ಡಿಕೆ ಶಿವಕುಮಾರ್ ಕೊಟ್ಟ ಎಂಪಿ ಟಿಕೆಟ್ ಆಫರ್ ತಿರಸ್ಕರಿಸಿದ ಶಿವಣ್ಣ: ಸಿನಿಮಾ ಮೇಲಿನ ಪ್ರೀತಿ ಕಂಡು ದಂಗಾದ ಅಭಿಮಾನಿಗಳು
ಚಿತ್ರರಂಗ ಮತ್ತು ರಾಜಕೀಯಕ್ಕೂ ಬಿಡಿಸಲಾರದ ನಂಟಿದೆ. ಒಂದಲ್ಲ ಒಂದು ರೂಪದಲ್ಲಿ ಎರಡು ಕ್ಷೇತ್ರಗಳು ಒಂದಾಗುತ್ತಲೇ ಇರುತ್ತವೆ. ಸಿನಿಮಾರಂಗದ ಹಲವು ಮಂದಿಗೆ ರಾಜಕೀಯದಲ್ಲಿ ಕೆಲಸ ಮಾಡುವ ಆಸೆಯಿರುತ್ತದೆ. ಈಗಾಗಲೇ ಹಲವು ಸ್ಟಾರ್ ನಟ, ನಟಿಯರು ಸಿನಿಮಾರಂಗದ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟು ಸೈ ಎನಿಸಿಕೊಂಡಿದ್ದಾರೆ.
ಆದರೆ, ರಾಜ್ ಕುಟುಂಬದ ದೊಡ್ಡ ಕುಡಿ ಡಾ. ಶಿವರಾಜ್ ಕುಮಾರ್ ಇದಕ್ಕೆ ಹೊರತು. ಹೌದು....ತಮ್ಮ ಪತ್ನಿ, ಪತ್ನಿಯ ಕುಟುಂಬ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದರೂ ಕೂಡ ಶಿವಣ್ಣ ಮಾತ್ರ ಎಂದೂ ರಾಜಕೀಯಕ್ಕೆ ಧುಮುಕಿದವರಲ್ಲ. ಅವರಿಗೆ ಸಿನಿಮಾ, ನಟನೆಯ ಮೇಲೆಯೇ ಹೆಚ್ಚು ಪ್ರೀತಿ. ಇದನ್ನು ವ್ಯಾಮೋಹ ಎಂದರೂ ತಪ್ಪಾಗದು. ಅದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

ಎಂಪಿ ಟಿಕೆಟ್ ಅಫರ್ ನೀಡಿದ ಡಿಕೆ ಶಿವಕುಮಾರ್
ನಟ ಶಿವರಾಜ್ಕುಮಾರ್ ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಈಡಿಗ ಸಮುದಾಯದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಇದೇ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಶಿವರಾಜ್ ಕುಮಾರ್ ಅವರಿಗೆ ಲೋಕಸಭೆಯ ಟಿಕೆಟ್ ಆಫರ್ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶ ನಡೆದಿದೆ. ಸಮಾವೇಶದಲ್ಲಿ "ಲೋಕಸಭೆ ಚುನಾವಣೆಗೆ ತಯಾರಾಗಿ, ಎಂದರೆ ಐದಾರು ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು. ಆದರೆ ಪಾರ್ಲಿಮೆಂಟ್ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದ್ದೇನೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು.
ರಾಜಕೀಯಕ್ಕಿಂತ ಸಿನಿಮಾ ಸಾಕು ಎಂದ ಶಿವಣ್ಣ!
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಫರ್ ಅನ್ನು ನಯವಾಗಿಯೇ ತಿರಸ್ಕರಿಸಿರುವ ನಟ ಶಿವರಾಜ್ಕುಮಾರ್, 'ನಮಗೆ ತಂದೆಯಿಂದ ಬಂದಿರುವ ಬಳುವಳಿ ಬಣ್ಣ ಹಚ್ಚಿ ನಟನೆ ಮಾಡುವುದು. ಬಣ್ಣ ಹಚ್ಚುವುದು, ಆಕ್ಟಿಂಗ್ ಮಾಡುವುದು ಅಷ್ಟೇ ನಮ್ಮ ಕೆಲಸ. ನಾನು ನಾನು ಎಂದಿಗೂ ರಾಜಕಾರಣಕ್ಕೆ ಬರುವುದಿಲ್ಲ. ನಮ್ಮ ತಂದೆ ಕಲಿಸಿದ ನಟನೆಯನ್ನು ಮುಂದುವರೆಸುತ್ತೇನೆ' ಎಂದು ಶಿವಣ್ಣ ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, 'ನನಗೆ ರಾಜಕೀಯ ಬೇಡ. ಆದರೆ, ರಾಜ್ಯ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆಯಾಗಿದ್ದಾರೆ. ಗೀತಾಳಿಗೆ ಇಂಟರೆಸ್ಟ್ ಇದ್ರೆ ಅವರು ಮಾಡಲಿ. ಅವರಿಗೆ ಬೆಂಬಲ ನೀಡುವುದು ನನ್ನ ಕೆಲಸ. ಗೀತಾ ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ನಾನು ಅವರ ಹಿಂದೆಯಿದ್ದು, ಬೆಂಬಲ ನೀಡುತ್ತೇನೆ' ಎಂದು ಶಿವಣ್ಣ ಸಮಾವೇಶದಲ್ಲಿ ತಿಳಿಸಿದ್ದಾರೆ.
ನಟ ಶಿವರಾಜ್ಕುಮಾರ್ ಈ ಹಿಂದೆಯೂ ಹಲವು ಬಾರಿ ಚುನಾವಣಾ ಪ್ರಚಾರಗಳಿಗೆ ಹೋಗಿದ್ದಾರೆ. ಕಳೆದ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಿದ್ದರು. ಜೊತೆಗೆ ವರುಣಾ ಕ್ಷೇತ್ರಕ್ಕೆ ತೆರಳಿ ತೆರೆದ ವಾಹನದಲ್ಲಿ ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಆಗಲು ಅವರಿಗೆ ಚುನಾವಣೆಗೆ ನಿಲ್ಲುವ ಕುರಿತು ಹಲವು ಮಂದಿ ಒತ್ತಡ ಹಾಕಿದ್ದರು. ಆಗಲೂ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ಈಗಲೂ ಕೂಡ ನಟನೆಯೇ ತನ್ನ ಜೀವನದ ಮುಖ್ಯ ಭಾಗ ಎಂದು ಹೇಳಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.


Click it and Unblock the Notifications











