ಅಳಿಯನ ಬಗ್ಗೆ ಬಂದ ಆಪಾದನೆಗೆ ನಟ ರಾಜೇಶ್ ಗರಂ!
Recommended Video

ಮೀಟೂ ಅಭಿಯಾನಕ್ಕೆ ಈಗ ನಟಿ ಶೃತಿ ಹರಿಹರನ್ ಕೂಡ ಸೇರಿಕೊಂಡಿದ್ದಾರೆ. ತಮಗೆ ಸಹ ಲೈಂಗಿಕ ದೌರ್ಜನ್ಯದ ಕೆಟ್ಟ ಅನುಭವ ಆಗಿದೆ ಎಂದು ನಟಿ ಶ್ರುತಿ ಹರಿಹರನ್ ಹೇಳಿಕೊಂಡಿದ್ದಾರೆ.
'ಸುಧಾ' ಮ್ಯಾಗಜಿನ್ ನ ಸಂದರ್ಶನದಲ್ಲಿ ಮಾತನಾಡಿದ್ದ ಶ್ರುತಿ ನಂತರ ತಮ್ಮ ಫೇಸ್ ಬುಕ್ ಖಾತೆಯಲ್ಲಿಯೂ ಆ ಬಗ್ಗೆ ಬರೆದುಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ಅವರು 'ವಿಸ್ಮಯ' ಸಿನಿಮಾದಲ್ಲಿ ನಟಿಸುವಾಗ ನನ್ನ ಜೊತೆಗೆ ಅಸಭ್ಯವಾಗಿ ನಡೆದುಕೊಂಡರು, ಹಾಗೂ ರೆಸಾರ್ಟ್ ಗೆ ಬಾ ಎಂದು ಕರೆದರು ಎಂದು ಶ್ರುತಿ ಆರೋಪಿಸಿದ್ದಾರೆ.
ಈ ಘಟನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸದ್ಯ ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಈಗ ಒಂದು ರೋಗ ಶುರುವಾಗಿದೆ ಅಷ್ಟೇ
''ಇದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ತಿಳಿದಿರುವ ಹಾಗೆ ಹೇಳುವುದಾದರೆ, ಅರ್ಜುನ್ ಸುಮಾರು ವರ್ಷಗಳಿಂದ ನಟಿಸುತ್ತಿದ್ದಾರೆ. ಎಷ್ಟೋ ನಟಿಯರ ಜೊತೆಗೆ ನಟಿಸಿದ್ದಾರೆ. ಹಿಂದಿನಿಂದ ಇವತ್ತಿನವರೆಗೆ ಸಾಕಷ್ಟು ನಟಿಯರ ಜೊತೆಗೆ ಅಭಿನಯಿಸಿದ್ದರೂ ಒಂದು ಆರೋಪ ಇರಲಿಲ್ಲ. ಈಗ ಒಂದು ರೋಗ ಶುರುವಾಗಿದೆ ಅಷ್ಟೇ.'' - ರಾಜೇಶ್, ಹಿರಿಯ ನಟ

ನಟರೆಲ್ಲ ಕೆಟ್ಟವರು ಎಂದು ಹೇಳುವುದು ಯಾವ ನ್ಯಾಯ
''ನಟಿಯರು 8, 10 ವರ್ಷಗಳ ಹಿಂದೆ ನಡೆದಿದೆ ಎಂದು ಏನೇನೋ ಹೇಳುವುದು ಎಷ್ಟು ಸರಿ. ಸಿನಿಮಾ ನಟರೆಲ್ಲ ಕೆಟ್ಟವರು ಎಂದು ಹೇಳುವುದು ಯಾವ ನ್ಯಾಯ. ನಾನಾ ಪಾಟೇಕರ್ ಅವರ ಮೇಲೆ ಕೂಡ ಇದೇ ರೀತಿ ಆಗಿತ್ತು. 25 ವರ್ಷಗಳಿಂದ ಏನೂ ಆರೋಪ ಇಲ್ಲದ ವ್ಯಕ್ತಿಯ ಮೇಲೆ ಈಗ ರೀತಿ ಹೇಳುತ್ತಿದ್ದಾರೆ ಎಂದರೆ ಏನು.?'' - ರಾಜೇಶ್, ಹಿರಿಯ ನಟ

