ಸಾವು- ಬದುಕಿನ ಮಧ್ಯೆ 'ಅವತಾರ ಪುರುಷ' ಪುಷ್ಕರ್ ಮಲ್ಲಿಕಾರ್ಜುನಯ್ಯ!
ಕನ್ನಡ ಚಿತ್ರಗಳ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿಮಗೆಲ್ಲಾ ಗೊತ್ತಿರಬೇಕು. ಅವರು ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನೂ ಕೊಟ್ಟಿದ್ದಾರೆ. ಹಂಬಲ್ ಪೊಲಿಟೀಷನ್ ನಾಗರಾಜ್, ಅವನೇ ಶ್ರೀಮನ್ ನಾರಾಯಣ, ಭೀಮಸೇನ ನಳಮಹರಾಜ್, ಕಥೆಯೊಂದು ಶುರುವಾಗಿದೆ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿದ್ದಾರೆ. ಅಲ್ಲದೇ ಹಲವು ಸಿನಿಮಾ ವಿತರಣೆಯನ್ನೂ ಮಾಡಿದ್ದಾರೆ.
ಇವರ ನಿರ್ಮಾಣದಲ್ಲಿ 'ಅವತಾರ ಪುರುಷ' ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ನಟ ಶರಣ್ ಅಭಿನಯಿಸಿದ್ದು, ನಿರ್ದೇಶಕ ಸಿಂಪಲ್ ಸುನಿ ಡೈರೆಕ್ಷನ್ ಇದೆ. ಕೊರೊನಾ ಲಾಕ್ ಡೌನ್ ಇಲ್ಲ ಅಂದಿದ್ದರೆ, ಚಿತ್ರತಂಡದ ಯೋಜನೆ ಪ್ರಕಾರ 'ಅವತಾರ ಪುರುಷ' ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಹಲವು ಬಾರಿ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಿದ್ದು ಈಗ ಹೊಸ ದಿನಾಂಕ ಸಿಕ್ಕಿದೆ.
ಆದರೆ ಚಿತ್ರದ ರಿಲೀಸ್ ಡೇಟ್ಗಿಂತಲೂ ಹೆಚ್ಚಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಗ್ಗೆ ಹೆಚ್ಚಾಗಿ ಚರ್ಚೆ ಆಗುತ್ತಿದೆ. ಅದಕ್ಕೆ ಅವರು ಚಿತ್ರದ ರಿಲೀಸ್ ಬಗ್ಗೆ ಮಾಡಿರುವ ಟ್ವೀಟ್. ಟ್ವೀಟ್ನಲ್ಲಿ ಅಂಥದ್ದೇನಿದೆ ಎನ್ನುವ ಬಗ್ಗೆ ಮುಂದೆ ಓದಿ...
ಸಾವು ಬದುಕಿನ ಕೊನೆ ಆಸರೆ ಇದು; ಪುಷ್ಕರ್ ಮಲ್ಲಿಕಾರ್ಜುನಯ್ಯ!
ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲು ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ. 'ನನ್ನ ಸಾವು- ಬದುಕಿನ ಮಧ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ, #ಅವತಾರಪುರುಷ. Releasing on May 6th 2022. ನಿಮ್ಮ ಪ್ರಾರ್ಥನೆ ಹಾಗು ಬೆಂಬಲ ನನ್ನ ಜೊತೆಯಿರಲಿ.' ಎಂದು ಬರೆದುಕೊಂಡಿದ್ದಾರೆ. ಅವರ ಈ ಟ್ವಿಟ್ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಅವರಿಗೆ ಆಗಿರುವುದೇನು ಎನ್ನುವ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಟ್ವೀಟ್ ಕಂಡು ಗಾಬರಿಗೊಂಡ ಜನ!
