"ನಿಮ್ ಮಾಮನೊ.. ನಿಮ್ ಅತ್ತೇನೊ..ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೇಡಿ": ಕಿಚ್ಚನಿಗೆ ಪ್ರಕಾಶ್ ರಾಜ್ ಟಾಂಗ್
ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಅಣಕವಾಡಿದ್ದಾರೆ. ಸಾಲು ಸಾಲು ಟ್ವೀಟ್ಗಳ ಮೂಲಕ ಸುದೀಪ್ ನಡೆಯನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎನ್ನುವ ಗುಸುಗುಸು ಕೇಳಿ ಬಂದಾಗ ಪ್ರಕಾಶ್ ರಾಜ್ ಅದೆಲ್ಲಾ ಸುಳ್ಳು, "ನಮ್ಮ ಕಿಚ್ಚ ಮಾರಿಕೊಳ್ಳುವವರು ಅಲ್ಲ" ಎಂದು ಟ್ವೀಟ್ ಮಾಡಿದ್ದರು.
ಬುಧವಾರ ನಟ ಸುದೀಪ್, ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದ್ದರು. ಇದನ್ನು ಸಾಕಷ್ಟು ಜನ ವಿರೋಧಿಸಿದ್ದರು. ಬಹುತೇಕ ಸುದೀಪ್ ಅಭಿಮಾನಿಗಳಿಗೆ ಈ ವಿಚಾರ ಈ ಕ್ಷಣಕ್ಕೂ ಇಷ್ಟವಿಲ್ಲ. ಇನ್ನು ಸುದೀಪ್ ಬಿಜೆಪಿ ಪಕ್ಷ ಸೇರುವುದಿಲ್ಲ ಎನ್ನುವ ಭರವಸೆಯಲ್ಲಿದ್ದ ಪ್ರಕಾಶ್ ರಾಜ್ಗೂ ಇದು ಶಾಕ್ ತಂದಿತ್ತು. ಕೂಡಲೇ ಟ್ವೀಟ್ಗಳ ಮೂಲಕ ಇದಕ್ಕೆ ಬೇಸರ ವ್ಯಕ್ತಪಡಿಸಿದರು.

"ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ.ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ ..ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ.. #justasking" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು.
ಇದೀಗ ಮತ್ತೊಂದು ಟ್ವೀಟ್ ಮಾಡಿ ಪ್ರಕಾಶ್ ರಾಜ್ ಸುದೀಪ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಸುದೀಪ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ "ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ನಾನು ಚಿಕ್ಕಂದಿನಿಂದಲೇ ಮಾಮಾ ಎಂದು ಕರೆಯುತ್ತಾ ಬಂದಿದ್ದೇನೆ. ಈಗಲೂ ಅವರನ್ನು ಹಾಗೆಯೇ ಕರೆಯುತ್ತೇನೆ. ಅದನ್ನು ನೀವು ಬೇರೆ ರೀತಿ ತಗೋಬೇಡಿ. ನಾನು ಚಿತ್ರರಂಗಕ್ಕೆ ಬರುವಾಗ ತುಂಬಾ ಕಷ್ಟದ ದಿನಗಳಲ್ಲಿ ಇದ್ದೆ. ಅವತ್ತು ನನಗೆ ಸಪೋರ್ಟ್ ಮಾಡಿದ್ದರು. ಹಾಗಾಗಿ ಅವರಿಗೆ ನನ್ನ ಬೆಂಬಲ. ಆ ವ್ಯಕ್ತಿ ನನ್ನ ಸಪೋರ್ಟ್ ಇರುತ್ತದೆ" ಎಂದಿದ್ದರು.
ಸದ್ಯ ಸುದೀಪ್, ಸಿಎಂ ಬೊಮ್ಮಾಯಿಯವರನ್ನು ಮಾಮಾ ಎಂದು ಕರೆದ ವಿಚಾರವನ್ನು ಇಟ್ಟುಕೊಂಡು "ನೋಡ್ರಪ್ಪ... ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30% ಕೊಡಿ..... ಅದು ನಿಮ್ಮಿಷ್ಟ .. ಆದ್ರೆ .. ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ .. ಅಷ್ಟೆ..ಅಷ್ಟೇ.. #justasking" ಎಂದು ಪ್ರಕಾಶ್ ಮಾಡಿ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

ಮತ್ತೊಂದು ಟ್ವೀಟ್ನಲ್ಲಿ ಸುದೀಪ್ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರುವ ಕುರಿತಾದ ಕಾರ್ಟೂನ್ನ ಶೇರ್ ಮಾಡಿ "ನೀವು ಈಗ ಹೊರಲೇಬೇಕಾದ ಬೇರೆ ಬಣ್ಣದ ಲೋಕದ ಭಾರ .. #justasking" ಎಂದು ಬರೆದುಕೊಂಡಿದ್ದಾರೆ.
ಮೊನ್ನೆ ಸುದ್ದಿಗೋಷ್ಠಿಯಲ್ಲಿ "ನಮ್ಮ ಕಿಚ್ಚ ಮಾರಿಕೊಳ್ಳುವವರು ಅಲ್ಲ" ಎಂದು ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ ಬಗ್ಗೆ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದರು. "ಪ್ರಕಾಶ್ ರಾಜ್ ಒಳ್ಳೆಯ ನಟ. ಅವರೊಟ್ಟಿಗೆ 'ರನ್ನ' ಸಿನಿಮಾದಲ್ಲಿ ನಟಿಸಿದ್ದೆ. ಅವರೊಟ್ಟಿಗೆ ಮತ್ತೆ ನಟಿಸಲು ಕಾತರದಿಂದ ಕಾಯುತ್ತಿದ್ದೇನೆ" ಎಂದಷ್ಟೇ ಹೇಳಿ ಸುಮ್ಮನಾದರು.
ಕರ್ನಾಟಕ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಸುದೀಪ್ ಬೆಂಬಲ ಪಕ್ಷಕ್ಕೆ ಸಿಕ್ಕಿರುವುದು ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೆಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಪ್ರಚಾರದ ಕಣ ರಂಗೇರುತ್ತಿದೆ. ಆದರೆ ಬಿಜೆಪಿ ಮಾತ್ರ ಇನ್ನು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಈಗಾಗಲೇ ಹೈ ಕಮಾಂಡ್ಗೆ ಪಟ್ಟಿ ರವಾನೆಯಾಗಿದ್ದು ಇನ್ನೆರಡು ದಿನಗಳಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಂದ ಹಾಗೆ ಸುದೀಪ್ ಬಿಜೆಪಿ ಯಾವೆಲ್ಲಾ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.


Click it and Unblock the Notifications











