ತಮಿಳು ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರ ಅಡ್ಡಿ: ನಟ ಹೇಳಿದ್ದು ಹೀಗೆ
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ವಿವಾದ ಇಂದಿನದ್ದಲ್ಲ. ಆದರೆ, ರಾಜ್ಯದಲ್ಲಿಯೇ ನೀರಿಗೆ ಬರ ಇರುವಾಗ ತಮಿಳುನಾಡಿಗೆ ನೀರು ಬಿಡುವಂತೆ ಬಂದಿರುವ ಆದೇಶಕ್ಕೆ ರಾಜ್ಯವೇ ಬೀದಿಗಿಳಿದಿದೆ. ಎರಡು ದಿನ ಕರ್ನಾಟಕ ಬಂದ್, ಬೆಂಗಳೂರು ಬಂದ್ಗೆ ಕರುನಾಡು ಸಾಕ್ಷಿಯಾಗಿದೆ.
ಇದರ ನಡುವೆ ಸೆಪ್ಟೆಂಬರ್ 28 ರಂದು ನಟ ಸಿದ್ಧಾರ್ಥ್ ತಮ್ಮ ಚಿತ್ತ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು. ಅದು ಕಾವೇರಿ ವಿವಾದದ ನಡುವೆ ಮತ್ತೊಂದು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ನಟ ನಡೆಸುತ್ತಿದ್ದ ಪ್ರೆಸ್ ಮೀಟ್ ಸ್ಥಳದಲ್ಲಿ ಕನ್ನಡಪತ ಹೋರಾಟಗಾರರು ಸುದ್ದಿಗೋಷ್ಠಿ ನಿಲ್ಲಿಸುವಂತೆ ಒತ್ತಡ ಹಾಕಿದ್ದರು. ಇದಕ್ಕೆ ಕನ್ನಡ ನಟರು ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆ ಯಾಚಿಸಿದ್ದರು. ಈಗ ನಟ ಸಿದ್ಧಾರ್ಥ್ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗೋಷ್ಠಿಗೆ ತಡೆ: ನನಗೆ ಅಪಾರ ನಷ್ಟವಾಗಿದೆ ಎಂದ ನಟ ಸಿದ್ಧಾರ್ಥ್
ತಮ್ಮ ಇತ್ತೀಚಿನ ಚಿತ್ರ 'ಚಿತ್ತ' ದ ಕನ್ನಡ ಅವತರಣಿಕೆ ಚಿಕ್ಕು ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ನಟ ಸಿದ್ಧಾರ್ಥ್, ಸೆಪ್ಟೆಂಬರ್ 28 ರಂದು ಸುದ್ದಿಗೋಷ್ಠಿ ಆಯೋಜಿಸಿದ್ದರು. ಆದರೆ, ಅಲ್ಲಿಗೆ ತೆರಳಿದ್ದ ಕನ್ನಡ ಪರ ಸಂಘಟನೆಯ ಸದಸ್ಯರು ಗದ್ದಲ ಸೃಷ್ಟಿಸಿ ಪತ್ರಿಕಾಗೋಷ್ಠಿಯನ್ನು ತಡೆದಿದ್ದರು. ನಟನನ್ನು ಅಲ್ಲಿಂದ ಹೊರಹೋಗುವಂತೆ ಮಾಡಿದ್ದರು. ಇದಕ್ಕೆ ನಟ ಪ್ರಕಾಶ್ ರಾಜ್, ಶಿವರಾಜ್ ಕುಮಾರ್ ಮುಂತಾದ ಗಣ್ಯರು ಸಿದ್ಧಾರ್ಥ್ ಅವರಲ್ಲಿ ಕ್ಷಮೆ ಕೇಳಿದ್ದಾರೆ.
ಇನ್ನು, ಘಟನೆ ಬಗ್ಗೆ ನಟ ಸಿದ್ಧಾರ್ಥ್ ಇನ್ಸ್ಟಾಗ್ರಾಮ್ ಲೈವ್ ಬಂದು ಮಾತನಾಡಿ, ಅಲ್ಲಿ ಏನು ನಡೆಯಿತು ಎಂಬುದನ್ನು ವಿವರಿಸಿದ್ದಾರೆ. ಈ ಸುದ್ದಿಗೋಷ್ಠಿಯ ನಂತರ ಅವರು ತಮ್ಮ ಚಿತ್ರವನ್ನು ಬೆಂಗಳೂರಿನ ಮಾಧ್ಯಮದವರಿಗೆ ಪ್ರದರ್ಶನ ಆಯೋಜಿಸಲು ಯೋಜಿಸಿದ್ದರು. ಆದರೆ ಅದನ್ನು ರದ್ದುಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ. ಚಿತ್ತ ಚಿತ್ರದ ನಿರ್ಮಾಪಕರೂ ಆಗಿರುವ ಸಿದ್ಧಾರ್ಥ್, ತನಗೆ ಇದರಿಂದ ಅಪಾರ ನಷ್ಟವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಬೆಂಗಳೂರು ಪ್ರೆಸ್ ಮೀಟ್ ಘಟನೆ ಕುರಿತು ಸಿದ್ದಾರ್ಥ್ ಮಾತು
