''ರೇಣುಕಾಸ್ವಾಮಿ ಕುಟುಂಬದ ನೋವು ನನ್ನನ್ನೂ ತುಂಬಾ ಕಾಡುತ್ತಿತ್ತು'' - ಪ್ರಥಮ್..!
ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ಕೆಲ ರಾಜಕಾರಣಿಗಳ ಮೊಮ್ಮಗ, ಇನ್ನೂ ಕೆಲ ರಾಜಕಾರಣಿಗಳ ತಮ್ಮನ ಮಗ ಹೀಗೆ ನಾನಾ ನಾನಾ ರೂಪದಲ್ಲಿ ಗುರುತಿಸಿಕೊಂಡವರು ಪ್ರಥಮ್. ಇಂಥ ಪ್ರಥಮ್ ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಎದುರಾಳಿಗಳಿದ್ದಾರೆ. ಯಾರದ್ದೋ ಹೆಸರು, ಇನ್ಯಾರದ್ದೋ ಮುಖ ಅಂಟಿಸಿಕೊಂಡು ಪ್ರಥಮ್ ಅವರನ್ನು ಹೀನಾಮಾನವಾಗಿ ನಿಂದಿಸಿದವರು ಇದ್ದಾರೆ. ಆದರೂ ಪ್ರಥಮ್ ಹೆದರಿಲ್ಲ. ಬೆದರಿಲ್ಲ.
ಯಾರು ಏನಾದರೂ ಹೇಳಲಿ ನಾನು ಇರುವುದೇ ಹೀಗೆ ಎಂದು, ಮನಸಲ್ಲಿ ಇದ್ದಿದ್ದನ್ನು ಇದ್ದ ಹಾಗೇ ಹೇಳುತ್ತಾ ಬರುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಕನ್ನಡ ಚಿತ್ರರಂಗದ ಒಳಿತಿಗಾಗಿ ಆ ಕಡೆ ಕನ್ನಡ ಚಿತ್ರರಂಗ ಪೂಜೆ-ಹೋಮ-ಹವನ ಮಾಡುತ್ತಿದ್ದಾಗ ಪ್ರಥಮ್ ರೇಣುಕಾಸ್ವಾಮಿ ಅವರ ಕುಟುಂಬವನ್ನು ಭೇಟಿ ಮಾಡಿ ಬಂದಿದ್ದಾರೆ. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಸಾಂತ್ವಾನ ಹೇಳಿದ್ದಾರೆ.

ಚಿತ್ರದುರ್ಗದ ಕೊಂಡ್ಲಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಬಂದಿದ್ದೆ. ಹಾಗೆಯೇ ರೇಣುಕಾಸ್ವಾಮಿಯವರ ಮನೆಗೆ ಬಂದೆ ಎಂದಿರುವ ಪ್ರಥಮ್ ಇಲ್ಲಿ ಒಂದು ಕುಟುಂಬ ತನ್ನ ಮನೆಮಗನನ್ನು ಕಳೆದುಕೊಂಡಿದೆ. ಸಹನಾ ಅವರು ಅವರ ಗಂಡನನ್ನು ಕಳೆದುಕೊಂಡಿದ್ದಾರೆ. ಇವರಿಗೆ ಆಗಿರುವುದು ಅಕ್ಷಮ್ಯ ಅದು ಆಗಬಾರದಿತ್ತು ಎಂದಿದ್ದಾರೆ. ನಾನು ಸುಮ್ನೆ ವಿಷಾದದ ಮಾತುಗಳನ್ನಾಡಲು ಬಂದಿಲ್ಲ, ರೇಣುಕಾ ಸ್ವಾಮಿ ಅವರನ್ನು ಬೈಯ್ಯುವವರು ಇವರೆಲ್ಲರ ಬಗ್ಗೆ ಒಮ್ಮೆ ಯೋಚನೆ ಮಾಡಬೇಕು ಎಂದಿರುವ ಪ್ರಥಮ್, ನಿಮ್ಮ ಕುಟುಂಬದಲ್ಲಿಯೇ ಹೀಗಾಗಿದ್ದರೆ ಎಂದು ಯೋಚಿಸಿ ಕಾಮೆಂಟ್ ಮಾಡಿದರೆ ಒಳ್ಳೆಯದು ಅಂದಿದ್ದಾರೆ. ಮೊದಲೇ ನೊಂದ ಕುಟುಂಬವನ್ನು ಇನ್ನೂ ನೋಯಿಸುವ ಪ್ರಯತ್ನ ಮಾಡಬೇಡಿ ಎಂದು ಮನವಿಯನ್ನೂ ಮಾಡಿಕೊಂಡ ಪ್ರಥಮ್, ರೇಣುಕಾಸ್ವಾಮಿ ಅವರ ತಂದೆಗೆ ಈಗ ಮೊದಲಿಗಿಂತ ಇನ್ನೂ ಹೆಚ್ಚು ಜವಾಬ್ಧಾರಿ ಇದೆ ಎಂದಿದ್ದಾರೆ.
ಮುಂದುವರೆದು ನಾನು ಇಲ್ಲಿ ಯಾರನ್ನೋ ಸಮರ್ಥನೆ ಮಾಡಿಕೊಳ್ಳಲು ಬಂದಿಲ್ಲ, ಯಾರನ್ನು ನೋಯಿಸುವ ಉದ್ದೇಶ ನನಗೆ ಇಲ್ಲ ಎಂದಿರುವ ಪ್ರಥಮ್, ರೇಣುಕಾಸ್ವಾಮಿ ಅವರದ್ದು ತುಂಬಾನೇ ಹೀನಾಯ ಸಾವು ಈ ಕಾರಣಕ್ಕೆ ಸಹನಾ ಅವರನ್ನು ನಾನಾ ಮಾತನಾಡಿಸಬೇಕಿತ್ತು ಯಾಕೆಂದರೆ ಈ ಕುಟುಂಬದ ನೋವು ನನ್ನನ್ನೂ ತುಂಬಾ ಕಾಡುತ್ತಿತ್ತು ಎಂದಿದ್ದಾರೆ.

