ಸುದೀಪ್ ಸಿನಿಮಾ ನಿರ್ದೇಶನ ಆರಂಭಿಸಲು ಆ ಭಿನ್ನಾಭಿಪ್ರಾಯ ಕಾರಣ
ಸುದೀಪ್, ಭಾರತದ ಅತ್ಯುತ್ತಮ ನಾಯಕ ನಟರಲ್ಲಿ ಒಬ್ಬರು. ಅವರ ಅಭಿನಯಕ್ಕೆ ಸಾಟಿಯಾಗಿ ನಿಲ್ಲಬಲ್ಲ ಕೆಲವು ನಾಯಕ ನಟರಷ್ಟೆ ಭಾರತೀಯ ಚಿತ್ರರಂಗದಲ್ಲಿ ಇದ್ದಾರೆ.
ಸುದೀಪ್ ಒಬ್ಬ ಅದ್ಭುತ ನಟ ಮಾತ್ರವಲ್ಲ ಅದ್ಭುತವಾದ ನಿರ್ದೇಶಕ ಸಹ ಹೌದು. ಕೆಲವು ಸದಭಿರುಚಿಯ, ಭಿನ್ನ ರೀತಿಯ ಸಿನಿಮಾಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಸುದೀಪ್ ನಟನೆಗೆ ಅಭಿಮಾನಿಗಳಿರುವಂತೆ ಅವರ ನಿರ್ದೇಶನಕ್ಕೂ ಅಭಿಮಾನಿಗಳಿದ್ದಾರೆ.
ಸುದೀಪ್ ಒಳ್ಳೆಯ ನಿರ್ದೇಶಕರಾಗಿದ್ದರೂ ಸಹ ಅವರು ಬಯಸಿ-ಬಯಸಿ ನಿರ್ದೇಶಕರಾದವರಲ್ಲ. ಸಮಯ ಅವರನ್ನು ನಿರ್ದೇಶಕರನ್ನಾಗುವಂತೆ ಮಾಡಿತು. ಕನ್ನಡದ ಸಿನಿಮಾ ನಿರ್ದೇಶಕರೊಬ್ಬರೊಟ್ಟಿಗೆ ಏರ್ಪಟ್ಟ ಭಿನ್ನಾಭಿಪ್ರಾಯದಿಂದ ನಟ ಸುದೀಪ್ ಸ್ವತಃ ತಾವೇ ಸಿನಿಮಾ ನಿರ್ದೇಶನಕ್ಕಿಳಿದರು. ಆ ಬಗ್ಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸುದೀಪ್ ಹೇಳಿಕೊಂಡಿದ್ದಾರೆ.
''ಹುಚ್ಚ' ಸಿನಿಮಾ ಹಿಟ್ ಆಗಿ ಹೆಸರು ಬಂದ ಬಳಿಕ ಒಂದೆರಡು ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯಿತು. ನಾನು ಮಾಡಿದ ಸಿನಿಮಾಗಳು ಒಂದರಹಿಂದೊಂದು ಹಿಟ್ ಆದವು. ಅದಾದ ಬಳಿಕ ಹಠಾತ್ತನೆ ವೃತ್ತಿಯ ಗ್ರಾಫು ಕೆಳಗೆ ಇಳಿಯಲು ಶುರುವಾಯಿತು. ಒಂದರ ಹಿಂದೊಂದು ಸಿನಿಮಾಗಳು ಸೋಲಲು ಅಥವಾ ಸಾಧಾರಣ ಯಶಸ್ಸನ್ನಷ್ಟೆ ಕಾಣಲು ಆರಂಭಿಸಿದವು. ಸಿನಿಮಾ ಅವಕಾಶಗಳೇ ಬರುವುದು ಕಡಿಮೆ ಆಗಿಬಿಟ್ಟವು'' ಎಂದು ನೆನಪು ಮಾಡಿಕೊಂಡಿದ್ದಾರೆ ಸುದೀಪ್.

ಅವರು ಬಿಟ್ಟ ಸಿನಿಮಾಗಳು ನನಗೆ ಬರುತ್ತಿದ್ದವು: ಸುದೀಪ್
''ಆ ಸಮಯದಲ್ಲಿ ನನ್ನೊಟ್ಟಿಗೆ ಸ್ಪರ್ಧೆಯಲ್ಲಿದ್ದ ನಟರು ನನಗಿಂತಲೂ ಮುಂದೆ ಹೋಗಿ ಬಿಟ್ಟರು. ಅವರು ಬಿಟ್ಟ ಸಿನಿಮಾಗಳು ನನಗೆ ಸಿಗಲು ಆರಂಭವಾಯಿತು. ಅದು ನನಗೆ ಇಷ್ಟವಾಗಲಿಲ್ಲ. ಅಲ್ಲದೆ ಹಾಗೆ ಬಂದ ಸಿನಿಮಾದ ಕತೆಗಳು ಸಹ ಚೆನ್ನಾಗಿ ಏನೂ ಇರುತ್ತಿರಲಿಲ್ಲ. ಆಗ ನಾನು ಒಂದು ಒಳ್ಳೆಯ ಸಿನಿಮಾ ಮಾಡಲು ನಿರ್ಧಾರ ಮಾಡಿದೆ. ಆಗ ಒಂದು ಸಿನಿಮಾ ನೋಡಿದೆ ನನಗೆ ಇಷ್ಟವಾಯಿತು ಅದನ್ನು ಕನ್ನಡದಲ್ಲಿ ನಿರ್ಮಾಣ ಮಾಡುವ ಮನಸ್ಸು ಮಾಡಿದೆ'' ಎಂದಿದ್ದಾರೆ ಸುದೀಪ್.

