'ಮತ್ತೆ ರಣರಂಗ': ಶಿವರಾಜ್ ಕುಮಾರ್, ಸಂತೋಷ್ ಆನಂದ್ರಾಮ್ ಸಿನಿಮಾ!
ಕನ್ನಡ ಸಿನಿಮಾರಂಗದಲ್ಲಿ ಒಂದಷ್ಟು ನಿರ್ದೇಶಕರು, ನಟರು ಒಂದಾಗಿ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಹಿಟ್ ಲಿಸ್ಟ್ ಸೇರಿ ಬಿಡುತ್ತದೆ. ಅವರ ಕಾಂಬಿನೇಶನ್ ಸಿನಿಮಾಗಳನ್ನು ನೋಡಲು ಅಭಿಮಾನಿಗಳೂ ಬಯಸುತ್ತಾರೆ. ಈ ಸಾಲಿನಲ್ಲಿ ನಟ ಪುನೀತ್ ರಾಜ್ಕುಮಾರ್ ಮತ್ತು ಸಂತೋಷ್ ಆನಂದ್ರಾಮ್ ಜೋಡಿ ಸಹ ಒಂದು. ಈಗ ದೊಡ್ಮನೆ ಅಭಿಮಾನಿಗಳು ಶಿವಣ್ಣ ಮತ್ತು ಸಂತೋಷ್ ಆನಂದ್ ರಾಮ್ ಸಿನಿಮಾವನ್ನು ನೋಡಲು ಕಾಯುತ್ತಿದ್ದಾರೆ.
ಈಗಾಗಲೇ ಶಿವರಾಜ್ ಕುಮಾರ್ ಅವರು ಸಾಲು, ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸುದ್ದಿ ಇತ್ತೀಚೆಗೆ ಹೆಚ್ಚು ಸದ್ದು ಮಾಡಿತ್ತು. ವೇದ ಸಿನಿಮಾದ ಬಳಿಕ ಶಿವರಾಜ್ ಕುಮಾರ್ ಅವರು ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ಆರಂಭ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದೇ ಬೆನ್ನಲ್ಲೇ ಹೊಸ ಸಿನಿಮಾದ ಸುದ್ದಿ ಹೊರ ಬಂದಿದೆ.
ಈ ನಡುವೆ ನಟ ಶಿವರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ರಾಮ್ ಕಾಂಬಿನೇಷನ್ ಸಿನಿಮಾ ವಿಚಾರ ಕೂಡ ಸದ್ದು ಮಾಡುತ್ತಿದೆ. ಇವರ ಕಾಂಬಿನೇಶನ್ ಸಿನಿಮಾ ಸೆಟ್ಟೆರುತ್ತಾ?, ಸಂತೋಷ್ ಆನಂದ್ ರಾಮ್ ಯಾವಾಗಿಂದ ಶಿವಣ್ಣನಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ....

ಶಿವಣ್ಣ, ಸಂತೋಷ್ ಆನಂದ್ ರಾಮ್ ಕಾಂಬಿನೇಶನ್: ಟೈಟಲ್ 'ಮತ್ತೆ ರಣರಂಗ'!
ನಟ ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ಮಾಡಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಹಿಂದೆಯೇ ಸಜ್ಜಾಗಿದ್ದರು. ಆ ಕಥೆಯನ್ನು ಕೂಡ ಒಂದು ಹಂತಕ್ಕೆ ಸಿದ್ದ ಮಾಡಿ ಇಟ್ಟು ಕೊಂಡಿದ್ದಾರಂತೆ ನಿರ್ದೇಶಕ. ಆದರೆ ಅದಕ್ಕೆ ಸಮಯ ಬರಬೇಕು ಎಂದು ಸಂತೋಷ್ ಆನಂದ್ ರಾಮ್ ಕಾಯುತ್ತಿದ್ದರು. ಹಾಗಾಗಿ ಸಿನಿಮಾ ತಡವಾಗಿದೆ ಅನಿಸುತ್ತೆ. ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಶಿವರಾಜ್ ಕುಮಾರ್ ಅವರಿಗೆ ಸಂತೋಷ್ ನಿರ್ದೇಶನ ಮಾಡುವ ಕಾಲ ಹತ್ತಿರ ಬಂದಿದೆ ಎನ್ನಲಾಗುತ್ತಿದೆ.

