ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡದ ಧ್ರುವತಾರೆ'ಯ ಮೊದಲ ಅತಿಥಿ ರಮೇಶ್ ಅರವಿಂದ್
ಕನ್ನಡ ಸಾಹಿತ್ಯ ಪರಿಷತ್ತು 'ಕನ್ನಡದ ಧ್ರುವತಾರೆ' ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯಕ್ರಮವು ಸಾಧಕರ ಮತ್ತು ಸಾರ್ವಜನಿಕರ ನಡುವೆ ಸುವರ್ಣ ಸೇತುವೆಯಾಗುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. 'ಕನ್ನಡದ ಧ್ರುವತಾರೆ' ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ನಟ ಮತ್ತು ವೀಕೆಂಡ್ ವಿತ್ ರಮೇಶ್ ಖ್ಯಾತಿಯ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ.
ಆಗಸ್ಟ್ 19ರ ಶನಿವಾರ ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ 'ಕನ್ನಡದ ಧ್ರುವತಾರೆ' ಸಾಧಕರೊಂದಿಗೆ ಮಾತು ಕತೆ ಕಾರ್ಯಕ್ರಮದ ಮೊದಲ ಅವತರಣಿಕೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ.

"ಕನ್ನಡದ ಧ್ರುವತಾರೆ ಸಾಧಕರೊಂದಿಗೆ ಮಾತುಕತೆ ಎನ್ನುವ ವಿನೂತನ ಹಾಗೂ ವಿಶಿಷ್ಟ ಮಾದರಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿದೆ. ಈ ಮೂಲಕ ಕನ್ನಡ ನಾಡಿನ ವಿವಿಧ ಕ್ಷೇತ್ರದಲ್ಲಿ ಅಜ್ಞಾತವಾಗಿ ಅಗಣಿತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಲಿದೆ. ಅವರೊಂದಿಗೆ ಪರಿಷತ್ತು ಹಾಗೂ ಸಾರ್ವಜನಿಕರು ಸಂವಾದ ನಡೆಸುವ ಮೂಲಕ ಸಾಧಕರ ಅನುಭವಗಳನ್ನು ನಾಡಿನ ಜನರಿಗೆ ತಿಳಿಸುವ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ" ಎಂದು ನಾಡೋಜ ಮಹೇಶ್ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು 'ಕನ್ನಡದ ಧ್ರುವತಾರೆ' ಎನ್ನುವ ಹೆಸರಿನಲ್ಲಿ ನಡೆಸುವ ಕಾರ್ಯಕ್ರಮ ಪರಿಷತ್ತಿನ ಮಾದರಿ ಕಾರ್ಯಕ್ರಮವಾಗಲಿದೆ. ಕನ್ನಡಿಗರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಬೆರಗು ಹುಟ್ಟಿಸುವಂತಹ ಸಾಧನೆಯನ್ನು ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ಮಾಹಿತಿ ಲಭ್ಯವಿರುತ್ತದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿನ ಸಾಧಕರು ಎಲೆ ಮರೆಯ ಮರಗಳಂತೆ ಅಪಾರ ಸಾಧನೆಯನ್ನು ಮಾಡಿದ್ದಾರೆ. ಮಾಹಿತಿ ಇದ್ದರೂ ಸಾಧಕರನ್ನು ನೇರವಾಗಿ ನೋಡುವ ಅವರ ಜೊತೆ ಸಂವಾದ ಮಾಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿರುವುದಿಲ್ಲ. ಹೀಗಾಗಿ ಈ ಕಾರ್ಯಕ್ರಮ ರೂಪಿಸಿದೆ ಎಂದಿದ್ದಾರೆ.

ವಿವಿಧ ಕ್ಷೇತ್ರದ ಸಾಧಕರೊಂದಿಗೆ ಸಂವಾದ
'ಕನ್ನಡದ ಧ್ರುವತಾರೆ' ಕಾರ್ಯಕ್ರಮ ಪ್ರತಿ ತಿಂಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಧಕರೊಂದಿಗೆ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಬಹುದು. ಕಾರ್ಯಕ್ರಮವು ಸಾಧಕರ ಮತ್ತು ಸಾರ್ವಜನಿಕರ ನಡುವೆ ಸುವರ್ಣ ಸೇತುವೆಯಾಗುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದರ ಮೊದಲ ಅತಿಥಿಯಾಗಿ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ.
ರಮೇಶ್ ಅರವಿಂದ್ ಅವರು ನಟನೆ, ನಿರೂಪಣೆ, ನಿರ್ದೇಶನ, ಸಾಹಿತ್ಯದ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯನ್ನು ಮೆರೆದವರು. 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಮೇಶ್ ಅರವಿಂದ್ ನಾಲ್ಕು ದಶಕಗಳಿಂದಲೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಮನನೀಯವಾದದ್ದು. ರಮೇಶ್ ಅರವಿಂದ್ ರಚಿಸಿದ ಕೃತಿಗಳು ಅಪಾರ ಜನಪ್ರಿಯತೆ ಪಡೆದಿವೆ. ಇಂಥಹ ಮಹಾನ್ ಸಾಧಕರು 'ಕನ್ನಡ ಧ್ರುವತಾರೆ' ಕಾರ್ಯಕ್ರಮದ ಮೂಲಕ ಕನ್ನಡಿಗರ ಮುಂದೆ ಬರಲಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.
ಶನಿವಾರ (ಆಗಸ್ಟ್ 19) ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಲಿದ್ದಾರೆ.


Click it and Unblock the Notifications











