ಟಿಆರ್ಪಿಗಾಗಿ ಸ್ಟಾರ್ಸ್ ಮುಖಕ್ಕೆ ಮಸಿ ಬಳೀತ್ತಿದ್ದಾರೆ.. ನಾನಂತೂ ದರ್ಶನ್ ಸರ್ ಪರ; ಪ್ರೇಮ್
ಕನ್ನಡ ಚಿತ್ರರಂಗದಲ್ಲಿ ದರ್ಶನ್ ಫ್ಯಾನ್ಸ್ vs ನಟಿ ರಮ್ಯಾ ನಡುವಿನ ವಾರ್ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟಾಕ್ಕಿದೆ. ಕಳೆದೊಂದು ವಾರದಿಂದ ಈ ವಿಚಾರ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ಇನ್ನು ಬಿಗ್ಬಾಸ್ ಖ್ಯಾತಿಯ ಪ್ರಥಮ್ ಕೂಡ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಕೆಂಡ ಕಾರಿದ್ದಾರೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ನಟ ಲವ್ಲಿಸ್ಟಾರ್ ಪ್ರೇಮ್ ಮಾತನಾಡಿದ್ದಾರೆ.
ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ ಎಂದು ನಟಿ ರಮ್ಯಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. 4 ಮಂದಿ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ದರ್ಶನ್ ಅಭಿಮಾನಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಥಮ್ ದೂರು ನೀಡಿದ್ದಾರೆ. ಈ ಬಗ್ಗೆ ಕೂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೊದಲಿನಿಂದಲೂ ನಟ ದರ್ಶನ್ ಪರ ನಟ ಪ್ರೇಮ್ ಮಾತನಾಡುತ್ತಾ ಬರ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪರ ಪ್ರೇಮ್ ಬ್ಯಾಟ್ ಬೀಸಿದ್ದರು.

ಪ್ರಥಮ್ ಆರೋಪದ ಬಗ್ಗೆ ಪ್ರೇಮ್ ಪ್ರತಿಕ್ರಿಯಿಸಿ "ಆಧಾರ ಇಲ್ಲದೇ ಯಾರು ಮೇಲೂ ಅಪವಾದ ಹೊರಿಸಬಾರದು. ಅದು ಯಾರೇ ಆಗಿರಲಿ. ಆಧಾರ ಇಲ್ಲದೇ ಒಬ್ಬ ಸ್ಟಾರ್ ನಟನ ಮೇಲೆ ಅಪವಾದ ಹೊರಿಸುವ ಮುನ್ನ ಯೋಚಿಸಬೇಕು. ಇದು ತಪ್ಪು ಎಂದೇ ಹೇಳ್ತೀನಿ. ಪ್ರಥಮ್ ಮಾಡಿರುವುದು 100% ತಪ್ಪು. ದರ್ಶನ್ ಅವ್ರು ಹೇಳಿ ಹೊಡೆಸಿದ್ದಾರೆ ಎನ್ನುವುದಕ್ಕೆ ಪ್ರಥಮ್ ಬಳಿ ಸಾಕ್ಷಾಧಾರ ಏನಿದೆ? ಇದ್ದರೆ ಸಾಬೀತು ಮಾಡಲಿ. ದರ್ಶನ್ ಅವ್ರು ಆ ಇಮೇಜ್ ಬೆಳೆಸಿಕೊಳ್ಳಲು ಎಷ್ಟು ಕಷ್ಟಪಟ್ಟಿದ್ದಾರೆ. ಆಧಾರ ಇಲ್ದೆ ಸುಮ್ನೆ ಆರೋಪ ಹೊರಿಸಬಾರ್ದು" ಎಂದಿದ್ದಾರೆ.
ದರ್ಶನ್ ಅವರನ್ನು ಮೊದಲಿನಿಂದಲೂ ನಾನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಅವ್ರನ್ನು ಬಿಟ್ಟುಕೊಡುವ ಮಾತೇಯಿಲ್ಲ. ಆದರೆ ತಪ್ಪು ಯಾರೇ ಮಾಡಿದ್ರು ತಪ್ಪೇ ಎಂದು ಪ್ರೇಮ್ ಹೇಳಿದ್ದಾರೆ. ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಮಸೇಜ್ ಕಳುಹಿಸಿದ ಕಿಡಿಗೇಡಿಗಳ ಬಗ್ಗೆ ಮಾತನಾಡಿ "ಕೆಟ್ಟ ಮೆಸೇಜ್ ಯಾರು ಮಾಡಬಾರದು. ಅದಕ್ಕೆ ನನ್ನೆ ವಿರೋಧ ಇದೆ. ಹೆಣ್ಣು ಮಕ್ಕಳು, ಗಂಡು ಮಕ್ಕಳು, ಹೀರೊ, ಹೀರೋಯಿನ್ ಯಾರ ಬಗ್ಗೆಯೂ ಕೆಟ್ಟ ಕಾಮೆಂಟ್ ಮಾಡಬೇಡಿ. ನೀವು ಅವ್ರನ್ನು ಬೈದ್ರೆ ಪರವಾಗಿಲ್ಲ. ಅವ್ರ ಅಕ್ಕ, ತಂಗಿ, ಮನೆಯವರನ್ನೆಲ್ಲಾ ಕರೆದು ಬೈಯ್ತಾರೆ. ಅದು ಕೆಟ್ಟ ಬೆಳವಣಿಗೆ ಬೇಡ" ಎಂದು ತಿಳಿಸಿದ್ದಾರೆ.