ನಾನು ಅವರಿಗೆ ಸರಿಯಾಗಿ ಚಾಟಿ ಬೀಸುತ್ತೇನೆ
''ಶ್ರುತಿ ಹರಿಹರನ್ ಗೆ ನನ್ನ ಹತ್ತಿರ ಮಾತನಾಡುವುದಕ್ಕೆ ಹೇಳಿ. ನಾನು ಅವರಿಗೆ ಸರಿಯಾಗಿ ಚಾಟಿ ಬೀಸುತ್ತೇನೆ. ಅರ್ಜುನ್ ಸರ್ಜಾ ಆ ರೀತಿಯ ಹುಡುಗ ಅಲ್ಲ. ಆತ ಸಂಭಾವಿತ. ಇನ್ನೊಬ್ಬರನ್ನು ಕೆಣಕುವುದಾಗಲಿ, ಕಾಮುಕ ದೃಷ್ಟಿಯಿಂದ ನೋಡುವುದಾಗಲಿ ಮಾಡುವವನಲ್ಲ. ಅವನ ಬಗ್ಗೆ ಏನೇನ್ನೋ ಮಾತನಾಡಿದರೆ ಸುಮ್ಮನೆ ಇರೋಲ್ಲ.'' - ರಾಜೇಶ್, ಹಿರಿಯ ನಟ

ಮಾನ ನಷ್ಟ ಮೊಕ್ಕದ್ದಮೆ ಹಾಕುವುದು ಬಾಕಿ ಇದೆ
''ಇದುವರೆಗೆ ಅರ್ಜುನ್ ಮೇಲೆ ಒಂದು ಸಣ್ಣ ಆಪಾದನೆ ಕೂಡ ಬಂದಿಲ್ಲ. ಕೇಸ್ ಹಾಕಿ ಮಾನ ನಷ್ಟ ಮೊಕ್ಕದ್ದಮೆ ಹಾಕುವುದು ಬಾಕಿ ಇದೆ. ನಿನ್ನೆ ಮೊನ್ನೆ ಬಂದ ಈ ನಟಿಯರಿಗೆ ಸರಿಯಾಗಿ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ. ಇವರು ಏನು ಆಪಾದನೆ ಮಾಡುವುದು. ಇದೆಲ್ಲ ಸುಳ್ಳು. ಈಗ ಮೀ ಟೂ ಗಾಳಿ ಬೀಸಿದೆ. ನಿಜಾ ಆಗಿದ್ದರೆ ಇವರು ಆಗಲೇ ಯಾಕೆ ಹೇಳಬಾರದು.'' - ರಾಜೇಶ್, ಹಿರಿಯ ನಟ

ಶ್ರುತಿ ಮಾಡಿದ ಆರೋಪ ಏನು
''ನಾನು ಅವರ ಹೆಂಡತಿಯಾಗಿ ಚಿತ್ರದಲ್ಲಿ ನಟಿಸಿದ್ದೆ. ರಿಹರ್ಸಲ್ ಮಾಡುವ ವೇಳೆ ಇನ್ನೊಂದು ಚುರು ರಿಹರ್ಸಲ್ ಮಾಡಬಹುದಲ್ವಾ ಎಂದು ಜೋರಾಗಿ ತಬ್ಬಿಕೊಂಡರು. ಆ ಅಪ್ಪುಗೆಯಿಂದ ನಾನು ತಬ್ಬಿಬ್ಬಾದೆ. ತಕ್ಷಣವೇ ನಾನು ನಿರ್ದೇಶಕರಿಗೆ ಇನ್ನು ಮುಂದೆ ರಿಹರ್ಸಲ್ ಗೆ ಬರುವುದಿಲ್ಲ, ಶೂಟಿಂಗ್ ಗೆ ಮಾತ್ರ ಬರುತ್ತೇನೆ ಎಂದು ಹೇಳಿದೆ.'' - ಶೃತಿ ಹರಿಹರನ್, ನಟಿ

'ರೆರ್ಸಾಟ್ ಗೆ ಹೋಗೋಣ ಬಾ'
''ನನ್ನ ಪ್ರತಿಭಟನೆಯಿಂದ ಅರ್ಜುನ್ ಸರ್ಜಾ ಅವರು ವಿಚಲಿತರಾದರಂತೆ ಅನಿಸಲಿಲ್ಲ. ಆದರ ನಂತರ ನನ್ನ ಜೊತೆಗೆ ಅವರು ಮಾತನಾಡಿದ ಭಾಷೆ ಕೂಡ ಸಭ್ಯವಾಗಿ ಇರಲಿಲ್ಲ. ಮತ್ತೆ ಮತ್ತೆ ಡಿನ್ನರ್ ಗೆ ಕರೆಯುತ್ತಿದ್ದರು. 'ರೆರ್ಸಾಟ್ ಗೆ ಹೋಗೋಣ ಬಾ' ಎನ್ನುತ್ತಿದ್ದರು''. - ಶೃತಿ ಹರಿಹರನ್, ನಟಿ


Click it and Unblock the Notifications











