JMFC ಕೋರ್ಟ್ಗೆ ಧಾವಿಸಿದ ಕಿಚ್ಚ: ನಿರ್ಮಾಪಕ ಎಂ. ಎನ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಿರ್ಮಾಪಕರಾದ ಎಂ.ಎನ್ ಕುಮಾರ್ ಹಾಗೂ ಎಂ.ಎನ್ ಸುರೇಶ್ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇಂದು(ಜುಲೈ 15) ನಗರದ ಜೆಎಂಎಫ್ಸಿ ಕೋರ್ಟ್ಗೆ ಆಗಮಿಸಿ ಸುದೀಪ್ ಮೊಕದ್ದಮೆ ಹೂಡಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ನಿರ್ಮಾಪಕರಾದ ಎಂ. ಎನ್ ಕುಮಾರ್ ನಟ ಸುದೀಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಆರೋಪಕ್ಕೆ ಸೂಕ್ತ ದಾಖಲೆ ನೀಡಬೇಕು, ಸುಳ್ಳು ಆರೋಪ ಮಾಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಸುದೀಪ್ 10 ದಿನ ಗಡುವು ನೀಡಿ ನಿರ್ಮಾಪಕರಿಗೆ ಲೀಗಲ್ ನೋಟಿಸ್ ನೀಡಿದ್ದರು. ಆದರೆ ಅದಕ್ಕೆ ಉತ್ತರ ಸಿಗದ ಹಿನ್ನೆಲೆಯಲ್ಲಿ ಸುದೀಪ್ ಇದೀಗ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಹೇಳಿದಂತೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಈ ಹಿಂದೆ ಹೇಳಿದಂತೆ ವಕೀಲ ಅಜಯ್ ಕಡಕೋಳ್ ಮೂಲಕ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಇತ್ತೀಚೆಗೆ ನಿರ್ಮಾಪಕರಾದ ಎಂ. ಎನ್ ಕುಮಾರ್ ನಟ ಸುದೀಪ್ ವಿರುದ್ಧ ಗುರುತರ ಆರೋಪ ಮಾಡಿದ್ದರು. ಸುದೀಪ್ ನನಗೆ ಸಿನಿಮಾ ಮಾಡಿಕೊಡುವುದಾಗಿ ಹೇಳಿ ಅಡ್ವಾನ್ಸ್ ಹಣ ಪಡೆದು ಕಾಲ್ಶೀಟ್ ಕೊಡುತ್ತಿಲ್ಲ ಎಂದಿದ್ದರು. ಸುದೀಪ್ ಅವರಿಂದ ವಂಚನೆ ಆಗಿದೆ ಎಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಹಲವು ವರ್ಷಗಳ ಹಿಂದೆ ಅಡ್ವಾನ್ಸ್ ಹಣ ಪಡೆದಿದ್ದ ಸುದೀಪ್ ವಾಪಸ್ ಕೊಟ್ಟಿಲ್ಲ, ಕಾಲ್ಶೀಟ್ ಕೊಡುತ್ತಿಲ್ಲ. ಸತಾಯಿಸುತ್ತಿದ್ದಾರೆ, ಈಗ ನೋಡಿದರೆ ತಮಿಳು ನಿರ್ಮಾಪಕರಿಗೆ ಕಾಲ್ಶೀಟ್ ಕೊಟ್ಟಿರೋದು ಸರೀನಾ? ಎಂದು ಪ್ರಶ್ನಿಸಿದ್ದರು. ಅವರಿಗೆ ಮತ್ತೊಬ್ಬ ನಿರ್ಮಾಪಕ ಎನ್. ಎಂ ಸುರೇಶ್ ಬೆಂಬಲ ಸೂಚಿಸಿದ್ದರು.
