ಕಂಬಳದಲ್ಲಿ ಗೆದ್ದು ಕಬಡ್ಡಿ ಅಂಗಳಕ್ಕೆ ಬಂದ 'ಕಾಡುಬೆಟ್ಟು ಶಿವಣ್ಣ'; ಬೆಂಗಳೂರು ಬುಲ್ಸ್ಗೆ ಬೆಂಬಲ
ಸದ್ಯ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ನ ಭಾನುವಾರದ ಪಂದ್ಯಗಳಿಗೆ ಚಾಲನೆ ನೀಡಲು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಆಗಮಿಸಿದ್ದರು. ಪ್ರೊ ಕಬಡ್ಡಿ ಲೀಗ್ನ ಪ್ರತಿದಿನದ ಪಂದ್ಯಗಳಿಗೂ ಮುನ್ನ ರಾಷ್ಟ್ರಗೀತೆ ಹಾಡುವುದರ ಮೂಲಕ ಚಾಲನೆ ನೀಡಲಾಗುತ್ತದೆ. ಪ್ರತಿದಿನ ಓರ್ವ ಖ್ಯಾತ ವ್ಯಕ್ತಿಯನ್ನು ಚಾಲನೆ ನೀಡಲು ಕರೆಸಲಾಗುತ್ತದೆ. ಅದರಂತೆ ಭಾನುವಾರ ( ಅಕ್ಟೋಬರ್ 16 ) ನಡೆದ ಪುಣೇರಿ ಪಲ್ಟನ್ ಹಾಗೂ ಯು ಮುಂಬಾ ತಂಡಗಳ ನಡುವೆ ನಡೆದ ಪಂದ್ಯಕ್ಕೆ ರಾಷ್ಟ್ರಗೀತೆ ಹಾಡುವುದರ ಮೂಲಕ ರಿಷಬ್ ಶೆಟ್ಟಿ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ರಿಷಬ್ ಶೆಟ್ಟಿ ಬೆಂಗಳೂರು ಬುಲ್ಸ್ ತಂಡಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಸದ್ಯದ ಸೆನ್ಸೇಷನ್ ಕಾಂತಾರ ಚಿತ್ರದಲ್ಲಿ ಕಾಡುಬೆಟ್ಟು ಊರಿನ ಶಿವಣ್ಣನ ಪಾತ್ರ ನಿರ್ವಹಿಸಿ ನಮ್ಮ ಮಣ್ಣಿನ ಕ್ರೀಡೆ ಕಂಬಳದಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿ ಇದೀಗ ನಮ್ಮ ನೆಲದ ಮತ್ತೊಂದು ಕ್ರೀಡೆಯಾದ ಕಬಡ್ಡಿಗೂ ಸಾಥ್ ನೀಡಿದ್ದಾರೆ.

ಇನ್ನು ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಚಿತ್ರ ಸದ್ಯ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರವನ್ನು ವೀಕ್ಷಿಸಿದ ಸಿನಿ ಪ್ರೇಮಿಗಳು ಫಿದಾ ಆಗಿದ್ದರು. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗೆ ಪ್ಯಾನ್ ಇಂಡಿಯಾ ಬಿಡುಗಡೆ ಕೂಗು ದೊಡ್ಡ ಮಟ್ಟದಲ್ಲಿ ಕೇಳಿ ಬಂದ ನಂತರ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳಿಸಿದೆ.
ಕಾಂತಾರ ಚಿತ್ರ ಹಿಂದಿ ಹಾಗೂ ತೆಲುಗು ಅವತರಣಿಕೆಯಲ್ಲೂ ಸಹ ಅಬ್ಬರಿಸುತ್ತಿದೆ. ಅದರಲ್ಲಿಯೂ ತೆಲುಗು ಅವತರಣಿಕೆ ಕನ್ನಡಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿದ್ದು, ಕಾಂತಾರವನ್ನು ತೆಲುಗು ಬಾಬುಗಳು ಒಪ್ಪಿ ಅಪ್ಪಿಕೊಂಡಿದ್ದಾರೆ. ಚಿತ್ರ ಈಗಾಗಲೇ ನೂರು ಕೋಟಿ ಕ್ಲಬ್ ಸೇರಿದ್ದು ಭರ್ಜರಿ ಯಶಸ್ಸು ಸಾಧಿಸಿದೆ.


Click it and Unblock the Notifications











