twitter
    For Quick Alerts
    ALLOW NOTIFICATIONS  
    For Daily Alerts

    'ಕಾಂತಾರ' ಸಿನಿಮಾ ನೋಡಿ ಮೆಚ್ಚಿದ ಸುದೀಪ್: ರಿಷಬ್‌ ಬಗ್ಗೆ ಹೀಗೆಂದರು

    |

    ನಟ ಸುದೀಪ್, ಅತ್ಯುತ್ತಮ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಜೊತೆಗೆ ಒಳ್ಳೆಯ ಸಿನಿಮಾಗಳನ್ನು ಹಾಗೂ ಒಳ್ಳೆಯ ಸಿನಿಮಾ ಕರ್ಮಿಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

    ಅತ್ಯುತ್ತಮ ನಟ, ನಿರ್ದೇಶಕ ಆಗಿರುವ ಸುದೀಪ್, ಒಳ್ಳೆಯ ಸಿನಿಮಾ ವಿಶ್ಲೇಷಕ ಸಹ ಹೌದು. ಉತ್ತಮ ಸಿನಿಮಾಗಳ ಆತ್ಮದ ಬಗ್ಗೆ ಅರಿವಿರುವ ಸುದೀಪ್, ಒಳ್ಳೆಯ ಸಿನಿಮಾಗಳನ್ನು ವೀಕ್ಷಿಸುತ್ತಾರೆ ಹಾಗೂ ಅವುಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅದರಲ್ಲಿಯೂ ತಮ್ಮ ಸಹ ನಟರು, ನಿರ್ದೇಶಕರು ಒಳ್ಳೆಯ ಸಿನಿಮಾ ಮಾಡಿದರೆ ಆ ಬಗ್ಗೆ ತಪ್ಪದೆ ಮೆಚ್ಚುಗೆಯ ನುಡಿಗಳನ್ನು ನುಡಿಯುತ್ತಾರೆ.

    ಇದೀಗ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಹವಾ ಹೆಚ್ಚಿದೆ. ಸಿನಿಮಾದ ಬಗ್ಗೆ ಹಲವರು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. 'ಕಾಂತಾರ' ಸಿನಿಮಾ ವೀಕ್ಷಿಸಿರುವ ನಟ ಸುದೀಪ್, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಮೂಕವಿಸ್ಮಿತಗೊಳಿಸುವ ಸಿನಿಮಾ ಕಾಂತಾರ: ಸುದೀಪ್

    ಮೂಕವಿಸ್ಮಿತಗೊಳಿಸುವ ಸಿನಿಮಾ ಕಾಂತಾರ: ಸುದೀಪ್

    'ಈ ಪತ್ರ ಬರೆಯುವಂತೆ ಮಾಡಿದ ತಂಡಕ್ಕೆ' ಎಂದು ಪತ್ರ ಆರಂಭಿಸಿರುವ ಸುದೀಪ್, ''ನಾವು ಒಳ್ಳೆಯ, ಅದ್ಭುತವಾದ ಸಿನಿಮಾಗಳನ್ನು ನೋಡಿರುತ್ತೇವೆ, ಆದರೆ ಕೆಲವು ಸಿನಿಮಾಗಳು ನಮ್ಮನ್ನು ಮೂಕವಿಸ್ಮಿತಗೊಳಿಸಿಬಿಡುತ್ತವೆ. 'ಕಾಂತಾರ' ಸಹ ಅ ರೀತಿಯದ್ದೇ ಒಂದು ಅಭೂತಪೂರ್ವ ಪ್ರಭಾವವನ್ನು ಪ್ರೇಕ್ಷಕರ ಮೇಲೆ ಹರಿಸುವ ಸಿನಿಮಾ. ಸಿನಿಮಾದ ಬರವಣಿಗೆ ಹಾಗೂ ದೃಶ್ಯಗಳ ಹೆಣಿಗೆ ಅದ್ಭುತವಾಗಿದೆ'' ಎಂದಿದ್ದಾರೆ ಸುದೀಪ್.

