Shivanna- Nikhil: ಶಿವರಾಜ ಮೀಟ್ಸ್ ಸ್ಯಾಂಡಲ್ವುಡ್ ಯುವರಾಜ: ನಿಖಿಲ್ ಪ್ರೊಡಕ್ಷನ್ ನಂ.28 ಸೆಟ್ನಲ್ಲಿ ಶಿವಣ್ಣ
ಇತ್ತೀಚೆಗಷ್ಟೆ 'ಯುವ' ಸಿನಿಮಾ ಸೆಟ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದರು. ಆ ಫೋಟೊ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ನಿಖಿಲ್ ಕುಮಾರಸ್ವಾಮಿ ನಟನೆಯ ಪ್ರೊಡಕ್ಷನ್ ನಂ.28 ಸಿನಿಮಾ ಸೆಟ್ಗೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಭೇಟಿ ಕೊಟ್ಟಿದ್ದಾರೆ. ಆ ಫೋಟೊಗಳು ರಿಲೀವ್ ಆಗಿದೆ.
ಕಳೆದ ವಾರ ಫ್ಯಾಮಿಲಿ ಸಮೇತ ಶಿವಣ್ಣ ಯುಎಸ್ ಪ್ರವಾಸ ಕೈಗೊಂಡಿದ್ದರು. ಮೊನ್ನೆಯಷ್ಟೆ ಬೆಂಗಳೂರಿಗೆ ಹ್ಯಾಟ್ರಿಕ್ ಹೀರೊ ವಾಪಸ್ ಆಗಿದ್ದರು. ಬೆಂಗಳೂರಿನಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು , ಸಿನಿಮಾ ಸೆಟ್ಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ.

ಬಹಳ ದಿನಗಳ ನಂತರ ಶಿವರಾಜ್ ಕುಮಾರ್- ನಿಖಿಲ್ ಕುಮಾರಸ್ವಾಮಿ ಒಟ್ಟಿಗೆ ಕಾಣಿಸಿಕೊಂಡರು. ಒಂದಷ್ಟು ಸಮಯ ಇಬ್ಬರು ಒಟ್ಟಿಗೆ ಕಾಲ ಕಳೆದಿದ್ದಾರೆ. ಸಿನಿಮಾ ವಿಚಾರ ಹೊರೆತು ಪಡಿಸಿ ಒಂದಿಷ್ಟು ವೈಯಕ್ತಿಕ ವಿಚಾರವಾಗಿಯೂ ಶಿವಣ್ಣ ಹಾಗೂ ನಿಖಿಲ್ ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದೆ.
ತಮಿಳಿನ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಈ ಬಗ್ಗೆ ಶಿವಣ್ಣ ಮಾಹಿತಿ ಪಡೆದಿದ್ದಾರೆ. ಹಳೆ ಕಟ್ಟಡ ಒಂದರ ಮೂರನೇ ಮಹಡಿಯಲ್ಲಿ ನಿಖಿಲ್ ಹೊಸ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಲಿಫ್ಟ್ ಇಲ್ಲದ ಕಾರಣ ನಿಖಿಲ್ ಭೇಟಿ ಮಾಡಲು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮೆಟ್ಟಿಲು ಹತ್ತಿಕೊಂಡೇ ಹೋಗಿ ನಿಖಿಲ್ ಭೇಟಿ ಮಾಡಿ ಹೊಸ ಸಿನಿಮಾಗೆ ಶುಭಕೋರಿದ್ದಾರೆ.
ಪ್ರೀತಿಯಿಂದ ತಮ್ಮನ್ನ ನೋಡಲು ಬಂದ ಶಿವಣ್ಣ ಹಾಗೂ ಗೀತಾ ದಂಪತಿಯನ್ನು ನಿಖಿಲ್ ಕಾರ್ವರೆಗೂ ಹೋಗಿ ಬೀಳ್ಕೊಟ್ಟು ಬಂದಿದ್ದಾರೆ. ಅಣ್ಣಾವ್ರ ಕುಟುಂಬ ಹಾಗೂ ದೊಡ್ಡ ಗೌಡರ ಕುಟುಂಬದ ನಡುವೆ ದಶಕಗಳಿಂದ ಆತ್ಮೀಯ ಒಡನಾಟವಿದೆ. ನಿಖಿಲ್ ಡೆಡಿಕೇಷನ್ ಬಗ್ಗೆ ಪುನೀತ್ ರಾಜ್ಕುಮಾರ್ಗೆ ತುಂಬಾ ಪ್ರೀತಿ ಇತ್ತು. ಈಗ ಶಿವಣ್ಣ ಹಾಗೂ ನಿಖಿಲ್ ಭೇಟಿ ಎರಡೂ ಕುಟುಂಬದ ಬಾಂಧವ್ಯವನ್ನ ನೆನಪಿಸುತ್ತಿದೆ.
ಲೈಕಾ ಸಂಸ್ಥೆ ನಿರ್ಮಾಣದಲ್ಲಿ ನಿಖಿಲ್ ನಟನೆಯ ಈ ಹೊಸ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ. ಚಿತ್ರವನ್ನ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚಿಗಷ್ಟೇ ಶುರುವಾಗಿದೆ. ಚಿತ್ರದಲ್ಲಿ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದೆ. ತಮಿಳಿನಲ್ಲಿ 'ಕತ್ತಿ', '2.0', 'ದರ್ಬಾರ್', 'ಪೊನ್ನಿಯಿನ್ ಸೆಲ್ವನ್' ಸೇರಿದಂತೆ ಹಲವು ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ.

