'ಕಾಂತಾರ'-1 ಸೀಕ್ರೆಟ್ ಬಿಚ್ಚಿಟ್ಟ ರಿಷಬ್ ಶೆಟ್ಟಿ; ಸಮರವೀರನಾಗಿ ಹೊಸ ಅವತಾರ
ರಿಷಬ್ ಶೆಟ್ಟ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಚಾಪ್ಟರ್-1 ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಶೇಕಡಾ 30ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಮುಂದಿನ ವರ್ಷವೇ ಸಿನಿಮಾ ರಿಲೀಸ್ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ಧಾರೆ.
'ಕಾಂತಾರ' ಚಿತ್ರದ ನಟನೆಗಾಗಿ ಇತ್ತೀಚೆಗೆ ರಿಷಬ್ ಶೆಟ್ಟಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಮನರಂಜನೆ ವಿಭಾಗದಲ್ಲೂ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ಕೆರಾಡಿ ಭಾರೀ ಸೆಟ್ ನಿರ್ಮಾಣ ಮಾಡಿ ಪ್ರೀಕ್ವೆಲ್ ಚಿತ್ರೀಕರಣ ನಡೆಸಲಾಗುತ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ.

ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಪಾತ್ರಕ್ಕಾಗಿ ಕಳರಿ ಪಯಟ್ಟು ಸಮರಕಲೆಯನ್ನು ಕಲಿಯುತ್ತಿದ್ದಾರೆ. ಕೆಲ ದಿನಗಳ ಹಿಂದೆಯೇ ಈ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅಧಿಕೃತವಾಗಿ ಯಾರು ಇದನ್ನು ಸ್ಪಷ್ಟಪಡಿಸಿರಲಿಲ್ಲ. ಇದೀಗ ಫೋಟೊ ಸಮೇತ ಆ ವಿಚಾರ ಬಹಿರಂಗವಾಗಿದೆ. ಕತ್ತಿ, ಗುರಾಣಿ ಹಿಡಿದು ರಿಷಬ್ ಶೆಟ್ಟಿ ಕಳರಿ ಪಯಟ್ಟು ಕಲಿಯುತ್ತಿರುವ ಫೋಟೊ ರಿವೀಲ್ ಆಗಿದೆ.
ರಿಷಬ್ ಶೆಟ್ಟಿ ಫೋಟೊ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಬನಿಯನ್ ಹಾಗೂ ಕೆಂಪು ಬಣ್ಣದ ಕಚ್ಚೆ ಉಟ್ಟು ರಿಷಬ್ ಶೆಟ್ಟಿ ಸಮರ ಕಲೆಯನ್ನು ತಾಲೀಮು ನಡೆಸುತ್ತಿರುವುದನ್ನು ನೋಡಬಹುದು. ಇನ್ನು ಕರಾವಳಿಯ 'ಕಾಂತಾರ'-1 ಕಥೆಗೆ ಕೇರಳದ ಪುರಾತನ ಸಮರ ಕಲೆಗೂ ಏನು ಸಂಬಂಧ ಎನ್ನುವುದು ಸಿನಿಮಾ ತೆರೆಗೆ ಬಂದಮೇಲೆ ಗೊತ್ತಾಗಲಿದೆ.

11-12ನೇ ಶತಮಾನದಲ್ಲಿ ಕೇರಳದಲ್ಲಿ ಕಳರಿ ಪಯಟ್ಟು ಸಮರಕಲೆ ಹುಟ್ಟಿಕೊಂಡಿತ್ತು. ಈಗ ದೇಶ ವಿದೇಶದಲ್ಲಿ ಜನಪ್ರಿಯವಾಗಿರುವ ಮಾರ್ಷಲ್ ಆರ್ಟ್ಸ್ಗೂ ಇದೇ ಕಳರಿ ಪಯಟ್ಟು ಮೂಲ ಎನ್ನಲಾಗುತ್ತದೆ. ಇಂದಿಗೂ ಕೇರಳದಲ್ಲಿ ಹಲವರು ಈ ಕಲೆಯನ್ನು ಶಿಸ್ತಿನಿಂದ ಕಲಿಯುತ್ತಿದ್ದಾರೆ. ಶಂಕರ್ ನಾಗ್ ನಟನೆಯ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಕೂಡ ಕಳರಿ ಪಯಟ್ಟು ಸನ್ನಿವೇಶಗಳಿದ್ದವು.
ಪ್ರಾಚೀನ ಜಾನಪದದ ಪ್ರಕಾರ, ವಿಷ್ಣುವಿನ ಅವತಾರವಾಗಿದ್ದ ಪರಶುರಾಮ ಭಾರತದಲ್ಲಿ ಸಮರ ಕಲೆಗಳ ಸ್ಥಾಪಕ ಎಂದು ನಂಬಲಾಗಿದೆ. ಆತನೇ ತುಳುನಾಡಿನ ಸೃಷ್ಟಿಸಿದ್ದು ಎನ್ನುವ ನಂಬಿಕೆಯೂ ಇದೆ. ಹಾಗಾಗಿ ಸಹಜವಾಗಿಯೇ 'ಕಾಂತಾರ'-1 ಕಥೆ ಕುತೂಹಲ ಮೂಡಿಸುತ್ತದೆ.
ಕುಂದಾಪುರದಲ್ಲಿ 22 ಸಾವಿರ ಚದರ ಅಡಿ ವಿಸ್ತೀರ್ಣದ ಶೂಟಿಂಗ್ ಫ್ಲೋರ್ ನಿರ್ಮಿಸಿ 'ಕಾಂತಾರ' ಚಾಪ್ಟರ್-1 ಚಿತ್ರೀಕರಣ ನಡೆಸಲಾಗುತ್ತಿದೆ. ಅದರ ಒಳಗೆ ನಾಲ್ಕೈದು ಸೆಟ್ಗಳನ್ನು ನಿರ್ಮಿಸಲಾಗಿದೆ. ಮಳೆ ಬರುವಾಗಲು ಚಿತ್ರೀಕರಣ ನಿಲ್ಲಿಸದೇ ಚಿತ್ರೀಕರಣ ನಡೆಸುತ್ತಿದ್ದಾರೆ. ತಮ್ಮದೇ ಬ್ಯಾನರ್ನ 'ಲಾಫಿಂಗ್ ಬುದ್ಧ' ಸಿನಿಮಾ ಪ್ರಚಾರಕ್ಕಾಗಿ 'ಕಾಂತಾರ'-1 ಚಿತ್ರೀಕರಣದಿಂದ ಬಿಡುವು ಪಡೆದಿದ್ದಾರೆ.
ಈಗಾಗಲೇ 3 ಶೆಡ್ಯೂಲ್ಗಳಲ್ಲಿ 'ಕಾಂತಾರ' ಪ್ರೀಕ್ವೆಲ್ ಚಿತ್ರೀಕರಣ ನಡೆದಿದೆ. ಮತ್ತಷ್ಟು ಶೆಡ್ಯೂಲ್ಗಳು ಬಾಕಿಯಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವುದು ಬಹುತೇಕ ಖಚಿತ ಎಂದು ರಿಷಬ್ ಶೆಟ್ಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಮತ್ತಷ್ಟಯ ಕುತೂಹಲ ಮೂಡಿಸಿದೆ. ಈ ಬಾರಿ ಚಿತ್ರವನ್ನು ಆಸ್ಕರ್ ವೇದಿಕೆಗೂ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ.


Click it and Unblock the Notifications