    ರಿಷಬ್ ಶೆಟ್ಟಿಯ ನಟನೆಯಂತೂ ಅದ್ಭುತ: ಸುದೀಪ್

    ರಿಷಬ್ ಶೆಟ್ಟಿಯ ನಟನೆಯಂತೂ ಅದ್ಭುತ: ಸುದೀಪ್

    'ರಿಷಬ್ ಶೆಟ್ಟಿಯ ನಟನೆಯಂತೂ ಅತ್ಯದ್ಭುತ. ಅವರ ನಟನೆಯಲ್ಲಿ ಹುಳುಕು ಹುಡುಕುವುದು ಕಷ್ಟ. ಸೀಟಿಗೆ ಒರಗಿ ಸುಮ್ಮನೆ ಆಶ್ಚರ್ಯಚತಿಕವಾಗಿ ರಿಷಬ್‌ ನಟನೆ ಕಣ್ತುಂಬಿಕೊಳ್ಳಬೇಕು ಅಷ್ಟೆ. ಈ ರೀತಿಯ ಒಂದು ಸಬ್ಜೆಕ್ಟ್‌ ಬಗ್ಗೆ ಯೋಚನೆಯಾದರೂ ಹೇಗೆ ಬರಲಿಕ್ಕೆ ಸಾಧ್ಯ ಎಂದು ಚಕಿತಗೊಳ್ಳಬೇಕು, ಕತೆ, ಚಿತ್ರಕತೆಗಿಂತಲೂ ಅತ್ಯದ್ಭುತವಾಗಿ ತೆರೆಯ ಮೇಲೆ ಸಿನಿಮಾ ವ್ಯಕ್ತವಾಗಿದೆ ಎಂದು ನನಗೆ ಎನಿಸುತ್ತದೆ. ಕ್ಲೈಮ್ಯಾಕ್ಸ್‌ ಸಹ ಕತೆಯೊಂದರ ಸಾಮಾನ್ಯ ಎಂಡಿಂಗ್‌ ಎಂಬ ರೀತಿ ಕತೆಯಲ್ಲಿ ವ್ಯಕ್ತವಾಗಿರಬಹುದು, ಆದರೆ ಆ ಸಾಮಾನ್ಯ ಎಂಡಿಂಗ್ ಅನ್ನು ಅದ್ಭುತ ಮಾಡಿರುವುದು ನಿರ್ದೇಶಕನ ಕ್ರಿಯಾಶೀಲತೆಗೆ ಸಾಕ್ಷಿ. ಕ್ಲೈಮ್ಯಾಕ್ಸ್ ಅನ್ನು ಅವರು ಕಲ್ಪಿಸಿಕೊಂಡಿರುವ ರೀತಿ ಅದ್ಭುತ'' ಎಂದಿದ್ದಾರೆ ಸುದೀಪ್.

    ಅಜನೀಶ್ ಲೋಕನಾಥ್ ನಿಜಕ್ಕೂ ಮಾಸ್ಟರ್: ಸುದೀಪ್

    ಅಜನೀಶ್ ಲೋಕನಾಥ್ ನಿಜಕ್ಕೂ ಮಾಸ್ಟರ್: ಸುದೀಪ್

    ಈ ರೀತಿಯ ಭಿನ್ನ ಕತೆಯ ಮೇಲೆ ನಂಬಿಕೆ ಇಟ್ಟು ನಿರ್ದೇಶಕನಿಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ. ಸಿನಿಮಾದ ಬರವಣಿಗೆ, ಕ್ರಿಯಾಶೀಲ ವಿಭಾಗ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಗೆ ವಿಶೇಷ ಅಭಿನಂದನೆ, ನಿಮ್ಮಿಂದ ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ಗೆ ವಿಶೇಷ ಅಭಿನಂದನೆ, ನೀವು ನಿಜವಾಗಿಯೂ ಸಂಗೀತದ ಮಾಸ್ಟರ್. ಹಾಗೂ ಹೊಂಬಾಳೆ ನಿರ್ಮಾಣ ಸಂಸ್ಥೆ, ನೀವು ಇಂಥಹಾ ಕತೆಯ ಮೇಲೆ ನಂಬಿಕೆ ಇಟ್ಟು ಜೊತೆಗೆ ನಿಂತಿದ್ದಕ್ಕೆ ನಿಮಗೆ ಅಭಿನಂದನೆ'' ಎಂದಿದ್ದಾರೆ ಸುದೀಪ್.

    'ಅಭಿಪ್ರಾಯಗಳನ್ನು, ವಿಮರ್ಶೆಗಳನ್ನು ಮೀರಿಸಿದ ಸಿನಿಮಾ'

    'ಅಭಿಪ್ರಾಯಗಳನ್ನು, ವಿಮರ್ಶೆಗಳನ್ನು ಮೀರಿಸಿದ ಸಿನಿಮಾ'

    ''ಸಿನಿಮಾದ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿದ್ದರಿಂದ ನಾನು ಸಿನಿಮಾ ನೋಡಲು ಕುಳಿತೆ. ನಾನು ಕೇಳಿದ ಅಭಿಪ್ರಾಯಗಳಷ್ಟಾದರೂ ಸಿನಿಮಾ ಇರಲಿ ಎಂದುಕೊಂಡಿದ್ದೆ, ಆದರೆ ನಾನು ಕೇಳಿದ ಅಭಿಪ್ರಾಯಗಳನ್ನು, ವಿಮರ್ಶೆಗಳನ್ನೂ ಮೀರಿದ ಸಿನಿಮಾ ಇದಾಗಿದೆ'' ಎಂದಿದ್ದಾರೆ ಸುದೀಪ್. 'ಕಾಂತಾರ' ಸಿನಿಮಾ ದೊಡ್ಡ ಹಿಟ್ ಆಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿವೆ.

    English summary
    Actor Sudeep praised Kantara movie and its team. He said movie is leaving its viwers speechless.
    Saturday, October 8, 2022, 16:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X