ಸರ್ವಾಧಿಕಾರಿ ಗೋಸುಂಬೆಗೆ ದೇಶದ ಪ್ರಧಾನಿಯೆನಿಸಿಕೊಳ್ಳುವ ನೈತಿಕ ಹಕ್ಕು, ಯೋಗ್ಯತೆ ಇದೆಯೇ?: ಕಿಶೋರ್
ನಟ ಕಿಶೋರ್ ಬರೀ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕಿಶೋರ್ ರಾಜಕೀಯ ಹಾಗೂ ಪ್ರಸಕ್ತ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬರ್ತಿದ್ದಾರೆ. ಅವರು ಬಲಪಂಥೀಯ ವಾದದ ವಿರುದ್ಧ ಮಾತನಾಡುತ್ತಾರೆ ಎನ್ನುವ ಆರೋಪವಿದೆ.
ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸರ್ಕಾರವನ್ನು ಸಾಕಷ್ಟು ಬಾರಿ ಟೀಕಿಸಿದ್ದಾರೆ. ಇತ್ತೀಚೆಗೆ ಚುನಾವಣೆ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳಿಂದ ಕಿಶೋರ್ ಹೆಚ್ಚು ಗಮನ ಸೆಳೆಯುತ್ತಾ ಬಂದಿದ್ದರು. ಪ್ರಧಾನಿ ಮೋದಿ ನೀಡಿದ ಕೆಲ ಹೇಳಿಕೆಗಳ ಬಗ್ಗೆ ಚಕಾರ ಎತ್ತಿದ್ದರು. ವ್ಯಂಗ್ಯ ಮಾಡಿ ಟೀಕಿಸಿದ್ದರು. ಸದ್ಯ ಮೋದಿ 3ನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಸಂಜೆ 7.15ಕ್ಕೆ ಈಶ್ವರನ ಹೆಸರಲ್ಲಿ 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಜೆಪಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂದಿದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ನಟ ಕಿಶೋರ್ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ.
"ಕ್ಷಮಿಸಿ, ಇದು ಬರೀ ಮನರಂಜನೆಗಾಗಿ.. ದಿನದಿನವೂ ಸುಳ್ಳು ಹೇಳಿ, ತನ್ನ ಕಾಲುನೆಕ್ಕುವ ಮಾಧ್ಯಮದ ಕೈಲೂ ಸುಳ್ಳು ಹೇಳಿಸಿ, ಮಾಡಬಾರದ ಹಗರಣ ಮಾಡಿ, ಕ್ಷಣ ಕ್ಷಣಕ್ಕೂ ಬಣ್ಣಬದಲಿಸುತ್ತಾ ಸರಕಾರಿ ಸಂಸ್ಥೆಗಳ ದುರುಪಯೋಗ ಮಾಡಿ, ಜಗತ್ತು ಕಂಡರಿಯದಷ್ಟು ನೀಚಸ್ತರದ ರಾಜಕೀಯ ಮಾಡಿನೀತಿ ನಿಯಮಗಳನ್ನು ಧೂಳೀಪಟ ಮಾಡಿದ, ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ಯಾವ ಸೈದ್ಧಾಂತಿಕ ನಿಲುವೂ ಇಲ್ಲದ ಈ ಸರ್ವಾಧಿಕಾರಿ ಗೋಸುಂಬೆಗೆ ಒಂದು ಮಹಾನ್ ದೇಶದ ಪ್ರಧಾನಿಯೆನಿಸಿಕೊಳ್ಳುವ ನೈತಿಕ ಹಕ್ಕೂ ಯೋಗ್ಯತೆಯೂ ಇದೆಯೇ? ನೀವೇ ಹೇಳಿ" ಎಂದು ಪ್ರಶ್ನಿಸಿದ್ದಾರೆ.
