ಸಿನಿಮಾದಿಂದ ಆಚೆ 'ಹೊಸ ಹೆಜ್ಜೆ'ಯಿಟ್ಟ ಸತೀಶ್ ನೀನಾಸಂ
ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಚಿತ್ರದ ಪ್ರಮೋಷನ್ ಅದು ಇದು ಅಂತ ಇರಬೇಕಿದ್ದ ನಟ ಬೇರೆಯದ್ದೇ ಕೆಲಸವೊಂದಕ್ಕೆ ಕೈ ಹಾಕಿದ್ದಾರೆ.
'ನಾನೊಂದು ಹೊಸ ಕೆಲಸ ಮಾಡಬೇಕೆಂದುಕೊಂಡಿದ್ದೇನೆ, ಹೊಸ ಪ್ರಯಾಣ, ಹೊಸ ಯೋಜನೆ' ಸದ್ಯದಲ್ಲೇ ನಿಮಗೆ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಸಣ್ಣ ಸುಳಿವು ಬಿಟ್ಟಿಕೊಡದ ಸತೀಶ್ ಇಂದು ಆ ಹೊಸ ಹೆಜ್ಜೆಯ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಸತೀಶ್ ಅವರ ಈ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು. ಒಬ್ಬ ಹಳ್ಳಿಯಿಂದ ಬಂದ ನಟ ಆ ಹಳ್ಳಿಗಳಿಗಾಗಿ ಏನಾದರೂ ಮಾಡಬೇಕು ಎಂಬ ಛಲದಿಂದ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅಷ್ಟಕ್ಕೂ, ಸತೀಶ್ ಅವರ ಕೈಗೆತ್ತಿಕೊಂಡಿರುವ ಹೊಸ ಪ್ರಾಜೆಕ್ಟ್ ಏನು.? ಎಂಬುದನ್ನ ತಿಳಿಯಲು ಮುಂದೆ ಓದಿ.....

ಹಳ್ಳಿಯನ್ನ ದತ್ತು ಪಡೆದ ನಟ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೊಕಿನ ಹುಲ್ಲೆಗಾಲ ಎಂಬ ಗ್ರಾಮವನ್ನ ನಟ ಸತೀಶ್ ನೀನಾಸಂ ಅವರು ದತ್ತು ಪಡೆದುಕೊಂಡಿದ್ದಾರೆ. ಹಳ್ಳಿಗಳ ಸಮಸ್ಯೆಯನ್ನ ಬಗೆಹರಿಸಿ, ಅದನ್ನ ಮಾದರಿ ಗ್ರಾಮವನ್ನಾಗಿ ಮಾಡಬೇಕೆಂಬ ಆಶಯದೊಂದಿಗೆ ಮಹತ್ವದ ಕೆಲಸವೊಂದಕ್ಕೆ ಕೈಹಾಕಿದ್ದಾರೆ. ಈ ವಿಷ್ಯವನ್ನ ಖುದ್ದು ಸತೀಶ್ ಅವರೇ ಖಚಿತಪಡಿಸಿದ್ದಾರೆ.

ಟೀಮ್ ಸತೀಶ್ ಪಿಕ್ಚರ್ಸ್ ತಂಡ
ಟೀಮ್ ಸತೀಶ್ ಪಿಕ್ಚರ್ಸ್ ಅಡಿಯಲ್ಲಿ ಸತೀಶ್ ನೀನಾಸಂ ಅವರ ಸಾರಥ್ಯದಲ್ಲಿ ಈ ಹಳ್ಳಿಯನ್ನ ದತ್ತು ಪಡೆದುಕೊಳ್ಳಲಾಗಿದೆ. ಸುಮಾರು 100 ರಿಂದ 150 ಜನ ಸ್ವಯಂ ಸೇವಕರು ಈ ಊರಿಗೆ ಬಂದು ಈ ಹಳ್ಳಿಯಲ್ಲಿರುವ ಸಮಸ್ಯೆಗಳನ್ನ ಅರಿತು, ಊರು ಜನರ ಜೊತೆ ಚರ್ಚೆ ಮಾಡಿ, ಅದನ್ನ ಹೇಗೆ ಬಗೆಹರಿಸಬಹುದು ಎಂಬ ಕೆಲಸವನ್ನ ಆರಂಭಿಸಲಿದ್ದಾರೆ. ಈಗ ಪ್ರಾಥಮಿಕ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಸತೀಶ್ ಅವರ ಜೊತೆ ಕೈಜೋಡಿಸಬಹುದು
ಅಂದ್ಹಾಗೆ, ಇದು ಸತೀಶ್ ಒಬ್ಬರೇ ಒಂದು ತಂಡವನ್ನ ಕಟ್ಟಿಕೊಂಡು ಮಾಡಲು ಹೊರಟಿದ್ದಾರೆ. ಇವರ ಜೊತೆ ಯಾರೂ ಬೇಕಾದರೂ ಸೇರಬಹುದು. ''ಯಾರೆಲ್ಲಾ ಸಹಾಯ ಮಾಡಬೇಕು ಎಂದುಕೊಂಡಿದ್ದಾರೋ ಅಂತವರನ್ನೆಲ್ಲ ಒಗ್ಗೂಡಿಸಿಕೊಂಡು ಈ ಹಳ್ಳಿಯನ್ನ ಮಾದರಿ ಗ್ರಾಮವನ್ನಾಗಿ ಮಾಡಬೇಕು ಎನ್ನುವುದು ನನ್ನ ಆಸೆ'' ಎಂದು ಸತೀಶ್ ಹೇಳುತ್ತಾರೆ.

ಹಳ್ಳಿಯ ಬಗ್ಗೆ ಸತೀಶ್ ಏನಂದ್ರು.?
''ಈ ಹಳ್ಳಿಯಲ್ಲಿ ಹಲವು ಸಮಸ್ಯೆಗಳಿವೆ. ಮೊದಲು ಶಾಲೆಯನ್ನ ಅಭಿವೃದ್ದಿಪಡಿಸಬೇಕು. ಇಲ್ಲಿ ಓದಿದ ಒಬ್ಬ ವಿದ್ಯಾರ್ಥಿ ವಿಜ್ಞಾನಿ ಆಗಿದ್ದಾರೆ, ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. 500-600 ವೋಟಿಂಗ್ ಇರಬಹುದು. ಮಕ್ಕಳೆಲ್ಲಾ ಈ ಊರು ಬಿಟ್ಟು ಬೆಂಗಳೂರಿಗೆ ಹೋಗಿದ್ದಾರೆ. ಒಂದೂವರೆ ತಿಂಗಳಲ್ಲಿ ಕೆಲಸ ಆರಂಭಿಸುತ್ತೇವೆ. ಮತ್ತೆ ಈ ಹಳ್ಳಿಯನ್ನ ಮಾದರಿ ಗ್ರಾಮವಾಗಿ ಮಾಡುತ್ತೇವೆ'' ಎಂದಿದ್ದಾರೆ.
ಸತೀಶ್ ಅವರು ಫೇಸ್ ಬುಕ್ ವಿಡಿಯೋ ನೋಡಿ


Click it and Unblock the Notifications