ಸೆಪ್ಟೆಂಬರ್ 29 ರಂದು Instagram ಲೈವ್ನಲ್ಲಿ ನಟ ಹೇಳಿದ್ದು ಹೀಗೆ. "ನಿನ್ನೆ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದ್ದು, ನಿರ್ಮಾಪಕನಾಗಿ ಇದೇ ಮೊದಲ ಬಾರಿಗೆ ನನ್ನ ಸಿನಿಮಾವನ್ನು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವ ಮುನ್ನ ಹಲವರಿಗೆ ಪ್ರದರ್ಶಿಸಿದ್ದೇನೆ. ಅದನ್ನು ಚೆನ್ನೈನಲ್ಲಿ ಮತ್ತು ಕೊಚ್ಚಿಯಲ್ಲಿ ಮಾಧ್ಯಮದವರಿಗೆ ತೋರಿಸಲಾಯಿತು. ಬೆಂಗಳೂರಿನಲ್ಲೂ ಇಂತಹ ಪ್ರದರ್ಶನದ ಯೋಜನೆ ಇತ್ತು. ಬಿಡುಗಡೆಗೂ ಮುನ್ನ ಸುಮಾರು 2,000 ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸುವ ಯೋಜನೆ ಹೊಂದಿದ್ದೆ. ಈವರೆಗೆ ಯಾರೂ ಮಾಡಿಲ್ಲ. ಅಂದು ರಾತ್ರಿ ಕನ್ನಡದ ನಟ, ನಟಿಯರಿಗಾಗಿ ಚಿತ್ರ ಪ್ರದರ್ಶಿಸುವ ಯೋಜನೆಯೂ ಇತ್ತು. ಆದರೆ ಬಂದ್ನ ಗೌರವಾರ್ಥವಾಗಿ ನಾವು ಎಲ್ಲವನ್ನೂ ರದ್ದುಗೊಳಿಸಿದ್ದೇವೆ. ನಾವು ದೊಡ್ಡ ನಷ್ಟವನ್ನು ಅನುಭವಿಸಿದ್ದೇವೆ. ಆದರೆ ಅದನ್ನು ಮೀರಿ, ನಾವು ಅಲ್ಲಿನ ಜನರಿಗೆ ಉತ್ತಮ ಚಿತ್ರವನ್ನು ತೋರಿಸಲು ಸಾಧ್ಯವಾಗಲಿಲ್ಲ ಎಂಬ ನಿರಾಸೆಯಿದೆ" ಎಂದು ಹೇಳಿದ್ದಾರೆ.

ಮುಂದುವರಿದು, ಮಾಧ್ಯಮ "ಸಂವಾದದ ನಂತರ ಸುದ್ದಿಗೋಷ್ಠಿಯಲ್ಲಿದ್ದವರು ಚಲನಚಿತ್ರವನ್ನು ನೋಡಬೇಕಾಗಿತ್ತು. ಆದರೆ ಅಲ್ಲಿ ಏನಾಯಿತು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ಇದು ಹಲವು ಕ್ಯಾಮೆರಾಗಳ ಮುಂದೆಯೇ ನಡೆದಿದೆ. ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುವಾಗ, ಗಮನವನ್ನು ಬೇರೆಡೆಗೆ ಸೆಳೆಯುವ ಯಾವುದೇ ವಿಷಯದ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ನನ್ನ ಚಿತ್ರಕ್ಕೂ ಈ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ನನ್ನ ಸಾಮಾಜಿಕ ಜವಾಬ್ದಾರಿಯನ್ನು ನಾನು ನನ್ನ ಹಣವನ್ನು ಖರ್ಚು ಮಾಡುವ ಚಲನಚಿತ್ರಗಳಲ್ಲಿ ತೋರಿಸುತ್ತೇನೆ ಎಂದು ನಾನು ನಂಬುತ್ತೇನೆ" ಎಂದು ನೇರವಾಗಿ ಮಾತನಾಡಿದ್ದಾರೆ.
ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಯಲ್ಲಿ ಆಗಿದ್ದೇನು?
ನಟ ಸಿದ್ಧಾರ್ಥ್ ಅಭಿನಯದ 'ಚಿತ್ತ' ಕನ್ನಡದಲ್ಲಿ 'ಚಿಕ್ಕು' ಚಿತ್ರದ ಪ್ರಚಾರಕ್ಕೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆ ಸೆಪ್ಟೆಂಬರ್ 28 ರಂದು ಅಡ್ಡಿಪಡಿಸಿದೆ. ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ ಹೋರಾಟಗಾರರು ಕಾವೇರಿ ಚಳವಳಿಗೆ ಸಿದ್ಧಾರ್ಥ್ ಮತ್ತು ಅಲ್ಲಿ ನೆರೆದಿದ್ದವರಿಗೆ ಬೆಂಬಲ ವ್ಯಕ್ತಪಡಿಸುವಂತೆ ಒತ್ತಾಯಿಸಿದ್ದರು. ಇದರಿಂದ ಸಿದ್ಧಾರ್ಥ್ ಸ್ಥಳದಿಂದ ಹೊರಟು ಹೋದರು. ಕನ್ನಡಪರ ಹೋರಾಟಗಾರರ ವರ್ತನೆಗೆ ಅನೇಕರು ಟೀಕಿಸಿದ್ದು, ಸಿದ್ಧಾರ್ಥ್ ಅವರ ವ್ಯಕ್ತಿತ್ವದ ಅರಿವು ಇರಬೇಕಿತ್ತು ಎಂದಿದ್ದಾರೆ. ಜೊತೆಗೆ ನಟರಾದ ಶಿವರಾಜ್ಕುಮಾರ್, ಪ್ರಕಾಶ್ ರಾಜ್ ಇಬ್ಬರು ಸಿದ್ಧಾರ್ಥ್ ಬಳಿ ಕ್ಷಮೆಯಾಚಿಸಿದ್ದಾರೆ.


Click it and Unblock the Notifications










