ಸಾಯಿ ಕುಮಾರ್ ತಾಯಿಯ ಕನಸು ನನಸು ಮಾಡಿದ ಚೇತನ್ ಕುಮಾರ್
''ನಾವು ಮೂರು ಜನ ಇವತ್ತು ಈ ವೇದಿಕೆ ಮೇಲೆ ನಿಂತಿದ್ದೇವೆ ಅಂದರೆ, ಅದಕ್ಕೆ ಕಾರಣ ಕರ್ನಾಟಕ. ಕರ್ನಾಟಕ ಇಲ್ಲ ಅಂದ್ರೆ...'' ಈ ರೀತಿ ಹೇಳಿರುವುದು, ಬಹುಭಾಷ ನಟ ಸಾಯಿ ಕುಮಾರ್.
ನಟ ಸಾಯಿ ಕುಮಾರ್ ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಇದೀಗ 'ಭರಾಟೆ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕ ನಟ ಸಾಯಿ ಕುಮಾರ್ ತಾಯಿಯ ಕನಸು ನನಸಾಗಿದೆ.
'ಭರಾಟೆ' ಸಿನಿಮಾದ ಆಕ್ಷನ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಕುಮಾರ್, ತಮ್ಮ ಹಾಗೂ ತಮ್ಮ ಸಹೋದರರ ಸಿನಿ ಜರ್ನಿಯನ್ನು ನೆನೆದರು. ಅಗ್ನಿ, ಆರುಮುಘಂ ಹಾಗೂ ಆಯುಧ ಆಗಿ ಕನ್ನಡ ಚಿತ್ರರಂಗಕ್ಕೆ ಬಂದ ಸಾಯಿ ಕುಮಾರ್ ಸಹೋದರರು ಇಂದು ದೊಡ್ಡ ನಟರಾಗಿ ಬೆಳೆದಿದ್ದಾರೆ. ಇದರ ಜೊತೆಗೆ ಅವರ ತಾಯಿಯ ಕನಸು ಕೂಡ ಈಡೇರಿದೆ.

ಒಂದೇ ಚಿತ್ರದಲ್ಲಿ ಮೂರು ಮಕ್ಕಳನ್ನು ನೋಡಬೇಕು
ತಮ್ಮ ಮೂವರು ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವುದು ನಟ ಸಾಯಿ ಕುಮಾರ್ ತಾಯಿಯ ಆಸೆಯಾಗಿತ್ತು. ಈ ಆಸೆ ಬಹಳ ವರ್ಷಗಳ ನಂತರ ಇದೀಗ ಈಡೇರಿದೆ. ಇಷ್ಟು ದಿನ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದ ಸಾಯಿ ಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ 'ಭರಾಟೆ' ಸಿನಿಮಾದಲ್ಲಿ ಮೊದಲ ಬಾರಿಗೆ ಒಂದಾಗಿದ್ದಾರೆ.

ಸಾಯಿ ಕುಮಾರ್ ತಾಯಿಯ ಆಸೆ ಈಡೇರಿಸಿದ ಚೇತನ್
ಸಾಯಿ ಕುಮಾರ್ ಆಸೆಯನ್ನು ನಿರ್ದೇಶಕ ಚೇತನ್ ಕುಮಾರ್ 'ಭರಾಟೆ' ಚಿತ್ರದಿಂದ ನನಸು ಮಾಡಿದ್ದಾರೆ. 'ಭರಾಟೆ' ಚಿತ್ರದಲ್ಲಿ ರವಿಶಂಕರ್ ಪಲ್ಲವ, ಅಯ್ಯಪ್ಪ ವೀರಪ್ಪ ನಾಯಕ ಹಾಗೂ ಸಾಯಿ ಕುಮಾರ್ ಬಲ್ಲಾಳ ದೇವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಬಂದ ಆಕ್ಷನ್ ಟ್ರೇಲರ್ ನಲ್ಲಿ ಸಹೋದರರ ಅಬ್ಬರ ಜೋರಾಗಿದೆ.

ಕನ್ನಡ ನಮ್ಮ ಜೀವನದ ಭಾಷೆ
''ನಮ್ಮ ಮಾತೃ ಭಾಷೆ ತೆಲುಗು ಆಗಿದ್ದರೂ, ಜೀವನದ ಭಾಷೆ ಕನ್ನಡ. ನಮ್ಮ ಮೂವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವುದು ಅಮ್ಮನ ಆಸೆ. ಆದರೆ, ಅಮ್ಮ ಇಂದು ನಮ್ಮ ಜೊತೆಗೆ ಇಲ್ಲ. ಕರ್ನಾಟಕದ ಜನ ಈ ಸಿನಿಮಾವನ್ನು ನೋಡಿದರೆ ಅಮ್ಮ ನೋಡಿದ ಹಾಗೆ.'' ಎಂದು ನಟ ರವಿಶಂಕರ್ ಮಾತನಾಡಿದರು.

ಚೇತನ್, ಶ್ರೀಮುರಳಿ ಸುಪ್ರೀತ್ ಗೆ ಧನ್ಯವಾದ
ಸಿನಿಮಾದ ನಾಯಕ ಶ್ರೀಮುರಳಿ, ನಿರ್ದೇಶಕ ಚೇತನ್ ಕುಮಾರ್ ಹಾಗೂ ನಿರ್ಮಾಪಕ ಸುಪ್ರೀತ್ ಮೂವರಿಗೂ, ಸಾಯಿ ಕುಮಾರ್ ಹಾಗೂ ಸಹೋದರರು ಧನ್ಯವಾದ ತಿಳಿಸಿದರು. ಅಂದಹಾಗೆ, 'ಭರಾಟೆ' ಸಿನಿಮಾ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಆಗುತ್ತಿದೆ. 'ಬಹದ್ದೂರ್', 'ಭರ್ಜರಿ' ನಂತರ ಬರುತ್ತಿರುವ ನಿರ್ದೇಶಕ ಚೇತನ್ ಅವರ ಮೂರನೇ ಚಿತ್ರವಾಗಿದೆ.


Click it and Unblock the Notifications











