'ನಾವೆಲ್ಲ ಉದ್ದ ಇದ್ದೀವಷ್ಟೆ, ನಿಜ ಸಾಧಕರು ಅವರು' ಹಿರಿಯ ನಟನ ಹೊಗಳಿದ ಸುದೀಪ್
ನಟ ಸುದೀಪ್ 'ಕೆಜಿಎಫ್' ಬಗ್ಗೆ ಮಾತನಾಡಿಲ್ಲವೆಂದೊ ಅಥವಾ ಯಾವುದೋ ಹಳೆಯ ವಿಡಿಯೋದಲ್ಲಿ 'ಕೆಜಿಎಫ್' ಬಗ್ಗೆ ಏನೋ ಹೇಳಿದ್ದಾರೆಂದೊ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಈ ಚರ್ಚೆ ನಡೆಯುತ್ತಿರುವಾಗಲೇ ನಟ ಸುದೀಪ್, ಪ್ರತಿಭಾವಂತ ತಂಡ ಮಾಡಿರುವ ಸಣ್ಣ ಬಜೆಟ್ನ ಸಿನಿಮಾದ ಕಾರ್ಯಕ್ರಮಕ್ಕೆ ಹೋಗಿ ಸಿನಿಮಾಕ್ಕೆ ಹಾರೈಸಿ ಬಂದಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ಎಂದಿಗೂ ಬೆಂಬಲಿಸುತ್ತೇನೆ ಎಂದು ಸೂಚ್ಯಗೊಳಿಸಿದ್ದಾರೆ.
Recommended Video

ನಟ ಜಗ್ಗೇಶ್ ನಟನೆಯ 'ತೋತಾಪುರಿ' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇಂದು ಆಯೋಜಿತವಾಗಿತ್ತು. ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗವಹಿಸಿ, ಟ್ರೇಲರ್ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಸಿನಿಮಾದ ಬಗ್ಗೆ ಚಿತ್ರರಂಗದ ಬಗ್ಗೆ, ಹಿರಿಯ-ಕಿರಿಯ ನಟರ ಬಗ್ಗೆ ಸಾಕಷ್ಟು ವಿಷಯಗಳನ್ನು ಮಾತನಾಡಿದರು, ಸುದೀಪ್ ಆಡಿದ ಮಾತುಗಳಲ್ಲಿ ಅವರ ಕನ್ನಡ ಸಿನಿಮಾ ಪ್ರೇಮ ತುಂಬಿ ತುಳುಕುತ್ತಿತ್ತು.
''ಇವತ್ತಿನ ಚಿತ್ರರಂಗದಲ್ಲಿ ನಾವು ಏನೇ ಆಗಿರಬಹುದು ಆದರೆ ಸಾಧಕರು ನಾವಲ್ಲ. ನಾವು ಉದ್ದಕ್ಕೆ ಇದ್ದೀವಷ್ಟೆ ಆದರೆ ಸಾಧಕರು ನೀವು'' ಎಂದು ನಟ ಜಗ್ಗೇಶ್ ಅವರನ್ನು ಹೊಗಳಿದರು ಸುದೀಪ್. ''ಇವತ್ತಿನ ಚಿತ್ರರಂಗದಲ್ಲಿ ನಟರು, ನಿರ್ಮಾಪಕರು ಹಣ ಸಾಕಷ್ಟು ನೋಡುತ್ತಿರಬಹುದು. ಆದರೆ ಅವತ್ತು ನೀವು, ನಿಮ್ಮಂಥಹವರು ಇದಕ್ಕೆ ಅಡಿಪಾಯ ಹಾಕಿಕೊಟ್ಟಿದ್ದೀರ ಅದರ ಮೇಲೆ ನಾವು ನಿಂತು ಇಂದು ಎಂಜಾಯ್ ಮಾಡುತ್ತಿದ್ದೇವೆ, ನಮಗೆ ಸಿಕ್ಕಿರುವ ಸ್ಟೇಟಸ್ ಅನುಭವಿಸುತ್ತಿದ್ದೇವೆ. ಅದಕ್ಕಾಗಿ ಎಲ್ಲ ಹಿರಿಯ ನಟ-ನಟಿ, ತಂತ್ರಜ್ಞರಿಗೆ ಧನ್ಯವಾದ'' ಎಂದರು ಸುದೀಪ್.

ಡಾಲಿ ನಟನೆಯನ್ನು ಕೊಂಡಾಡಿದ ಸುದೀಪ್
ಡಾಲಿ ಧನಂಜಯ್ ಅನ್ನು ಹೊಗಳಿದ ಸುದೀಪ್, ''ಟ್ರೇಲರ್ನಲ್ಲಿ ನಿಮ್ಮ ಎಂಟ್ರಿ ಬಹಳ ಚೆನ್ನಾಗಿದೆ. ಧನಂಜಯ್ ಒಬ್ಬರು ಸ್ಪೂರ್ತಿ ನೀಡುವ ನಟ. ಬಹಳ ಇಂಟೆನ್ಸ್ ಹಾಗೂ ಆರ್ಗ್ಯಾನಿಕ್ ಮಾದರಿಯ ನಟ. ಅವರ ಮುಖದಲ್ಲಿಯೇ ಆ ಇಂಟೆನ್ಸಿಟಿ ಎನ್ನುವುದು ಕಾಣುತ್ತದೆ. ಅವರು ಹೀರೋಯಿಸಮ್ ಅನ್ನು ನಟಿಸುವ ಅವಶ್ಯಕತೆ ಇಲ್ಲ, ಅವರ ಮುಖದಲ್ಲಿಯೇ ಅದು ಇದೆ. ಅಂಥಹವರು ನಮ್ಮ ನಡುವೆ ಬಹಳ ಕಡಿಮೆ ಇದ್ದಾರೆ'' ಎಂದರು ಸುದೀಪ್.

ನಿಮ್ಮನ್ನು ಹೆಚ್ಚು ಹೆಚ್ಚು ತೆರೆಯ ಮೇಲೆ ನೋಡುವ ಆಸೆಯಿದೆ: ಸುದೀಪ್
''ನೀವು ಸುಮ್ಮನೆ ಇದ್ದರೂ ನಿಮ್ಮ ಸಿನಿಮಾಗಳು ಮಾರಾಟವಾಗುತ್ತದೆ, ನಿಮ್ಮ ಮುಖಭಾವವೇ ಹಾಗಿದೆ. ಇದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಿ, ಕನ್ನಡ ಚಿತ್ರರಂಗದಲ್ಲಿ ನಿಮ್ಮ ರೀತಿಯ ಆರ್ಗ್ಯಾನಿಕ್ ಹಾಗೂ ಇಂಟೆನ್ಸ್ ನಟರ ಅವಶ್ಯಕತೆ ಇದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ನಿಮ್ಮನ್ನು ಇನ್ನೂ ಹೆಚ್ಚು ಹೆಚ್ಚಾಗಿ ತೆರೆಯ ಮೇಲೆ ನೋಡುವ ಆಸೆ ನಮಗೆ ಇದೆ'' ಎಂದರು ಸುದೀಪ್.

''ಆ ಒಂದು ದೃಶ್ಯ ಸಾಕು ಸಿನಿಮಾ ಹೇಗಿದೆ ಎಂದು ಅರಿಯಲು''
ನಿರ್ದೇಶಕ ವಿಜಯ ಪ್ರಸಾದ್ ಬಗ್ಗೆ ಮಾತನಾಡಿದ ಸುದೀಪ್, ''ನೀವು ನಮ್ಮ ಸಿನಿಮಾಗಳಿಗೆ ಡೈಲಾಗ್ ಬರೆದರೆ ಏನಾಗಬಹುದು ಎಂದು ಭಯವಾಗುತ್ತದೆ ನನಗೆ. ನಿಮಗೆ ಅದ್ಭುತವಾದ ಕಲೆ ಸಿದ್ಧಿಸಿದೆ. ಆ ತುಂಟತನ ಎಲ್ಲರಿಗೂ ಬರಲ್ಲ. ರೇಷ್ಮೆ ಸೀರೆಯಲ್ಲಿ ಸುತ್ತಿ ಹೊಡೀತಿರ. ಹಾಗೆ ತಟ್ಟನೆ ಒಂದು ಗಂಭೀರವಾದ ವಿಷಯವನ್ನು ಇಟ್ಟಿರುತ್ತೀರ. ಟ್ರೇಲರ್ನಲ್ಲಿ ಬರುವ ಆ ಮಗುವನ್ನು ದತ್ತು ಪಡೆಯೊ ಸೀನ್ ಒಂದು ಸಾಕು ಸಿನಿಮಾದಲ್ಲಿ ಎಂಥಹಾ ಒಳ್ಳೆಯ ವಿಷಯ ಅಡಗಿದೆ ಎಂದು ಹೇಳಲು'' ಎಂದು ಹೊಗಳಿದರು ಸುದೀಪ್.

ವೀಣಾ ಸುಂದರನ್, ಅದಿತಿಗೆ ಹೊಗಳಿಕೆ
ನಟಿ ವೀಣಾ ಸುಂದರನ್ ಹಾಗೂ ನಟಿ ಅದಿತಿ ಪ್ರಭುದೇವಾ ಅವರನ್ನು ಸಹ ಸುದೀಪ್ ಹೊಗಳಿದರು. ನಾನು ಹೆಚ್ಚು ಸಿನಿಮಾ ನೋಡಿಲ್ಲವಾದ್ದರಿಂದ ಹೆಚ್ಚು ನಿಮ್ಮ ಬಗ್ಗೆ ಗೊತ್ತಿಲ್ಲ, ಆದರೆ ಈ ಸಿನಿಮಾದಲ್ಲಿ ನಿಮ್ಮ ನಟನೆ ಚೆನ್ನಾಗಿದೆ ಎಂಬುದು ಟ್ರೇಲರ್ನಿಂದ ಗೊತ್ತಾಗುತ್ತಿದೆ ಎಂದರು ಸುದೀಪ್. ಇನ್ನು ಹಿರಿಯ ನಟಿ ವೀಣಾ ಅವರ ಜೊತೆ ಹಿಂದೆ ನಟಿಸಿದ್ದ ಹಾಗೂ 'ಮಾಣಿಕ್ಯ' ಸಿನಿಮಾದಲ್ಲಿ ಅವರಿಗೆ ನಿರ್ದೇಶನ ಮಾಡಿದ್ದ ಒಳ್ಳೆಯ ಅನುಭವವನ್ನು, ಅವರೆಂಥಹಾ ಒಳ್ಳೆಯ ನಟಿ ಎಂಬುದಕ್ಕೆ ಉದಾಹರಣೆಯನ್ನೂ ಸುದೀಪ್ ನೀಡಿದರು.


Click it and Unblock the Notifications