ನಿರ್ದೇಶಕರೊಟ್ಟಿಗೆ ಜಗಳ ಆಯಿತು: ಸುದೀಪ್
''ನಿರ್ಮಾಣ ಮಾಡುವ ಮನಸ್ಸು ಮಾಡಿ ನನ್ನ ಇಷ್ಟದ ನಿರ್ದೇಶಕ ಒಬ್ಬರನ್ನು ಆ ಸಿನಿಮಾ ನಿರ್ದೇಶಿಸಲು ಒಪ್ಪಿಸಿದೆ. ಆದರೆ ಆ ನಂತರ ಯಾಕೋ ಅವರು ಆ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎಂದರು. ನನಗೂ ಅವರಿಗೂ ತುಸು ಜಗಳವೂ ಆಯಿತು. ಆದರೆ ಆ ನಿರ್ದೇಶಕ ಈಗಿಲ್ಲವಾದ್ದರಿಂದ ನಾನು ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರೊಟ್ಟಿಗಿನ ಆ ಜಗಳದ ಬಳಿಕ. ನಾನೇ ಏಕೆ ಸಿನಿಮಾ ನಿರ್ದೇಶನ ಮಾಡಬಾರದು ಎನಿಸಿತು'' ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.

ತಂದೆ ಧೈರ್ಯ ಕೊಟ್ಟರು: ಸುದೀಪ್
''ನಾನು ಸಿನಿಮಾ ನಿರ್ದೇಶನ ಮಾಡುತ್ತೇನೆಂದು ಹೋಗಿ ನನ್ನ ತಂದೆಯವರ ಬಳಿಕ ಹೇಳಿದೆ. ಅವರು, ''ಬಹಳ ತಡವಾಗಿ ನಿರ್ಧಾರ ಮಾಡಿದ್ದೀಯ'' ಎಂದರು ಅವರೇ ಇಷ್ಟು ಧೈರ್ಯ ನೀಡಿದ ಮೇಲೆ ನನಗೆ ಇನ್ನಷ್ಟು ಹುಮ್ಮಸ್ಸು ಹೆಚ್ಚಾಯಿತು. ಅದಾದ ಎರಡೇ ದಿನಕ್ಕೆ ನಾನು ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ ಘೋಷಿಸಿದೆ. ಅದರ ಮಾರನೇಯ ದಿನವೇ ಸಿನಿಮಾ ನಿರ್ದೇಶನಕ್ಕೆ ಹೊರಟೇ ಬಿಟ್ಟೆ. ಅಲ್ಲಿ ಏನು ಮಾಡಬೇಕು ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಆದರೆ ಧೈರ್ಯ ಮಾಡಿ ಹೊರಟೆ'' ಎಂದು ತಮ್ಮ ಡೈರೆಕ್ಷನ್ ಜರ್ನಿ ಶುರುವಾದ ಬಗ್ಗೆ ಹೇಳಿಕೊಂಡಿದ್ದಾರೆ.

''ನನ್ನನ್ನು ನಾನು ಉಳಿಸಿಕೊಳ್ಳಲು ನಿರ್ದೇಶನ ಮಾಡಿದ್ದೇನೆ''
''ಸಿನಿಮಾ ಆರಂಭವಾದ ಎರಡೇ ದಿನಕ್ಕೆ ನನಗೆ ಮನದಟ್ಟಾಯಿತು ನಾನು ನಿರ್ದೇಶನ ಮಾಡಬಲ್ಲೆ ಎಂದು. ನಾನು ಹೊಸ ಹೊಸ ಐಡಿಯಾಗಳನ್ನು ಮಾಡಿದೆ. ಭಿನ್ನವಾಗಿ ಚಿತ್ರೀಕರಣ ಮಾಡಲು ಯತ್ನಿಸಿದೆ. ನಟರಿಗೆ ಏನು ಮಾಡಬೇಕು ಎಂದು ಸ್ಪಷ್ಟವಾಗಿ ಹೇಳುವಂತಾದೆ. ಕೆಲವು ದಿನಗಳಾಗುತ್ತಿದ್ದಂತೆ ನನ್ನ ಕೆಲಸವನ್ನು ನಾನು ಬಹಳ ಪ್ರೀತಿಸಲು ಆರಂಭಿಸಿದೆ. ನಿರ್ದೇಶನ ನನಗೆ ಇಷ್ಟವಾಗುತ್ತಾ ಹೋಯಿತು. ನನ್ನ ಸಿನಿಮಾಗಳು ಸತತವಾಗಿ ಸೋಲುತ್ತಿವೆ ಎನಿಸಿದಾಗೆಲ್ಲ ನನ್ನ ಸಿನಿಮಾ ನಾನೇ ನಿರ್ದೇಶನ ಮಾಡಿ ನನ್ನ ವೃತ್ತಿಯ ಗ್ರಾಫನ್ನು ಮೇಲಕ್ಕೆತ್ತಿಕೊಂಡಿದ್ದೇನೆ. ಅದೃಷ್ಟಕ್ಕೆ ನಾನು ನಿರ್ದೇಶನ ಮಾಡಿರುವ ಆರೂ ಸಿನಿಮಾಗಳು ನನಗೆ ಎಂದೂ ಮೋಸ ಮಾಡಿಲ್ಲ'' ಎಂದಿದ್ದಾರೆ ಸುದೀಪ್.


Click it and Unblock the Notifications











