Puneeth Rajkumar: ಹಿರಿಯೂರಿನಲ್ಲಿ ರಾತ್ರೋರಾತ್ರಿ ನಟ ಪುನೀತ್ ರಾಜ್ಕುಮಾರ್ ಪ್ರತಿಮೆ ನಿರ್ಮಾಣ
ನಟ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ವರ್ಷಗಳಾದರೂ ಇನ್ನೂ ಅವರ ಅಗಲಿಕೆಯನ್ನು ಕರುನಾಡಿನ ಜನರು ಮರೆಯಲಾಗುತ್ತಿಲ್ಲ. ಅವರು ನಮ್ಮ ಜೊತೆಗಿಲ್ಲ ಎಂಬ ನಿಜವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯ ಮೂಲೆ ಮೂಲೆಗಳಲ್ಲೂ ಪುನೀತ್ ಕಟೌಟ್ಗಳು, ಬ್ಯಾನರ್ಗಳು ನಿಂತಿವೆ. ಹಲವೆಡೆ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.
ರಾಜ್ಯದ ಹಳ್ಳಿ ಹಳ್ಳಿಗೂ ನಟ ಪುನೀತ್ ರಾಜ್ಕುಮಾರ್ ತಲುಪಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಪುನೀರ್ ರಾಜ್ಕುಮಾರ್ ಕಾಣಸಿಗುತ್ತಾರೆ. ಹಾಗೆಯೇ ಅವರ ಪ್ರತಿಮೆಗಳನ್ನು ಜನ ನಿರ್ಮಾಣ ಮಾಡಿದ್ದಾರೆ. ಇದೇ ರೀತಿ ಇತರ ಜಿಲ್ಲೆ೪ಗಳನ್ನು ಅಪ್ಪು ಪ್ರತಿಮೆಗಳು ರಾರಾಜಿಸುತ್ತಿವೆ. ಆದರೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ರಾತ್ರೋರಾತ್ರಿ ನಟ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಪ್ರತಿಮೆ ತಲೆ ಎತ್ತಿದೆ.

ರಾತ್ರೋರಾತ್ರಿ ಪುನೀತ್ ರಾಜ್ಕುಮಾರ್ ಪ್ರತಿಮೆ ನಿರ್ಮಾಣ
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ರಾತ್ರೋರಾತ್ರಿ ಎರಡು ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಜನರ ಕುತೂಹಲಕ್ಕೆ ಕಾರಣವಾಗಿದೆ. ಹಿರಿಯೂರು ನಗರದ ಇಂದಿರಾ ಕ್ಯಾಂಟೀನ್ ಬಳಿ ಇರುವ ನೂತನ ಬಿಇಓ ಕಚೇರಿ ಮುಂಭಾಗದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ನಿರ್ಮಾಣ ಮಾಡಿ ಆ ಪ್ರತಿಮೆಗೆ ಕೆಂಪು ಬಣ್ಣದ ಬಟ್ಟೆಯನ್ನು ಸುತ್ತಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಈ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಪ್ರತಿಮೆ ಅನಾವರಣ ಯಾವಾಗ ಎಂಬ ಮಾಹಿತಿ ಲಭ್ಯವಾಗಿಲ್ಲ. ಕೆಂಪು ಬಟ್ಟೆಯಲ್ಲಿರುವ ಆ ಮೂರ್ತಿಯನ್ನು ದೂರದಿಂದ ನೋಡಿದರೂ ಅದು ಪುನೀತ್ ರಾಜ್ ಕುಮಾರ್ ಪ್ರತಿಮೆ ಎಂಬುದು ಕಾಣಿಸುತ್ತಿದೆ.
ರಾಷ್ಟ್ರ ಕವಿ ಕುವೆಂಪು ಪ್ರತಿಮೆ
ಮತ್ತೊಂದು ಕಡೆ ರಾಷ್ಟ್ರ ಕವಿ ಕುವೆಂಪು ಅವರ ಪ್ರತಿಮೆಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ನಗರದ ರಂಜಿತಾ ಹೋಟೆಲ್ ಮುಂಭಾಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಎರಡು ಪ್ರತಿಮೆಗಳನ್ನು ಕರವೇ ಕಾರ್ಯಕರ್ತರು ಪ್ರತಿಷ್ಠಾಪಿಸಿದ್ದಾರೆ. ಇನ್ನು ಈ ಎರಡು ಪ್ರತಿಮೆಗಳನ್ನು ಬೆಂಗಳೂರಿನಿಂದ ತರಲಾಗಿದೆ ಎನ್ನಲಾಗಿದೆ. ಈ ಘಟನೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇನ್ನು ನಟ ಪುನೀತ್ ರಾಜ್ ಕುಮಾರ್ ಹಾಗೂ ಕುವೆಂಪು ಅವರ ಪ್ರತಿಮೆ ನಿರ್ಮಾಣ ಬಗ್ಗೆ ಕನ್ನಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಕೂಡ ಈ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.


Click it and Unblock the Notifications