ಇನ್ನೂ, ದರ್ಶನ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪವನ್ನೊತ್ತು ಜೈಲು ಪಾಲಾಗಿ ಎರಡು ತಿಂಗಳಾಗಿವೆ. ಆದರೆ ಈ ಎರಡು ತಿಂಗಳಿನಲ್ಲಿ ದರ್ಶನ್ ಪರವಾಗಿ ಅನೇಕರು ಬೆಂಬಲದ ಧ್ವಜ ಹಾರಿಸಿದ್ದಾರೆ. ದರ್ಶನ್ ಪರ ಮಾತನಾಡಿದ್ದಾರೆ. ಎಲ್ಲ ಅವರವರ ಭಾವಕ್ಕೆ ಅವರವರ ಭಕುತಿಗೆ. ಈ ವಿಚಾರದ ಕುರಿತು ಕೂಡ ಮಾತನಾಡಿರುವ ಪ್ರಥಮ್, ಜನ ಯಾರ ಪರ ಮತ್ತು ವಿರೋಧ ಇದ್ದಾರೆ ಅನ್ನುವುದು ಅವರಿಗೆ ಬಿಟ್ಟಿದ್ದು ನಾನು ಅವರ ವಿವೇಚನೆಗೆ ಬಿಡುತ್ತೇನೆ ಎಂದಿದ್ದಾರೆ. ಆದರೆ, ನಿಮ್ಮ ಮಾತುಗಳಿಂದ ರೇಣುಕಾ ಸ್ವಾಮಿ ಅವರ ಕುಟುಂಬಕ್ಕೆ ನೋವಾಗುತ್ತೆ ಎನ್ನುವುದನ್ನು ತಿಳಿದು ಮಾತನಾಡಿ ಎಂಬ ಕಿವಿ ಮಾತನ್ನು ಹೇಳಿದ್ದಾರೆ. ಕೆಲವರು ತುಂಬಾ ಅತಿರೇಕದಿಂದ ಮಾತನಾಡ್ತರೆ ಎಂದಿರುವ ಪ್ರಥಮ್, ಹಿಂದೆ ನಾನೊಂದು ಮಾತು ಹೇಳಿದ್ದೇ, ಆ ಮಾತನ್ನು ತಿರುಚಲಾಯಿತು, ನನ್ನ ಮನೆಯ ಮುಂದೆ ಸೆಕ್ಷನ್ 144 ಹಾಕಲಾಯಿತು ಎಂದಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಕಲಾವಿದರ ಸಂಘದಲ್ಲಿ ನಡೆದ ಪೂಜೆಯ ಕುರಿತು ಕೂಡ ಮಾತನಾಡಿದ ಪ್ರಥಮ್, ನನಗೆ ಅದಕ್ಕೆಲ್ಲ ಸಮಯ ಇಲ್ಲ. ನಾನು ಬೆಳ್ಳಗ್ಗೆ ಈಶ್ವರನ ಪೂಜೆ ಮಾಡ್ತೀನಿ, ಮನೆ ದೇವ್ರು ಕಬ್ಬಾಳಮ್ಮಗೆ ನಮಸ್ಕಾರ ಮಾಡ್ತೀನಿ, ಬೇಕಿದ್ದರೆ ಪೂಜೆ ಜೊತೆ ಉರುಳು ಸೇವೆಯನ್ನೂ ಕೂಡ ಮಾಡ್ತೀನಿ ಆದರೆ ಇವರ ಕುಟುಂಬಕ್ಕೆ ಆದ ನೋವು ತುಂಬಲು ಸಾಧ್ಯವಾ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ರೇಣುಕಾ ಸ್ವಾಮಿ ಪತ್ನಿ ಸಹನಾ ಅವರಿಗೆ ಆದ ಅನ್ಯಾಯ ಸರಿಪಡಿಸಲು ಸಾಧ್ಯಾನಾ ಎಂದಿದ್ದಾರೆ. ಯಾವುದೇ ವ್ಯಕ್ತಿಗಿಂತ ನಮಗೆ ಚಿತ್ರರಂಗ ದೊಡ್ಡದು. ಹಲವು ಕಲಾವಿದರು ಅಲ್ಲಿ ಊಟ ಮಾಡಿ, ಭವಿಷ್ಯ ಕಟ್ಟಿಕೊಂಡಿದ್ದಾರೆ. ಹಾಗಾಗಿ ಚಿತ್ರರಂಗದ ಭವಿಷ್ಯಕ್ಕಾಗಿ ಪೂಜೆ ಮಾಡಿದಾರೆ ಅಂದುಕೊಳ್ಳೋಣ. ಕಲಾವಿದರ ಸಂಘ ನನ್ನ ಮನೆಯಿಂದ 4 ಕಿ.ಮೀ ದೂರದಲ್ಲೇ ಇದೆ. ನಾನು ಆ ಪೂಜೆಗೆ ಹೋಗಕ್ಕಾಗಲಿಲ್ಲ. ಆದ್ರೆ 350 ಕಿಮಿ ದೂರದಲ್ಲಿರುವ ಇವರನ್ನು ಕಾಣಲು ಮನಸ್ಸು ಬಯಸುತ್ತಿತ್ತು ಎಂದು ಕೂಡ ಪ್ರಥಮ್ ಹೇಳಿದ್ಧಾರೆ.


Click it and Unblock the Notifications











