ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿಗೆ 11 ವರ್ಷದ ಸಂಭ್ರಮ: ಸಿಂಪಲ್ ಸ್ಟಾರ್ ಹೇಳಿದ್ದೇನು?
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಬಣ್ಣದ ಲೋಕದ ಪಯಣಕ್ಕೆ 11 ವರ್ಷದ ಸಂಭ್ರಮ. 2010ರಲ್ಲಿ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಕ್ಷಿತ್ ಇಂದು ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದಾರೆ. ಈ 11 ವರ್ಷದ ಪಯಣದಲ್ಲಿ ರಕ್ಷಿತ್ ನಾಯಕನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಚಿತ್ರರಂಗದ ಬೇರೆ ಬೇರೆ ವಿಭಾಗಳಲ್ಲೂ ಗುರುತಿಸಿಕೊಂಡಿದ್ದಾರೆ.
ರಕ್ಷಿತ್ 2010, ಜುಲೈ 23ರಂದು 'ನಮ್ ಏರಿಯಲ್ ಒಂದಿನಾ' ಸಿನಿಮಾ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡರು. ಆದರೆ ಈ ಸಿನಿಮಾ ಹೇಳುವಷ್ಟು ಯಶಸ್ಸು ಕಾಣಲಿಲ್ಲ. ಹಾಗಂತ ರಕ್ಷಿತ್ ಸಿನಿಮಾ ಕನಸೇನು ಕಮರಿ ಹೋಗಿಲ್ಲ. ಗೆದ್ದೇ ಗೆಲ್ಲುತ್ತೇನೆ ಎನ್ನುವ ಚಲ ಕೂಡ ಬಿಟ್ಟುಕೊಟ್ಟಿಲ್ಲ. ಈ ಸಿನಿಮಾ ಬಳಿಕ 'ತುಘಲಕ್' ಮೂಲಕ ಮತ್ತೆ ಚಿತ್ರಪ್ರೇಕ್ಷಕರ ಮುಂದೆ ಬಂದರು. ಆದರೆ ಈ ಸಿನಿಮಾ ಕೂಡ ಬಂದಷ್ಟೆ ವೇಗದಲ್ಲಿ ಮಾಯವಾಯಿತು. 3ನೇ ಸಿನಿಮಾದ ಸಕ್ಸಸ್ ರಕ್ಷಿತ್ ಶೆಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಯಾಗಿ ಬೇರೂರಲು ಸಾಧ್ಯವಾಯಿತು.

ರಕ್ಷಿತ್ ಸಿನಿ ಬದುಕು ಬದಲಿಸಿದ ಈ 2 ಸಿನಿಮಾಗಳು
ರಕ್ಷಿತ್ ನಟನೆಯ ಮೊದಲೆರಡು ಸಿನಿಮಾಗಳು ಸೋತರೇನಂತೆ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದರು. ಸಿಂಪಲ್ ಸುನಿ ನಿರ್ದೇಶನದಲ್ಲಿ ಬಂದ ಈ ಸಿನಿಮಾ ರಕ್ಷಿತ್ ಗೆ ತಕ್ಕಮಟ್ಟಿಗಿನ ಹೆಸರು ತಂದು ಕೊಡ್ತು. ಈ ಸಿನಿಮಾ ಬಳಿಕ ಸಿಂಪಲ್ ಸ್ಟಾರ್ ನಾಯಕನಾಗಿ ಮಾತ್ರವಲ್ಲದೆ ನಿರ್ದೇಶನದ ಸಾಹಸಕ್ಕೆ ಕೈ ಹಾರಿದರು. 'ಉಳಿದವರು ಕಂಡಂತೆ' ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ನಿರ್ದೇಶನಕ್ಕೆ ಇಳಿದರು. 2014ರಲ್ಲಿ ಬಂದ ಈ ಸಿನಿಮಾ ರಕ್ಷಿತ್ ನಾಯಕನಾಗಿ ಮಾತ್ರಲ್ಲದೆ ನಿರ್ದೇಶಕನಾಗಿಯೂ ಸಕ್ಸಸ್ ಆದರು. ಹೊಸತನದ ಸಿನಿಮಾ ಮೂಲಕ ಬಂದ ರಕ್ಷಿತ್ ಕನ್ನಡ ಚಿತ್ರಪ್ರೇಕ್ಷಕರಿಗೆ ಹೊಸ ಸಿನಿಮಾ ರುಚಿ ಮೂಡಿಸಿದರು.