ಮೊದಲಿನಿಂದಲೂ ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಾ ಬರುತ್ತಿದ್ದ ನಟ ಕಿಶೋರ್ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸುಮ್ಮನಾಗಿದ್ದರು. ಚುನಾವಣೆ ಫಲಿತಾಂಶದ ದಿನ ಪ್ರಜಾಪ್ರಭುತ್ವದ ಬಗ್ಗೆ ಪೋಸ್ಟ್ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಬಳಿಕ ಇದೀಗ ಮತ್ತೆ ಪ್ರಧಾನಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. "ನಮಗ್ಯಾಕೆ ಬೇಡದ ರಾಜಕೀಯ? ಇದು ಸಾಮಾನ್ಯವಾಗಿ ಎಲ್ಲೆಡೆ ಕೇಳುವ ಮಾತು.. ಚುನಾವಣೆ ಮುಗಿದಿದೆ, ನಾವು ಜವಾಬ್ದಾರಿಯುತ ಪ್ರಜೆಯಂತೆ ಓಟು ಹಾಕಿ ಮುಗಿಸಿದ್ದೇವೆ, ಸೋಷಿಯಲ್ ಮೀಡಿಯಾದಲ್ಲಿ ಬೆರಳ ಇಂಕಿನ ಫೋಟೋ ಹಾಕಿ ಹೆಮ್ಮೆ ಪಟ್ಟಿದ್ದೇವೆ..ಭಾರತೀಯರಾದ ಸಾರ್ಥಕ ಭಾವಕ್ಕೆ ಹರ್ಷ ಪಟ್ಟು ನಿತ್ಯ ಜೀವನದಲ್ಲಿ ತೊಡಗುತ್ತೇವೆ.ಆದರೆ ಮತವನ್ನ ದಾನ ಮಾಡಿ ಕುಳಿತರೆ ದೇಶ ಉದ್ಧಾರವಾಗುವುದಿಲ್ಲ. ಇಷ್ಟು ದಿನ ಹಾಗೆ ಕುಳಿತರೂ ಅದರ ಶಕ್ತಿಗೆ ತಕ್ಕಂತಲ್ಲದಿದ್ದರೂ ಅಲ್ಲಲ್ಲಿ ಯಾರೋ ಪ್ರಾಮಾಣಿಕರ ಪ್ರಯತ್ನದಿಂದ ಕುಂಟುತ್ತಾ ಸಾಗುತ್ತಿತ್ತು"
"ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಧರ್ಮದ ಆಧಾರದ ಮೇಲೆ ದೇಶದ ಜನಗಳನ್ನು ಒಡೆಯುವ ಜನ 10 ವರ್ಷದಿಂದ ಅಧಿಕಾರ ಹಿಡಿದಿದ್ದಾರೆ. ದೇಶವನ್ನು ಎಲ್ಲಾ ನಿಟ್ಟಿನಲ್ಲೂ ಹಾಳು ಮಾಡಿ ದ್ವೇಷ, ಮೌಢ್ಯದ ಕೂಪಕ್ಕಿಳಿಸಿಬಿಟ್ಟಿದ್ದಾರೆ. ಮತ್ತೆ ದೇಶವನ್ನು ಪ್ರಗತಿಯ ಹಾದಿಗೆ ತರಲು ದಶಕಗಳೇ ಬೇಕು. ಹಾಗಾಗಿ ಯಾರು ಅಧಿಕಾರಕ್ಕೆ ಬಂದರೂ ಚುನಾವಣೆಯ ನಂತರವೂ ನಾವು ಜಾಗೃತರಾಗಿದ್ದು ರಾಜಕಾರಿಣಿಗಳ ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಲೇ ಇದ್ದರಷ್ಟೇ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ದೇಶದಲ್ಲಿ ಮಿಕ್ಕಿರುವುದನ್ನು ಲೂಟಿ ಮಾಡಿ ಮುಗಿಸಿ ಕೊನೆಗೆ ಧರ್ಮ ಜಾತಿಯ ಮಂಕು ಬೂದಿಯೆರಚಿ ಮತ್ತೆ ಓಟು ಕೇಳಲು ಮಾನ ಮರ್ಯಾದೆಯಿಲ್ಲದೇ ಬಂದು ನಿಲ್ಲುತ್ತಾರೆ"
"ಅಂಬೇಡ್ಕರರ ಮಾತು ನೆನಪಿರಲಿ ಸದಾ ತಿಳಿವುಳ್ಳವರಾಗಿರಿ ಸದಾ ಸಂಘಟಿತರಾಗಿರಿ ಸದಾ ಜಾಗೃತರಾಗಿರಿ" ಎಂದು 5 ದಿನಗಳ ಹಿಂದೆ ನಟ ಕಿಶೋರ್ ಪೋಸ್ಟ್ ಮಾಡಿದ್ದರು. ಇದೀಗ ಪ್ರಧಾನಿ ಪದಗ್ರಹಣದ ಬಳಿಕ ಮತ್ತೆ ಪೋಸ್ಟ್ ಮಾಡಿದ್ದಾರೆ. ಎಂದಿನಂತೆ ಕಿಶೋರ್ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ.


Click it and Unblock the Notifications