'ರಾಜಕುಮಾರ' ಸಿನಿಮಾ ಟೈಮ್ನಲ್ಲೇ ಕತೆ ಸಿದ್ಧವಾಗಿತ್ತು!
ನಟ ಪುನೀತ್ ರಾಜ್ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಸಮಯದಲ್ಲೇ, ಸಂತೋಷ್ ಅವರು ಶಿವಣ್ಣನ ಸಿನಿಮಾಗೆ 'ಮತ್ತೆ ರಣರಂಗ' ಎಂದು ಟೈಟಲ್ ಫಿಕ್ಸ್ ಮಾಡಬೇಕು ಎಂದು ಕೊಂಡಿದ್ದರಂತೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರವನ್ನು ಬಹಳ ವಿಶೇಷವಾಗಿ ಬರೆದಿದ್ದಾರಂತೆ. ನಿರ್ದೇಶಕ ಸಂತೋಷ್ ಆನಂದ್ ರಾಮ್. ಈ ವಿಚಾರ ಆಗಿನಿಂದಲೂ ಹರಿದಾಡುತ್ತಿದೆ. ಆದರೆ ರಾಜಕುಮಾರ ಸಿನಿಮಾ ಬಳಿಕ ಈ ಚಿತ್ರ ಆರಂಭ ಆಗಿಲ್ಲ. ಸಂತೋಷ್ ಆನಂದ್ ರಾಮ್ ಅವರು ಪುನೀತ್ ರಾಜ್ಕುಮಾರ್ ಅವರೊಂದಿಗೆ 'ಯುವರತ್ನ' ಸಿನಿಮಾ ಮಾಡಿದರು.

ಹೊಂಬಾಳೆ ಎಂಟ್ರಿಯಿಂದ 'ಮತ್ತೆ ರಣರಂಗ' ಆಗುತ್ತಾ?
ಈಗ ಹರಿದಾಡುತ್ತಿರುವ ಹೊಸ ವಿಚಾರ ಅಂದರೆ, ಈ ಚಿತ್ರಕ್ಕೆ ಹೊಂಬಾಳೆ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ ಎನ್ನುವುದು. ಈ ಮೂಲಕ ವಿಜಯ್ ಕಿರಗಂದೂರು ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಚಿತ್ರ ಸದ್ಯ ಯಾವ ಹಂತದಲ್ಲಿ ಇದೆ, ಯಾವಾಗ ಸೆಟ್ಟೇರುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿಯನ್ನು ಚಿತ್ರ ತಂಡವೇ ಹೊರ ಹಾಕಬೇಕಿದೆ. ಸದ್ಯ ಶಿವರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಇಬ್ಬರೂ ಕೂಡ ಸಿನಿಮಾ ಬೇರೆ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಅವರಿಂದಲೇ ಸಿಗುವ ಸಾಧ್ಯತೆ ಇದೆ.

ಕುತೂಹಲ ಮೂಡಿಸಿದ 'ಮತ್ತೆ ರಣರಂಗ' ಟೈಟಲ್!
ರಣರಂಗ ಟೈಟಲ್ ಕನ್ನಡಿಗರಿಗೆ ಹೊಸದೇನಲ್ಲ. ಈ ಹಿಂದೆ ಇದೇ ಟೈಟಲ್ ಅಡಿಯಲ್ಲಿ ಶಿವರಾಜ್ ಕುಮಾರ್ ಅವರ ಸಿನಿಮಾ ರಿಲೀಸ್ ಆಗಿತ್ತು. 1988ರಲ್ಲಿ 'ರಣರಂಗ' ತೆರೆಗೆ ಬಂದಿದೆ. ಶಿವರಾಜ್ ಕುಮಾರ್ ಜೊತೆಗೆ ನಟಿ ಸುಧಾರಾಣಿ ಮತ್ತು ತಾರಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಹಿಟ್ ಲಿಸ್ಟ್ ಸೇರುವುದರ ಜೊತೆಗೆ ದಾಖಲೆ ಬರೆದ ಸಿನಿಮಾ. ಈಗ ಈ ಟೈಟಲ್ ಅಡಿಯಲ್ಲಿ ಮತ್ತೆ ಸಿನಿಮಾ ಬರುತ್ತೆ ಎಂದರೆ ಸಹಜವಾಗಿಯೇ ನಿರೀಕ್ಷೆಗಳು ಮನೆ ಮಾಡಿವೆ.


Click it and Unblock the Notifications