"ಸ್ಟಾರ್ ಫ್ಯಾನ್ಸ್ ವಾರ್ ತಪ್ಪು. ಸ್ಟಾರ್ ಸ್ಟಾರ್ ಕೂಡ ಅಭಿಮಾನಿಗಳಿಗೆ ಕೆಟ್ಟ ಸಂದೇಶ ಕೊಡಲ್ಲ. ಯಾರನ್ನೋ ಹೊಡೆಯಿರಿ, ಕೆಟ್ಟದಾಗಿ ಬೈಯ್ಬೇಕು ಎಂದು ಹೇಳಲ್ಲ. ಕೆಟ್ಟ ಮನಸ್ಥಿತಿ ಇರುವ ಕೆಲವ್ರು, ಯಾವುದೋ ನಟನ ಬಗ್ಗೆ ಕಾಮೆಂಟ್ ಮಾಡಿ ಅದನ್ನು ಬೇರೆ ಸ್ಟಾರ್ಸ್ ಮೇಲೆ ಅವರ ಅಭಿಮಾನಿಗಳ ಹಾಕ್ತಾರೆ. ಇವ್ರ ಟಿಆರ್ಪಿಗಾಗಿ ಇವ್ರ ಪ್ರೇಜ್ ಸಬ್ಸ್ಕ್ರೈಬರ್ ಜಾಸ್ತಿ ಆಗಬೇಕು ಅಂತ ಹಿಂಗೆಲ್ಲಾ ಮಾಡ್ತಾರೆ. ಎಲ್ಲಾ ಸ್ಟಾರ್ಸ್ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಾರೆ" ಎಂದು ಪ್ರೇಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರೇಮ್ ನಟನೆಯ 'ಚೌಕ' ಚಿತ್ರದ ಅತಿಥಿ ಪಾತ್ರದಲ್ಲಿ ದರ್ಶನ್ ನಟಿಸಿದ್ದರು. ದರ್ಶನ್ ನಟನೆಯ 'ಯಜಮಾನ' ಚಿತ್ರದ ಹಾಡೊಂದರ ಸಣ್ಣ ಝಲಕ್ನಲ್ಲಿ ಪ್ರೇಮ್ ಮಿಂಚಿದ್ದರು. ಈ ಹಿಂದೆ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ್ದ ಪ್ರೇಮ್ "ಚಿತ್ರರಂಗಕ್ಕೆ ದರ್ಶನ್ ಕೊಡುಗೆ ಬಹಳಷ್ಟಿದೆ. ಆ ಕೇಸ್ ಏನಾಗಿದೆ ಎನ್ನುವುದು ಗೊತ್ತಿಲ್ಲ. ಅದು ಏನೇ ಆಗಿರಲಿ, ಅವರು ನಿರಪರಾಧಿಯಾಗಿ ಜೈಲಿನಿಂದ ಹೊರಬರಲಿ" ಎಂದು ಪ್ರೇಮ್ ಹೇಳಿದ್ದರು.


Click it and Unblock the Notifications











