Siddharth: "ಕರ್ನಾಟಕದಲ್ಲಿ ಪ್ರೆಸ್ಮೀಟ್ ಮಾಡಿದ್ರೆ, ನೀನು ತಮಿಳಿನವನು, ಗೆಟ್ ಔಟ್ ಅಂದ್ರು": ಸಿದ್ದಾರ್ಥ್ ಕಣ್ಣೀರು
ತಮಿಳು ನಟ ಸಿದ್ದಾರ್ಥ್ ನಟನೆಯ 'ಚಿಕ್ಕು' ಚಿತ್ರದ ಸುದ್ದಿಗೋಷ್ಠಿ ಕಾವೇರಿ ಪರ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾದ ಘಟನೆ ಇತ್ತೀಚೆಗೆ ನಡೆದಿತ್ತು. ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಸಿದ್ದಾರ್ಥ್ ಸುದ್ದಿಗೋಷ್ಠಿ ನಿಲ್ಲಿಸಿ ಹೊರನಡೆದಿದ್ದರು.
ತಮಗೆ ಎದುರಾದ ಅವಮಾನವನ್ನು ನೆನೆದು ನಟ ಸಿದ್ದಾರ್ಥ್ ಚಿತ್ರದ ತೆಲುಗು ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದಾರೆ. ನೋವಿನಿಂದ ಭಾವುಕಾಗಿಯೇ ವೇದಿಕೆಯಲ್ಲಿ ಮಾತನಾಡಿದ್ದಾರೆ. ಸಿದ್ದಾರ್ಥ್ ಸಿನಿಮಾ ಯಾರು ನೋಡ್ತಾರೆ ಎಂದು ವ್ಯಂಗ್ಯ ಮಾಡಿದರು ಎಂದು ಅಲವತ್ತುಕೊಂಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡು ಮಾತು ನಿಲ್ಲಿಸಿ ಕೆಲ ಕ್ಷಣ ಮೌನಕ್ಕೆ ಜಾರಿದ್ದಾರೆ.

'ಚಿಕ್ಕು' ಚಿತ್ರದಲ್ಲಿ ಸಿದ್ಧಾರ್ಥ್ ನಟಿಸಿದ್ದು ತಾವೇ ನಿರ್ಮಿಸಿದ್ದಾರೆ. ಎಸ್. ಯು ಅರುಣ್ ಕುಮಾರ್ ನಿರ್ದೇಶನದ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದಾರ್ಥ್ ಮಾತನಾಡಿದ್ದಾರೆ. ಮಾತನಾಡುತ್ತಾ ಕಣ್ಣೀರು ಹಾಕಿದ್ದು ಗಮನಾರ್ಹ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಘಟನೆ ಹಾಗೂ ತೆಲುಗಿನಲ್ಲಿ ಚಿತ್ರ ಬಿಡುಗಡೆಗೆ ಎದುರಿಸಿದ ಸಮಸ್ಯೆಗಳನ್ನು ನೆನೆದು ಭಾವುಕರಾದರು. ಕಷ್ಟಪಟ್ಟು 'ಚಿಕ್ಕು' ಸಿನಿಮಾ ಮಾಡಿದ್ದೇನೆ ಎಂದರು. ಈ ಚಿತ್ರವನ್ನು ಕನ್ನಡದಲ್ಲೂ ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಕಷ್ಟಪಟ್ಟು ಕನ್ನಡ ಕಲಿತು ಡಬ್ಬಿಂಗ್ ಮಾಡಿ ಅಲ್ಲಿ ಬಿಡುಗಡೆ ಮಾಡುವ ಯೋಚನೆ ಇತ್ತು ಎಂದಿದ್ದಾರೆ.
"ತಮಿಳುನಾಡಿನ ರೆಡ್ ಝೈಂಟ್ ಸಂಸ್ಥೆ ಚಿತ್ರ ನೋಡಿದೆ. ಉದಯನಿಧಿ ಅಂತಹ ಅದ್ಭುತ ಚಿತ್ರವನ್ನು ನೋಡಿಲ್ಲ ಎಂಬ ಕಾರಣಕ್ಕೆ ನನ್ನ ಚಿತ್ರವನ್ನು ಖರೀದಿಸಿದ್ದಾರೆ. ಕೇರಳದ ನಂಬರ್ ಒನ್ ನಿರ್ಮಾಪಕ ಗೋಕುಲಂ ಗೋಪಾಲಂ ಚಿತ್ರವನ್ನು ನೋಡಿ ಖರೀದಿಸಿದ್ದಾರೆ. ಕರ್ನಾಟಕದಲ್ಲಿ ಕೆಜಿಎಫ್ ಚಿತ್ರದ ನಿರ್ಮಾಪಕರು ನೋಡಿದ್ದಾರೆ. ನಾವು ಇಂತಹ ಸಿನಿಮಾ ನೋಡಿಯೇ ಇಲ್ಲ ಎಂದು ವಿತರಣೆ ಹಕ್ಕು ಖರೀದಿಸಿದ್ದರು" ಎಂದು ಹೇಳಿ ಸಿದ್ದಾರ್ಥ್ ಮೌನವಾಗಿಬಿಟ್ಟರು.
