ಪಂಚೆಯುಟ್ಟು, ಮುಟ್ಟಾಲೆ ತೊಟ್ಟು ರೈತನಾಗಿ ಗದ್ದೆಗಿಳಿದ ರಕ್ಷಿತ್ ಶೆಟ್ಟಿ
ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಹುಟ್ಟೂರು ಉಡುಪಿಯಲ್ಲಿ ಪಂಚೆ ಧರಿಸಿ, ತಲೆಗೊಂದು ಮುಟ್ಟಾಲೆ ಇಟ್ಟು, ಕೆಸರು ಗದ್ದೆಗಿಳಿದು ರೈತನಂತೆ ನೇಜಿ ನಾಟಿ ಮಾಡಿದ್ದಾರೆ. ಸಿಂಪಲ್ ಸ್ಟಾರ್ನ ಸಿಂಪ್ಲಿಸಿಟಿ ನೋಡಿ ಜಡಿ ಮಳೆಯನ್ನೇ ಲೆಕ್ಕಿಸದೇ, ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು.
Recommended Video
ಉಡುಪಿಯ ಭಿರ್ತಿಯಲ್ಲಿ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕೇದಾರೋತ್ಥಾನ ಎನ್ನುವ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಪಾಲ್ಗೊಂಡಿದ್ದರು. ಜೋರಾಗಿ ಸುರಿವ ಮಳೆಯನ್ನ ಲೆಕ್ಕಸದೇ ನಡೆದ ಕಾರ್ಯಕ್ರಮದಲ್ಲಿ ಹುಲಿ ಕುಣಿತದ ಹಾಡು, ಡೋಲಿನ ಸದ್ದು ಮತ್ತಷ್ಟು ಹುರುಪು ನೀಡಿತು.
ಮಳೆಯಲ್ಲೇ ಗದ್ದೆಗೆ ಇಳಿದು ನೇಜಿ ನಾಟಿ ಮಾಡಿದ ರಕ್ಷಿತ್ ಶೆಟ್ಟಿ, ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇದರಿಂದ ಬೆಳದ ಕುಚ್ಚಲು ಅಕ್ಕಿಗೆ ರಾಯಭಾರಿ ಆಗಲೂ ತಯಾರಿದ್ದೇನೆ ಎಂದಿದ್ದಾರೆ.

ಉಡುಪಿ ವಿಧಾನ ಸಭಾ ಕ್ಷೇತ್ರದ 2 ಸಾವಿರ ಎಕರೆ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ, ಭತ್ತದ ಬೇಸಾಯ ಮಾಡುವ ಶಾಸಕ ರಘುಪತಿ ಭಟ್ ಅವರ ವಿಶೇಷ ಕಾರ್ಯಕ್ರಮವನ್ನು ರಕ್ಷಿತ್ ಶ್ಲಾಘಿಸಿದ್ದಾರೆ. ತಮ್ಮೂರಿನ ಮೆಚ್ಚಿನ ನಟನನ್ನು ನೋಡಬೇಕು, ಶೆಟ್ರ ಜೊತೆಗೆ ಒಂದು ಪೋಟೋ ತೆಗೆದುಕೊಳ್ಳಬೇಕೆಂದು ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎಲ್ಲರ ಜೊತೆಯೂ ನಗುಮುಖದಿಂದ ಸೆಲ್ಫಿ ಕ್ಲಿಕ್ಕಿಸಿದ ರಕ್ಷಿತ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ ಬೆಂಗಳೂರಿನಲ್ಲೂ ಎರಡು ಎಕರೆಯಲ್ಲಿ ಭತ್ತದ ಬೇಸಾಯ ಮಾಡಿ, ಕುಚ್ಚಲಕ್ಕಿ ಊಟ ಮಾಡುತ್ತಿದ್ದೇನೆ, ಭತ್ತ ಬೇಸಾಯದ ಖುಷಿಯೇ ವಿಶೇಷವಾದದ್ದು ಎಂದರು.
ಕಾರ್ಯಕ್ರಮದುದ್ದಕ್ಕೂ ರೈತರೊಂದಿಗೆ ಬೆರೆತು ಸಂಭ್ರಮ ಪಟ್ಟ ರಕ್ಷಿತ್ ಶೆಟ್ಟಿ ಹುಟ್ಟೂರಿನ ಅಭಿಮಾನಿಗಳನ್ನು ರಂಜಿಸಿದರು. ಕಾರ್ಯಕ್ರಮದ ವಿಡಿಯೋಗಳು, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


Click it and Unblock the Notifications