ಎಂ. ಎನ್ ಕುಮಾರ್ ಆರೋಪಗಳಿಗೆ ತಮ್ಮ ಆಪ್ತ ಜಾಕ್ ಮಂಜು ಮೂಲಕ ಸುದೀಪ್ ಸ್ಪಷ್ಟನೆ ಕೊಡಿಸುವ ಪ್ರಯತ್ನ ಮಾಡಿದ್ದರು. ಜಾಕ್ ಮಂಜು ಸುದ್ದಿಗೋಷ್ಠಿ ನಡೆಸಿ ಕುಮಾರ್ ಯಾವುದೇ ಅಡ್ವಾನ್ಸ್ ಹಣವನ್ನು ಸುದೀಪ್ ಅವರಿಗೆ ಕೊಟ್ಟಿಲ್ಲ. ಅದಕ್ಕೆ ಯಾವುದೇ ದಾಖಲೆಗಳು ಇಲ್ಲ, ಇದ್ದರೆ ತೋರಿಸಲಿ ಎಂದಿದ್ದರು. ಎಂ. ಎನ್ ಕುಮಾರ್ ಯಾವ ಅರ್ಥದಲ್ಲಿ ಅಡ್ವಾನ್ಸ್ ಹಣ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ ಅನ್ನೋದನ್ನು ವಿವರಿಸಿದ್ದರು.

ಹೀಗೆ ಜಾಕ್ಮಂಜು ಹಾಗೂ ಎಂ. ಎನ್ ಕುಮಾರ್ ನಡುವೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿತ್ತು. ಇಂತಹ ಸಮಯದಲ್ಲೇ ಸುದೀಪ್ ನಿರ್ಮಾಪಕರ ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಕೇಳಿದ್ದರು. ಇಲ್ಲದೇ ಇದ್ದರೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಬಹಿರಂಗ ಕ್ಷಮೆ ಕೇಳಿ ಎಂದು ನೋಟಿಸ್ ಕಳುಹಿಸಿದ್ದರು. ಉತ್ತರಿಸದೇ ಇದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸುಳಿವು ನೀಡಿದ್ದರು. ಅದರಂತೆ ಇಂದು (ಜುಲೈ 15) ಖುದ್ದಾಗಿ ಜೆಎಂಎಫ್ಸಿ ಕೋರ್ಟ್ಗೆ ಹಾಜರಾಗಿ ಸುದೀಪ್ ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಎಂ. ಎನ್ ಕುಮಾರ್ ಆರೋಪ ಬಳಿಕ ಮತ್ತೊಬ್ಬ ನಿರ್ಮಾಪಕ ರಹಮಾನ್ ಕೂಡ ಸುದೀಪ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸುದೀಪ್ ನಟನೆಯ ಸೂಪರ್ ಹಿಟ್ 'ಹುಚ್ಚ' ಚಿತ್ರವನ್ನು ರಹಮಾನ್ ನಿರ್ಮಿಸಿದ್ದರು. ಆ ಸಿನಿಮಾ ಬಳಿಕ ಸುದೀಪ್ ಮಾತು ಕೇಳಿ ಕೆಲ ಸಿನಿಮಾಗಳ ರೀಮೇಕ್ ರೈಟ್ಸ್ ತಂದೆ. ಆದರೆ ಸುದೀಪ್ ಸಿನಿಮಾ ಮಾಡಿಕೊಡಲಿಲ್ಲ. ಆ 35 ಲಕ್ಷ ರೂ. ಹಣವನ್ನು ಸುದೀಪ್ ವಾಪಸ್ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಫಿಲ್ಮ್ ಚೇಂಬರ್ನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದರು. ಇದರ ಬೆನ್ನಲ್ಲೇ ಸುದೀಪ್ ಫಿಲ್ಮ್ ಚೇಂಬರ್ಗೆ ಬಹಿರಂಗ ಪತ್ರ ಬರೆದಿದ್ದರು.
ಯಾವುದೇ ಸಾಕ್ಷಾಧಾರಗಳಿಲ್ಲದೇ ತಮ್ಮ ವಿರುದ್ಧ ಆರೋಪ ಮಾಡುವವರಿಗೆ ಫಿಲ್ಮ್ ಚೇಂಬರ್ಗೆ ಬರುವ ಅವಕಾಶ ಕೊಡಬೇಡಿ. ಏನಾದರೂ ಇದ್ದರೆ ಕೋರ್ಟ್ನಲ್ಲಿ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದಿದ್ದರು. ಇನ್ನು ಇಂದು ಸುದೀಪ್ ಪಿಟಿಷನ್ ಸ್ವೀಕರಿಸಿರುವ ಜೆಎಂಎಫ್ಸಿ ಅರ್ಜಿ ವಿಚಾರಣೆ ಆಗಸ್ಟ್ 17ಕ್ಕೆ ಮುಂದೂಡಿದೆ.


Click it and Unblock the Notifications










