ಕಿಚ್ಚನ ಕಾಲಿನ ಮಂಡಿಗೆ ಗಾಯ: ನಡೆದಾಡಲು ಕಷ್ಟ ಎಂದ ಸುದೀಪ್!
ನಟ ಕಿಚ್ಚ ಸುದೀಪ್ ಸದ್ಯ ತಮ್ಮ ಮುಂದಿನ ಸಿನಿಮಾದ ಪ್ರಚಾರದ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ವಿಕ್ರಾಂತ್ ಅಬ್ಬರದ ಪ್ರಚಾರ ಶುರುವಾಗಿದ್ದು ಕಾರ್ಯಕ್ರಮಗಳಲ್ಲಿ ಸುದೀಪ್ ಭಾಗಿಯಾಗುತ್ತಿದ್ದಾರೆ. ಸಿನಿಮಾ ಇದೇ ತಿಂಗಳು ತೆರೆಗೆ ಬರುತ್ತಿದೆ.
ಕಿಚ್ಚನನ್ನು ದೊಡ್ಡ ಪರದೆಯ ಮೇಲೆ ಶೀಘ್ರದಲ್ಲಿಯೇ ಕಂಡುಕೊಳ್ಳ ಬಹುದು ಎಂದು ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಪ್ರಚಾರದ ಕೆಲಸದ ಜೊತೆಗೆ ನಟ ಸುದೀಪ್ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಸುದೀಪ್ ಬಹಿರಂಗಪಡಿಸಿದ್ದಾರೆ.
ನಟ ಉಪೇಂದ್ರ ಅಣ್ಣನ ಮಗ ನಿರಂಜನ್ ಸಿನಿಮಾ 'ನಮ್ಮ ಹುಡುಗರು' ಚಿತ್ರದ ಕಾರ್ಯಕ್ರಮಕ್ಕೆ ಕಿಚ್ಚನನ್ನು ಆಹ್ವಾನಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಭಾಗಿ ಆಗಲು ಕಿಚ್ಚನಿಗೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಅವರಿಗೆ ಕಾಡುತ್ತಿರುವ ಕಾಲಿನ ಸಮಸ್ಯೆ ಎಂದು ಬಹಿರಂಗಪಡಿಸಿದ್ದಾರೆ.

ನಟ ಸುದೀಪ್ ಮಂಡಿಗೆ ಗಾಯ!
ನಟ ಸುದೀಪ್ಗೆ ಕೆಲವು ದಿನಗಳ ಹಿಂದೆ ಮಂಡಿಗೆ ಗಾಯವಾಗಿದೆ. ಕಾಲಿಗೆ ಪೆಟ್ಟು ಬಿದ್ದಿರುವ ಕಾರಣಕ್ಕೆ ಸುದೀಪ್ ಹೆಚ್ಚಾಗಿ ಹೊರಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕಾಲಿನ ನೋವು ಹೆಚ್ಚಿರುವ ಕಾರಣಕ್ಕೆ ನಿರಂಜನ್ ಅಭಿನಯದ 'ನಮ್ಮ ಹುಡುಗರು' ಚಿತ್ರದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಈ ವಿಚಾರವನ್ನು ಸುದೀಪ್ ವಿಡಿಯೋ ಮೂಲಕ ತಿಳಿಸಿದ್ದಾರೆ. ಹಾಗೆ ವಿಡಿಯೋ ಮೂಲಕವೇ ಟ್ರೈಲರ್ ಲಾಂಚ್ ಕೂಡ ಮಾಡಿದ್ದಾರೆ ನಟ ಸುದೀಪ್.

ಕಾಲು ನೋವಿನ ಬಗ್ಗೆ ಕಿಚ್ಚ ಸುದೀಪ್ ಮಾತು!
ವಿಡಿಯೋದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. "ನಿರಂಜನ್ ಮೊದಲಿಗೆ ನನ್ನನ್ನು ಕ್ಷಮಿಸಿ, ನಾನು ಬರಲು ಸಾಧ್ಯವಾಗಲಿಲ್ಲ. ನನ್ನ ಮಂಡಿಗೆ ಪೆಟ್ಟು ಬಿದ್ದ ಕಾರಣ ಕಾಲನ್ನು ಎತ್ತಿಡಲು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಸಾಧ್ಯವಾಗಲೇ ಇಲ್ಲ. ಇದು ನಿಮಗೆ ಎಷ್ಟು ಮುಖ್ಯ ಎಂದು ನನಗೆ ಗೊತ್ತು. ಈ ಸಮಾರಂಭದಲ್ಲಿ ನಾನು ಭಾಗಿಯಾಗಿಲ್ಲ ಎನ್ನುವುದನ್ನು ನೋವಿನಿಂದ ಹೇಳಬೇಕಾಗಿದೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ. ಚಿತ್ರರಂಗದಲ್ಲಿ ಪ್ರತಿಯೊಂದು ಹಂತವನ್ನು ಕೂಡ ನೀವು ಸಂಭ್ರಮಿಸಿ."- ನಟ ಸುದೀಪ್.

ನಿರಂಜನ್ಗೆ ಶುಭಕೋರಿದ ಕಿಚ್ಚ!
ಸುದೀಪ್ ಇದೇ ವೇಳೆ ನಿರಂಜನ್ ಮತ್ತು ತಂಡಕ್ಕೆ ಶುಭಕೋರಿದ್ದಾರೆ. "ಉಪ್ಪಿ ಸರ್ ನೀವೇ ವೈಯಕ್ತಿಕವಾಗಿ ನನಗೆ ಈ ಕಾರ್ಯಕ್ರಮಕ್ಕೆ ಬರಲು ಕರೆ ಮಾಡಿದ್ದೀರಿ. ಆದರೆ ಸಾಧ್ಯವಾಗಲಿಲ್ಲ. ನಿಮಗೆ ಗೊತ್ತು , ನಾನು ಯಾವುದನ್ನೂ ಅಷ್ಟು ಸುಲಭವಾಗಿ ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ ಇದೊಂದು ಬಾರಿ ನನ್ನನ್ನು ಕ್ಷಮಿಸಿಬಿಡಿ. ಇನ್ನು ನಾನು ಇಲ್ಲಿಂದಲೇ ಟ್ರೈಲರ್ ಲಾಂಚ್ ಮಾಡುವುದಕ್ಕೆ ಅತ್ಯಂತ ಖುಷಿ ಇದೆ." ಎಂದಿದ್ದಾರೆ ನಟ ಸುದೀಪ್.

ಗುಣಮುಖರಾಗಿ ಎಂದ ಫ್ಯಾನ್ಸ್!
ಇನ್ನು ಸುದೀಪ್ ಮಾತನಾಡಿದ ಈ ವಿಡಿಯೋ 'ನಮ್ಮ ಹುಡುಗರು' ಚಿತ್ರದ ಕಾರ್ಯಕ್ರಮದಲ್ಲಿ ಹಾಕಲಾಗಿದೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುದೀಪ್ ತಮ್ಮ ಕಾಲು ನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಆದಷ್ಟು ಬೇಗ ಗುಣಮುಖರಾಗಿ ಎಂದು ಸುದೀಪ್ ಕಮೆಂಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಮುಂದಿನ ಚಿತ್ರದ ಮೂಲಕ ನಟ ಸುದೀಪ್ ಯಾವ ಮಟ್ಟದ ದಾಖಲೆಯನ್ನು ಬರೆಯಲಿದ್ದಾರೆ ಎನ್ನುವ ಕುತೂಹಲಗಳು ಕೂಡ ಹೆಚ್ಚಾಗಿದೆ.


Click it and Unblock the Notifications