"ಮೊದಲ ಬಾರಿಗೆ ಕನ್ನಡ ಕಲಿತು ಡಬ್ಬಿಂಗ್ ಮಾಡಿದೆ. 4 ಭಾಷೆಗಳಲ್ಲಿ ಒಟ್ಟಿಗೆ ಸಿನಿಮಾ ರಿಲೀಸ್ ಮಾಡೋಣ ಎಂದು ಕರ್ನಾಟಕಕ್ಕೆ ಹೋಗಿ ಪ್ರೆಸ್ಮೀಟ್ ಮಾಡಿದ್ರೆ, ನೀನು ತಮಿಳಿನವನು, ಗೆಟ್ ಔಟ್ ಅಂದ್ರು. ನನಗೆ ಅರ್ಥವಾಗಲಿಲ್ಲ. ಏನ್ರೋ ನಿಮ್ಮ ಭಾಷೆ ಕಲಿತು, ನಿಮ್ ಮುಂದೆ ಹೊಸ ನಟ ಬಂದ್ರೆ ನೀವು ಗೆಟ್ ಔಟ್ ಅಂತೀರಾ? ಅಂತ ನನ್ನ ಪ್ರೆಸ್ಮೀಟ್ ನಿಲ್ಲಿಸಿದರು. ನಾನು ನಕ್ಕು ಹೊರ ಬಂದೆ. ಸಾಕಷ್ಟು ಜನ ಸ್ವಾರಿ, ಥ್ಯಾಂಕ್ಯು ಹೇಳಿದರು."
ನನಗೆ ಆ ದಿನ ಪ್ರೆಸ್ಮೀಟ್ ನಡೆಯಲಿಲ್ಲ. ನಟನಾಗಿ, ನಿರ್ಮಾಪಕನಾಗಿ ಸಿನಿಮಾ ಬಗ್ಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಬೇಸರವಾಯಿತು. ತೆಲುಗು ವಿಚಾರಕ್ಕೆ ಬಂದ್ರೆ ಸಿದ್ಧಾರ್ಥ್ ಸಿನಿಮಾ ಯಾರು ನೋಡುತ್ತಾರೆ? ಯಾಕೆ ನೋಡ್ತಾರೆ?" ಎಂದು ಕೇಳಿದ್ದರು. ಒಳ್ಳೆ ಸಿನಿಮಾ ಆದರೆ ಪ್ರೇಕ್ಷಕರು ನೋಡುತ್ತಾರೆ ಎಂದೆ. ಇದೇ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಬೇಕಿದ್ದ ಸಿನಿಮಾ. ತೆಲುಗು ಪ್ರೇಕ್ಷಕರು ಈ ಚಿತ್ರನು ಯಾಕೆ ನೋಡ್ತಾರೆ? ಯಾರು ನೋಡಲ್ಲ? ಎಂದು ಹೇಳಿ ನನಗೆ ಸರಿಯಾಗಿ ಚಿತ್ರಮಂದಿರಗಳು ಸಿಗಲಿಲ್ಲ. ಆ ಸಮಯದಲ್ಲಿ ಏಷ್ಯನ್ ಸುನಿಲ್ ನನ್ನ ಬಳಿ ಬಂದು ನಾನು ನಿಮ್ಮೊಂದಿಗೆ ಇದ್ದೇನೆ ಎಂದು ನನ್ನ ಚಿತ್ರವನ್ನು ಖರೀದಿಸಿದರು.
ಈ ಚಿತ್ರಕ್ಕಿಂತ ಉತ್ತಮ ಸಿನಿಮಾ ನನ್ನಿಂದ ಮಾಡಲು ಸಾಧ್ಯವಿಲ್ಲ. ನಿಮಗೆ ಸಿನಿಮಾದಲ್ಲಿ ನಂಬಿಕೆ ಇದ್ದರೆ, ಸಿನಿಮಾ ಇಷ್ಟವಿದ್ದರೆ ಥಿಯೇಟರ್ಗೆ ಹೋಗಿ ಈ ಸಿನಿಮಾ ನೋಡಿ. ಈ ಸಿನಿಮಾ ನೋಡಿ ನಾವು ತೆಲುಗಿನಲ್ಲಿ ಸಿದ್ಧಾರ್ಥನ ಸಿನಿಮಾ ನೋಡಲ್ಲ ಅಂತ ಅನಿಸಿದರೆ ಇನ್ಮುಂದೆ ಅಂತಹ ಪ್ರೆಸ್ ಮೀಟ್ ಮಾಡುವುದಿಲ್ಲ. ನಾನು ಇಲ್ಲಿಗೆ ಬರುವುದಿಲ್ಲ" ಎಂದು ವೇದಿಕೆಯಲ್ಲೇ ಸಿದ್ಧಾರ್ಥ್ ಅಳಲು ತೋಡಿಕೊಂಡರು.


Click it and Unblock the Notifications










