ಮುಂದಿನ ಜನ್ಮದಲ್ಲಿ ಪಂಜುರ್ಲಿ ಮತ್ತು ಗುಳಿಗನ ಸೇವೆ ಮಾಡುವ ಅವಕಾಶ ಸಿಗಲಿ ಎಂದ ರಿಷಬ್ ಶೆಟ್ಟಿ
ಮುಂದಿನ ಜನ್ಮದಲ್ಲಿ ಪಾಣಾರಾ ಕುಟುಂಬದಲ್ಲಿ ಹುಟ್ಟುವ ಆಸೆ ಇದೆ. ಪಂಜುರ್ಲಿ ಮತ್ತು ಗುಳಿಗನ ಸೇವೆ ಮಾಡುವ ಅವಕಾಶ ಸಿಗುವಂತಾಗಲಿ ಎಂದು ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಆಸೆಯನ್ನು ಹೊರಹಾಕಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಪಾಣರ- ನಲಿಕೆ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿದ ವೇಳೆ ಮನಬಿಚ್ಚಿ ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ ಪಾಣಾರ ನಲಿಕೆ ಸಮುದಾಯದ ಹಿರಿಯ ನರ್ತಕರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ರಿಷಬ್ ಶೆಟ್ಟಿ ಸನ್ಮಾನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಮ್ಮೇಳನ ನಡೆಯುತ್ತಿದೆ.

ಮುಂದಿನ ಜನ್ಮದಲ್ಲಿ ಪಾಣರ ಸಮುದಾಯದಲ್ಲಿ ಹುಟ್ಟುವ ಆಸೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿರುವ ರಿಷಬ್ ಶೆಟ್ಟಿ, "ಅಮೆರಿಕಾದ ಮ್ಯೂಸಿಯಂನಲ್ಲಿ ಪಂಜುರ್ಲಿಯ ಮೊಗ ಇಟ್ಟಿದ್ದಾರೆ. ಇದು ನಮ್ಮ ನೆಲದ ದೈವ ದೇವರ ಶಕ್ತಿ. ಮುಂದಿನ ಜನ್ಮದಲ್ಲಿ ಪಾಣರ ಸಮುದಾಯದಲ್ಲಿ ಹುಟ್ಟುವ ಆಸೆಯಿದೆ. ಪಾಣಾರನಾಗಿ ದೈವದ ಚಾಕರಿ ಮಾಡುವಂತಾಗಲಿ. ಪಂಜುರ್ಲಿ, ಗುಳಿಗ - ಅಣ್ಣಪ್ಪಸ್ವಾಮಿಯ ಸೇವೆ ಮಾಡುವಂತಾಗಲಿ" ಎಂದು ಮನದಾಸೆಯನ್ನು ಹಂಚಿಕೊಂಡಿದ್ದಾರೆ.
"ಪಾಣಾರಾ ನಲಿಕೆ ಸಮುದಾಯದಕ್ಕೆ ಈ ಮಣ್ಣಿನಲ್ಲಿ ಸಾವಿರಾರು ವರ್ಷದ ಇತಿಹಾಸವಿದೆ. ದೇವರ ಆರಾಧಾನೆ ನಡೆಯುವ ಮುಂಚಿನಿಂದಲೂ ದೈವಗಳ ಆರಾಧನೆ ಈ ಮಣ್ಣಿನಲ್ಲಿ ನಡೆಯುತಿತ್ತು ಎಂಬುವುದು ಈ ಮಣ್ಣಿನ ಇತಿಹಾಸವನ್ನು ಗಮನಿಸಿದಾಗ ಅರ್ಥ ಆಗುತ್ತದೆ. ದೈವಗಳ ಶಕ್ತಿ ಏನು ಅನ್ನೋದಕ್ಕೆ ನಾನೇ ನಿದರ್ಶನ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಸೂಪರ್ ಹಿಟ್ ಕಾಂತಾರವನ್ನು ನೆನಪಿಸಿಕೊಂಡ ನಟ, "ಕಾಂತಾರ ಸಿನಿಮಾ ಮಾಡುತ್ತಾ ಮಾಡುತ್ತಾ ನಾನೂ ದೈವಗಳ ಸೇವೆ ಮಾಡುವಂತೆ ಆಗಿದೆ. ಹಾಗಾಗಿ ನಾನೂ ಪಾಣಾರಾ ಸಮುದಾಯದವನೇ ಆಗಿದ್ದೇನೆ. ದೈವಗಳು ನಂಬಿದವರನ್ನು ಎಂದಿಗೂ ಕೈ ಬಿಡೋದಿಲ್ಲ. ನಾನು ಕೇವಲ ಎರಡ್ಮೂರು ಸಿನಿಮಾ ಮಾಡಿದ್ದವನು. ಅತೀ ಹೆಚ್ಚು ಫ್ಯಾನ್ ಫಾಲೋವಿಂಗ್ ಕೂಡಾ ಇರಲಿಲ್ಲ. ನನ್ನ ಸಿನಿಮಾವನ್ನು ಪ್ರಪಂಚಕ್ಕೆ ಪಸರಿಸಲು ಕಾರಣ ದೈವಗಳು" ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ಸಿನಿಮಾದಲ್ಲಿ ದುಡಿದ ಹಣದಿಂದ ಸಮಾಜಮುಖಿ ಫೌಂಡೇಶನ್
ನಾವು ಸಿನಿಮಾದಲ್ಲಿ ದುಡಿದ ಹಣದಿಂದ ಸಮಾಜಮುಖಿ ಫೌಂಡೇಶನ್ ಮಾಡುತ್ತಿದ್ದೇವೆ. ನಲಿಕೆ ಸಮುದಾಯದ ಓದುವ ಮಕ್ಕಳಿಗೆ ಟ್ರಸ್ಟ್ ನಿಂದ ಸಹಾಯ ಮಾಡುತ್ತೇವೆ. ದೈವಗಳ ಸೇವೆಯ ಜೊತೆಗೆ ಶಿಕ್ಷಣವೂ ಅತೀ ಮುಖ್ಯವಾದವು. ಇತ್ತೀಚೆಗೆ ಪಾಣಾರಾ ನಲಿಕೆ ಸಮುದಾಯದವರು ಪ್ರಾಧ್ಯಾಪಕರು, ಎಂಜಿನಿಯರ್ ಸೇರಿದಂತೆ ಬೇರೆ ಬೇರ ವೃತ್ತಿಗಳಲ್ಲಿ ಇದ್ದಾರೆ. ದೈವಗಳ ಸೇವೆಯ ಜೊತೆಗೆ ಶಿಕ್ಷಣವೂ ಸಿಗುವಂತಾಗಲಿ ಎಂದು ರಿಷಬ್ ತಿಳಿಸಿದ್ದಾರೆ.
ಪಾಣರ ಸಮುದಾಯದ ಮಕ್ಕಳಲ್ಲಿ ಶಿಕ್ಷಣ ಜೊತೆ ಆಚಾರ ವಿಚಾರ ಮುಂದುವರೆಸಲಿ. ಅತೀ ಬೇಡಿಕೆಯಾದ ಪಾಣಾರ ಸಮುದಾಯಕ್ಕೆ ಭವನಕ್ಕೆ ಶಕ್ತಿಮೀರಿ ಸರಕಾರಕ್ಕೆ ಮನವರಿಕೆ ಮಾಡುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ಜೊತೆ ಶಕ್ತಿಮೀರಿ ಒತ್ತಾಯ ಮಾಡುತ್ತೇನೆ ಎಂದು ರಿಷಬ್ ಶೆಟ್ಟಿ ಭರವಸೆ ನೀಡಿದ್ದಾರೆ.
ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಚಂದನವನದಿಂದ ಈಗ ಬಾಲಿವುಡ್ ಅಂಗಳಕ್ಕೂ ಕಾಲಿಡಲು ನಟ ಸಿದ್ಧತೆ ನಡೆಸುತ್ತಿದ್ದಾರೆ. ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳ ಸರದಾರ ಅಶುತೋಷ್ ಗೋವಾರಿಕರ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಬಣ್ಣ ಹಚ್ಚುವ ಸುಳಿವು ಸಿಕ್ಕಿದೆ. ರಿಷಬ್ ಶೆಟ್ಟಿ ಹಾಗೂ ಅಶುತೋಷ್ ಸಿನಿಮಾವೊಂದರ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕೊನೆಗೂ ಮಾತುಕತೆ ಯಶಸ್ವಿಯಾಗಿದ್ದು ರಿಷಬ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ಪಿಂಕ್ವಿಲ್ಲಾ ವೆಬ್ಸೈಟ್ ವರದಿ ಮಾಡಿದೆ.


Click it and Unblock the Notifications











