ಹಾಸಿಗೆ ಹಿಡಿದ ಲೀಲಾವತಿ; ಆರೋಗ್ಯ ವಿಚಾರಿಸಲು ಬಂದ ಶ್ರೀನಾಥ್ ಕಂಡು ಹರ್ಷ ವ್ಯಕ್ತಪಡಿಸಿದ ನಟಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಇನ್ನು ಮನೆಯಲ್ಲೇ ಇರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಹಿರಿಯ ನಟ ಶ್ರೀನಾಥ್ ಹಾಗೂ ತಂಡ ಭೇಟಿ ನೀಡಿದ್ದು, ಈ ಸಂದರ್ಭದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಶ್ರೀನಾಥ್ ಜತೆ ಮತ್ತಿತರ ಹಿರಿಯ ಕಲಾವಿದರಾದ ನಟಿ ಪದ್ಮಾ ವಾಸಂತಿ, ನಟ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಯಿ ಅವರು ಲೀಲಾವತಿ ಮನೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ನೆಲಮಂಗಲದ ಸಮೀಪವಿರುವ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಲೀಲಾವತಿ ವಾಸವಿದ್ದು, ಸದ್ಯ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಯಿ ಹಾಸಿಗೆ ಹಿಡಿದರೂ ಸಹ ಪುತ್ರ ವಿನೋದ್ ರಾಜ್ ತಾಯಿಯ ಆಸೆಯಂತೆ ಸಮಾಜಮುಖಿ ಕೆಲಸಗಳನ್ನು ಮುಂದುವರಿಸುತ್ತಿದ್ದು, ಹಲವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇನ್ನು ಚೆನ್ನೈನಲ್ಲಿ ಇದ್ದ ತಮ್ಮ ಆಸ್ತಿಯನ್ನು ಮಾರಿ ಬಂದ ದುಡ್ಡಿನಿಂದ ತಮ್ಮ ಊರಿನಲ್ಲಿಯೇ ಲೀಲಾವತಿ ಪ್ರಾಥಮಿಕ ಕೇಂದ್ರ ಎಂಬ ಹೆಸರಿನಲ್ಲಿ ಆಸ್ಪತ್ರೆ ತೆರೆದಿದ್ದ ಅಮ್ಮ ಹಾಗೂ ಮಗನ ಜೋಡಿ ಅಲ್ಲಿನ ಜನರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಿದ್ದರು.
ಕೊರೊನಾ ಸಮಯದಲ್ಲಿ ಹಲವರಿಗೆ ಸಹಾಯ ಮಾಡಿದ್ದ ಲೀಲಾವತಿ ಹಾಗೂ ವಿನೋದ್ ರಾಜ್ ಅಲ್ಲಿನ ಬೀದಿ ಬೀದಿಗಳಿಗೂ ಸಹ ಸ್ಯಾನಿಟೈಜರ್ ಸ್ಪ್ರೇ ಮಾಡಿಸಿ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದರು. ಇನ್ನು ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಆಗಾಗ ಚಿತ್ರರಂಗದ ಹಲವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದು, ಕಳೆದ ಕೆಲ ತಿಂಗಳುಗಳ ಹಿಂದೆ ನಟಿ ಶೃತಿ ತಂಡ ಸಹ ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿ, ಅಲ್ಲೇ ಅಡುಗೆ ತಯಾರಿಸಿ ಭೋಜನ ಮಾಡಿದ್ದರು.

ಸದ್ಯ ಶ್ರೀನಾಥ್ ತಂಡ ತೆರಳಿ ಲೀಲಾವತಿ ಅವರನ್ನು ಅಪ್ಪಿ ಆರೋಗ್ಯ ವಿಚಾರಿಸಿದ್ದಾರೆ. ಮಲಗಿದ್ದ ಲೀಲಾವತಿ ಅವರನ್ನು ಎಬ್ಬಿಸಲು ಶ್ರೀನಾಥ್ ಅವರು ಜೋರಾಗಿ ಅಮ್ಮ ಎಂದು ಕೂಗಿದ್ದು, ಇದರಿಂದ ಎಚ್ಚರಗೊಂಡು ಶ್ರೀನಾಥ್ ಮುಖ ನೋಡಿದ ಲೀಲಾವತಿ ಖುಷಿಯಿಂದ ಶ್ರೀನಾಥ್ ಕೆನ್ನೆ ಸವರಿ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಉಳಿದವರೂ ಸಹ ಲೀಲಾವತಿ ಅವರ ಕೈಹಿಡಿದು ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಲೀಲಾವತಿ ಹಾಗೂ ವಿನೋದ್ ರಾಜ್ ಜತೆ ಫೋಟೊ ಕ್ಲಿಕ್ಕಿಸಿಕೊಂಡು ಅಲ್ಲಿಯೇ ಭೋಜನ ಸವಿದಿದ್ದಾರೆ. ಸದ್ಯ ಈ ಫೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರ ಈ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











