ನಟ ಸತ್ಯಜಿತ್ ಆರೋಗ್ಯದಲ್ಲಿ ವ್ಯತ್ಯಯ: ಐಸಿಯುಗೆ ದಾಖಲು
ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಘಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಹಲವು ಜನಪ್ರಿಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಸತ್ಯಜಿತ್ಗೆ ಕೆಲವು ವರ್ಷಗಳಿಂದ ಆರೋಗ್ಯ ಸರಿಯಿರಲಿಲ್ಲ. ಈ ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ತೆಗೆಯಲಾಗಿತ್ತು. ಆ ನಂತರವೂ ಹಲವು ಆರೋಗ್ಯ ಸಮಸ್ಯೆಗಳು ಅವರನ್ನು ಬಾಧಿಸುತ್ತಲೇ ಇದ್ದವು.
ಸತ್ಯಜಿತ್ ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಸತ್ಯಜಿತ್ರ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ. 72 ವರ್ಷದ ಸತ್ಯಜಿತ್ ಕೆಲವು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಚಿತ್ರನಟರಾಗಿದ್ದರು ಸತ್ಯಜಿತ್. ಅನಾರೋಗ್ಯದ ಬಳಿಕ ಅವಕಾಶಗಳು ಇಲ್ಲವಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಿದರು. ಚಿತ್ರರಂಗದಿಂದ ತುಸು ನೆರವು ಸಹ ಸತ್ಯಜಿತ್ಗೆ ದೊರಕಿತು.
ಕೌಟುಂಬಿಕ ಸಮಸ್ಯೆಯಿಂದಲೂ ಆಘಾತಗೊಂಡಿದ್ದರು ಸತ್ಯಜಿತ್. ಕೆಲವು ತಿಂಗಳ ಹಿಂದೆ ಸತ್ಯಜಿತ್ರ ಮಗಳೇ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ''ನನ್ನ ತಂದೆ ಹಾಗೂ ಅಣ್ಣಂದಿರು ನನ್ನನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ. ನಾನು ಗರ್ಭಿಣಿ ಆಗಿದ್ದು ಈ ಸಮಯದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ' ಎಂದು ಆರೋಪಿಸಿ ಸತ್ಯಜಿತ್ರ ಮಗಳು ಸುಹಾನಾ ಅಖ್ತರ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದ ಸತ್ಯಜಿತ್ ಮಗ ಆಕಾಶ್, ''ಅಪ್ಪ ಮನೆ ಮಾರಿ ಮಗಳಿಗೆ ಶಿಕ್ಷಣ ಕೊಡಿಸಿದ್ದರು. ವಿದೇಶಕ್ಕೆ ಕಳಿಸಿದ್ದರು. ನನ್ನ ಸಾಲ ತೀರಿಸಿಕೊಡಿ, ನನಗೆ ಕೆಲಸ ಸಿಕ್ಕ ಮೇಲೆ ನಿಮಗೆ ಮನೆ ಕೊಡಿಸುತ್ತೇನೆ ಎಂದು ಸುಹಾನಾ ಹೇಳಿದ್ದಳು. ಆದರೆ ಈಗ ಅಪ್ಪನ ಇಷ್ಟದ ವಿರುದ್ಧ ಮದುವೆಯಾಗಿ, ಸ್ವಂತಕ್ಕೆ ಮನೆ ಖರೀದಿಸಿದ್ದಾಳೆ. ಅಪ್ಪ ತಮಗೆ ಮನೆ ಖರೀದಿಸುವ ವಿಷಯ ಕೇಳಿದ್ದಕ್ಕೆ ಅಪ್ಪನ ವಿರುದ್ಧ ಸುಳ್ಳು ದೂರು ದಾಖಳಿಸಿದ್ದಾಳೆ'' ಎಂದಿದ್ದರು.
1986ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ಸತ್ಯಜಿತ್ ಕನ್ನಡದ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಸತ್ಯಜಿತ್ ನಟಿಸಿದ್ದಾರೆ. ವಿಲನ್ ಪಾತ್ರಗಳಿಗೆ ಅವರು ಖ್ಯಾತರಾಗಿದ್ದರು.


Click it and Unblock the Notifications











