕಿಶೋರ್ ಹೇಳಿದ್ದಾರೆ.ಆಯಾ ಭಾಷೆಗಳಿಗೆ ಅದ್ರದ್ದೇ ಆದ ಪ್ರಾಮುಖ್ಯತೆಗಳಿವೆ ಎಂದು ಹೇಳಿದ್ದಾರೆ.
ಮುಂದುವರೆದು ಭಾವುಕಗೊಂಡು ಜನರನ್ನು ರೊಚ್ಚಿಗೆಬ್ಬಿಸಬಾರದು ಎಂದಿರುವ ಕಿಶೋರ್ ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಒಬ್ಬ ತಿಳಿದ ವ್ಯಕ್ತಿ ಹೇಳಿದ್ದಾನೆ ಅಂದರೆ ಅದೇನು ಅಂತ ಕೇಳಿ ಅರ್ಥ ಮಾಡಿಕೊಳ್ಳಬೇಕು ಎಂದಿರುವ ಕಿಶೋರ್ ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ ಎಂದಿದ್ದಾರೆ.ಭಾಷೆಯನ್ನು ಭಾಷೆಯಾಗಿ ನೋಡಿ ಎಂದಿದ್ದಾರೆ. ತಮಿಳಿನಿಂದ ಕನ್ನಡ ಬಂದಿದ್ದರೆ ಸರಿ ಎಂದಿದ್ದಾರೆ.
ಭಾಷೆಗಳ ಬಗ್ಗೆ ಬಹಳಷ್ಟು ಥಿಯರಿಗಳಿವೆ ಎಂದಿರುವ ಕಿಶೋರ್ ಒಂದೊಂದು ಭಾಷೆ ಎಲ್ಲಿಂದ ಬಂತು ಎನ್ನುವುದಕ್ಕೆ ನಿಖರವಾದ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ. ಭಾಷೆಯ ವಿಚಾರದಲ್ಲಿ ಇನ್ನೂ ಸಂಶೋಧನೆಗಳು ನಡೆಯುತ್ತಲೆ ಇವೆ, ಒಂದು ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದರೆ ಅದನ್ನು ಅವಮಾನ ಅಂತ ಯಾಕೆ ಅಂದುಕೊಳ್ಳಬೇಕು ? ಎಂದು ಪ್ರಶ್ನೆ ಮಾಡಿರುವ ಕಿಶೋರ್, ಕಮಲ್ ಹಾಸನ್ ಅವರ ಹೇಳಿಕೆ ಹಿಂದೆ ಕೂಡ ಒಂದು ಸಿದ್ಧಾಂತ ಇರಬಹುದು ಅವರ ಥಿಯರಿ ಏನೆಂದು ತಿಳಿದುಕೊಳ್ಳೋಣ ನನ್ನ ಪ್ರಕಾರ ಇದು ಅವಮಾನವಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವ ವಿಚಾರದ ಕುರಿತು ಕೂಡ ಮಾತನಾಡಿರುವ ಕಿಶೋರ್, ಅಧಿಕಾರದಲ್ಲಿದ್ದವರು ಏನು ಹೇಳ್ತಾರೋ ಅದು ನಡೆಯುತ್ತೆ, ಗೊತ್ತಿಲ್ಲ. ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.


Click it and Unblock the Notifications