'ಕಿರಿಕ್ ಪಾರ್ಟಿ' ಯಶಸ್ಸು
'ಉಳಿದವರು ಕಂಡಂತೆ' ರಕ್ಷಿತ್ ಸಿನಿ ಜೀವನಕ್ಕೆ ಮೈಲೇಜ್ ತಂದು ಕೊಟ್ಟ ಚಿತ್ರ. ಬಳಿಕ ವಾಸ್ತು ಪ್ರಕಾರ, ರಿಕ್ಕಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಹೇಗೆ ಅನೇಕ ಸಿನಿಮಾಗಳಲ್ಲಿ ಮಿಂಚಿದ ರಕ್ಷಿತ್ ಮತ್ತೆ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ದೊಡ್ಡ ಹವಾ ಸೃಷ್ಟಿಸಿದರು. ಈ ಸಿನಿಮಾದ ಸಕ್ಸಸ್ ರಕ್ಷಿತ್ ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ತು. ಕೊನೆಯದಾಗಿ ರಕ್ಷಿತ್ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

'777 ಚಾರ್ಲಿ'ಯಿಂದ 'ರಿಚರ್ಡ್ ಆಂಟನಿ' ವರೆಗೆ
ಸದ್ಯ ರಕ್ಷಿತ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 777 ಚಾರ್ಲಿ ಚಿತ್ರೀಕರಣ ಮುಗಿಸಿರುವ ರಕ್ಷಿತ್ ಸದ್ಯ ಸಪ್ತ ಸಾಗರದಾಚೆ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ರಿಚರ್ಡ್ ಆಂಟನಿ ಸಿನಿಮಾ ಘೋಷಣೆ ಮಾಡಿದ್ದಾರೆ. ಹೊಂಬಾಳೆ ಫಿಲಂಮ್ಸ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಶೇಷ ಎಂದರೆ ಈ ಸಿನಿಮಾ ಮೂಲಕ ರಕ್ಷಿತ್ ಮತ್ತೆ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ.

ಅಭಿಮಾನಿಗಳ ಸಂಭ್ರಮ
11 ವರ್ಷಗಳಿಂದ ಕನ್ನಡ ಅಭಿಮಾನಿಗಳನ್ನು ಅದ್ಭುತ ಸಿನಿಮಾಗಳ ಮೂಲಕ, ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್ 11 ವರ್ಷ ಪೂರೈಸಿದ ಈ ಸಂಭ್ರಮದಲ್ಲಿ ಅಭಿಮಾನಿಗಳು ವಿಶೇಷವಾಗಿ ಶುಭಾಶಯ ತಿಳಿಸುತ್ತಿದ್ದಾರೆ. ರಕ್ಷಿತ್ ಕಾಮನ್ ಡಿಪಿ ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ. "ಹೊಸತನದ ಬೆಳಕಿಗೆಂದು ಕಾಯುತ್ತಿತ್ತು ಜನ ಸಾಗರ ಅಂದು, ಅನ್ಯ ಭಾಷೆಯ ಪ್ರಭಾವಗಳಿಂದ ನೊಂದು ಬೆಂದು. ಆ ಕೋಟಿ ಮನಸ್ಸುಗಳ ಕನಸುಗಳನ್ನು ನೀಗಿಸಲೆಂದು ಬಂದು ನಿಂತವನೇ ಈ ನಮ್ಮ ಬಂಧು-ಚಂದನವನದಲಿ ಇದೋ ವರುಷ ಅವನಿಗಿಂದು" ಎಂದು ಬರೆದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
Recommended Video

ಧನ್ಯವಾದ ತಿಳಿಸಿದ ರಕ್ಷಿತ್
ಇನ್ನು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ, "#11YearsOfNAOD | ಹನ್ನೊಂದು ವರ್ಷದ ನನ್ನ ಸಿನಿ ಪಯಣಕ್ಕೆ ನಾಂದಿಯಾದ ಚಿತ್ರ 'ನಮ್ Areaಲ್ ಒಂದಿನಾ'. ಈ ಹನ್ನೊಂದು ವರ್ಷಗಳ ಪಯಣದಲ್ಲಿ ಜೊತೆಗಿರುವ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು" ಎಂದಿದ್ದಾರೆ.


Click it and Unblock the Notifications











