ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮತ್ತು ರಾಹುಲ್ ದ್ರಾವಿಡ್; ಫೋಟೋ ವೈರಲ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಕ್ರಿಕೆಟ್ ಲೆಜೆಂಡ್ ರಾಹುಲ್ ದ್ರಾವಿಡ್ ಇಬ್ಬರು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲೇ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರು ಸ್ಟಾರ್ ಅನ್ನು ಒಟ್ಟಿಗೆ ಕಣ್ತುಂಬಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
Recommended Video
ಅಂದಹಾಗೆ ಇದು ಸಾಧ್ಯವಾಗಿದ್ದು, ಕುಂಬಳಗೂಡು ಸಮೀಪದ ಬಿಜಿಎಸ್ ನಾಲೆಡ್ಜ್ ಸಿಟಿ ಆವರಣದಲ್ಲಿ ನಡೆದ ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣ ಹಾಗೂ ಬಿಜಿಎಸ್ ಅಂತರಾಷ್ಟ್ರೀಯ ಅಕಾಡೆಮಿಯ ಶಾಲೆ ಉದ್ಘಾಟನಾ ಸಮಾರಂಭದಲ್ಲಿ.
ನೆಚ್ಚಿನ ನಟ ಸುದೀಪ್ ಮತ್ತು ಪ್ರೀತಿಯ ಆಟಗಾರ ದ್ರಾವಿಡ್ ಇಬ್ಬರು ಒಟ್ಟಿಗೆ ಕುಳಿತಿರುವ ಫೋಟೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಕ್ಕಪಕ್ಕದಲ್ಲೇ ಕುಳಿತಿರುವ ಫೋಟೋ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಸುದೀಪ್ ಅವರಿಗೆ ಸಿನಿಮಾ ಜೊತೆಗೆ ಕ್ರಿಕೆಟ್ ಬಗ್ಗೆಯೂ ಅಪಾರ ಪ್ರೀತಿ. ರಾಹುಲ್ ದ್ರಾವಿಡ್ ಜೊತೆ ಕ್ರಿಕೆಟ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್, 'ಇಂತಹ ಗಣ್ಯರ ಜೊತೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿದ ಕಾರ್ಯಕ್ರಮ ಆಯೋಜಕರಿಗೆ ಧನ್ಯವಾದಗಳು. ಅತ್ಯುತ್ತಮವಾದ ಕ್ರೀಡಾಂಗಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಆಟಗಳು ಇಲ್ಲಿ ನಡೆಯಲಿ. ಮುಂದೊಂದು ದಿನ ಈ ಕ್ರೀಡಾಂಗಣದಲ್ಲಿ ನಾನು ಲೆಜೆಂಡ್ ಗೆಳೆಯ ರಾಹುಲ್ ದ್ರಾವಿಡ್ ಅವರ ಜೊತೆ ಆಟವಾಡುವ ಆಸೆಯಿದೆ' ಎಂದು ಹೇಳಿದ್ದಾರೆ.
ಇನ್ನು ದ್ರಾವಿಡ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ಕೆಲ ಸಮಯ ತೀರ್ಪು ನಿಮ್ಮ ವಿರುದ್ಧ ಇದ್ದರೂ ಸೌಜನ್ಯದಿಂದ ವರ್ತಿಸಬೇಕು. ಇದೇ ಕ್ರೀಡಾ ಸ್ಫೂರ್ತಿ ಎಂದು ಹೇಳಿದ್ದಾರೆ.

ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿರುವ ಬಿಜಿಎಸ್ ಸಂಸ್ಥೆ ಈಗ ಕ್ರೀಡಾಮನೋಭಾವ ಬೆಳೆಸುವ ಕಡೆ ಗಮನಹರಿಸಿದೆ. ಅತ್ಯುತ್ತಮ ಸುಸಜ್ಜಿತ ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣ ಇದಾಗಿದೆ. ಇನ್ನು ಈ ಸಮಾರಂಭದಲ್ಲಿ ನಟ ಸುದೀಪ್ ಮತ್ತು ರಾಹುಲ್ ದ್ರಾವಿಡ್ ಜೊತೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದ ಸ್ವಾಮಿ, ಆರ್ಟ್ ಆಫ್ ಲೀವಿಂಗ್ ನ ಶ್ರೀ ರವಿಶಂಕರ್ ಗುರೂಜಿ, ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Click it and Unblock the Notifications