ಕೆಲವೇ ದಿನಗಳ ಹಿಂದೆಯಷ್ಟೆ ಖಾಸಗಿ ಹೋಟೆಲ್ನಲ್ಲಿ ಪ್ರೊಡಕ್ಷನ್ ನಂ. 28 ಸಿನಿಮಾ ಮುಹೂರ್ತ ನೆರವೇರಿತ್ತು. ನಿಖಿಲ್ ತಾತ ಮಾಜಿ ಪ್ರಧಾನಿ ಹೆಚ್. ಡಿ ದೇವಗೌಡರು, ತಂದೆ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಈ ಸಮಾರಂಭದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಕೋರಿದ್ದರು. 'ಜಾಗ್ವಾರ್' ಸಿನಿಮಾ ಮೂಲಕ ನಿಖಿಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
'ಸೀತಾರಾಮ ಕಲ್ಯಾಣ', 'ಕುರುಕ್ಷೇತ್ರ', 'ರೈಡರ್' ಸಿನಿಮಾಗಳಲ್ಲೂ ನಿಖಿಲ್ ಕುಮಾರಸ್ವಾಮಿ ನಟಿಸಿ ಮೋಡಿ ಮಾಡಿದ್ದರು. ಆ ಬಳಿಕ ಒಂದೆರಡು ಸಿನಿಮಾಗಳು ಘೋಷಣೆ ಆದರೂ ಚಿತ್ರೀಕರಣ ಶುರುವಾಗಲಿಲ್ಲ. ಈ ನಡುವೆ ನಿಖಿಲ್ ರಾಜಕೀಯರಂಗದಲ್ಲೂ ಗುರ್ತಿಸಿಕೊಂಡರು. ಮಂಡ್ಯ ಲೋಕಸಭೆ ಚುನಾವಣೆ ಸೋಲಿನ ಬಳಿಕ ಈ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಮತ್ತೆ ಸೋತರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಿಖಿಲ್ ಚುನಾವಣೆ ಸೋಲಿನ ಬಳಿಕ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ನಿಖಿಲ್ ಮತ್ತೆ ರಾಜಕೀಯರಂಗಕ್ಕೆ ಬರುವುದಿಲ್ಲ, ಸಂಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಸ್ವತಃ ನಿಖಿಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.


Click it and Unblock the Notifications