ಪುಷ್ಕರ್ ಅವರ ಈ ಟ್ವೀಟ್ ನೋಡಿದರಿಗೆ ಸಿಕ್ಕಾಪಟ್ಟೆ ಗಾಬರಿ ಆಗಿದೆ. ಇದ್ಯಾಕೆ ಮಲ್ಲಿಕಾರ್ಜುನ್ ಅವರು ಸಾವು, ಬದುಕು ಅಂತೆಲ್ಲಾ ಹೇಳಿದ್ದಾರೆ ಅಂತ. ಸದ್ಯ ಅವರು ಸಂಕಷ್ಟಕ್ಕೆ ಸಿಲುದ್ದಾರೆ. ಹಾಗಾಗಿ 'ಅವತಾರ ಪುರುಷ' ಚಿತ್ರ ಗೆಲ್ಲುವುದು ಅವರಿಗೆ ತುಂಬಾನೇ ಅನಿವಾರ್ಯ ಎನ್ನುವಂತೆ ಕಾಣುತ್ತದೆ. ಈ ಚಿತ್ರ ಸೋತರೆ ಅವರಿಗೆ ಬೇರೆ ದಾರಿ ಇಲ್ಲ ಎನ್ನುವ ಅರ್ಥ ಟ್ವಿಟ್ನಲ್ಲಿ ಇದೆ. ಹಾಗಾಗಿ ಕಮೆಂಟ್ ಮಾಡಿದ ಎಲ್ಲರೂ ಅವರಿಗೆ ಧೈರ್ಯ ಹೇಳುತ್ತಿದ್ದಾರೆ. ಸಿನಿಮಾ ಗೆಲ್ಲುತ್ತದೆ, ನೀವೂ ಗೆಲ್ಲುತ್ತೀರಿ ಎಂದು ಹೇಳುತ್ತಿದ್ದಾರೆ.

ಮೇ 6ಕ್ಕೆ 'ಅವತಾರ ಪುರುಷ' ಚಿತ್ರ ರಿಲೀಸ್!
ಸಿನಿಮಾ ವಿಚಾರಕ್ಕೆ ಬರುವುದಾದರೆ 'ಅವತಾರ ಪುರುಷ' ಸಿನಿಮಾ ಇದೇ ವರ್ಷ ಮೇ 6ರಂದು ರಿಲೀಸ್ ಆಗುತ್ತಿದೆ. ತಮ್ಮ ಟ್ವೀಟ್ನಲ್ಲಿಯೇ ನಿರ್ಮಾಪಕ ಮಲ್ಲಿಕಾರ್ಜುನ್ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದ್ದಾರೆ. ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಸಿನಿಮಾ ರಿಲೀಸ್ ಆಗುವುದೊಂದೇ ಬಾಕಿ ಇದೆ. ಶರಣ್ ಕಾಮಿಡಿ ಕಿಕ್ ಜೊತೆಗೆ ನಟಿ ಆಶಿಕಾ ರಂಗನಾಥ್ ಗ್ಲ್ಯಾಮರ್ ಮಿಕ್ಸ್ ಆಗಿದೆ. ಶರಣ್ ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ 'ಅವತಾರ ಪುರುಷ'!
ಇದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಚಿತ್ರ. ಅವತಾರ ಪುರುಷ ಚಿತ್ರದ ಹಾಡುಗಳು ವಿಭಿನ್ನವಾಗಿ ಗಮನ ಸೆಳೆದಿವೆ. 'ಲಡ್ಡು ಬಂದು ಬಾಯಿಗೆ ಬಿತ್ತಾ' ಹಾಡು ಜಾಹೀರಾತುಗಳನ್ನು ಸೇರಿಸಿ ಮಾಡಲಾಗಿದೆ. ಜನಪ್ರಿಯವಾಗಿರುವ ವಿವಿಧ ಜಾಹೀರಾತು ತುಣುಕುಗಳನ್ನು ಸೇರಿಸಿ ಹಾಡು ಮಾಡಲಾಗಿದೆ. ಇನ್ನು ಚಿತ್ರದ ಟೀಸರ್ ಕೂಡ ನಿರೀಕ್ಷೆ ಹುಟ್ಟಿಸಿದೆ.


Click it and Unblock the Notifications











