ಸದ್ದಿಲ್ಲದೇ ಸಪ್ತಪದಿ ತುಳಿದ ಸುಮುಖ ; 'ಮನದ ಕಡಲು' ಚೆಲುವನ ಮನ ಗೆದ್ದ ಚೆಲುವೆ ಯಾರು ?
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ.
ಇಂತಹದ್ದೊಂದು ಸಂದರ್ಭಕ್ಕೆ ಈ ವರ್ಷದ ಆರಂಭದಲ್ಲಿ ಹಲವರು ಸಾಕ್ಷಿಯಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದಾಹರಣೆಗೆ ನಂದಗೋಕುಲದ ರಕ್ಷಾ, ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ, ಬಾದ್ ಷಾ ಮತ್ತು ಇಶಾ ರಿಖಿ. ಈ ಸಾಲಿಗೆ ಈಗ ಸುಮುಖ ಸೇರಿಕೊಂಡಿದ್ದಾರೆ.

ಹೌದು, ಸುಮುಖ.. ಕನ್ನಡ ಚಿತ್ರರಂಗದ ಭರವಸೆಯ ಬೆಳಕು. ''ಯಾನ'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸುಮುಖ ಆ ನಂತರ ''ಫಿಸಿಕ್ಸ್ ಟೀಚರ್'' ಮೂಲಕ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡರು.
ಆದರೆ ಇವರು ಮಿಂಚಿದ್ದು, ಕನ್ನಡಿಗರ ಮನ ಮತ್ತು ಮನೆ ತಲುಪಿದ್ದು ಯೋಗರಾಜ್ ಭಟ್ ಅವರ ''ಮನದ ಕಡಲು'' ಚಿತ್ರದ ಮೂಲಕ. ಸದ್ಯ ಸಂಜಯ್ ಕೆ.ಕೆ. ನಿರ್ದೇಶನದ ಚಿತ್ರವೊಂದರಲ್ಲಿ ಸುಮುಖ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಇವರದ್ದು ಚಾಕ್ಲೇಟ್ ಬಾಯ್ ಪಾತ್ರವಲ್ಲ ಬದಲಿಗೆ ರಗಡ್ ಪಾತ್ರ.
ಇನ್ನೂ ಸುಮುಖ ರಾತ್ರೋರಾತ್ರಿ ಹೀರೋ ಆದವರಲ್ಲ. ಹಲವು ವರ್ಷ ರಂಗಭೂಮಿಯಲ್ಲಿ ಬೆವರು ಸುರಿಸಿದ್ದಾರೆ ಸುಮುಖ. ಚಿತ್ರರಂಗಕ್ಕೆ ಬರುವ ಮೊದಲು ಮುಂಬೈನ ಪ್ರಸಿದ್ಧ ಪೃಥ್ವಿ ಥಿಯೇಟರ್ ಮತ್ತು ಬೆಂಗಳೂರಿನ ರಂಗಶಂಕರದಲ್ಲಿ ಹಲವು ನಾಟಕಗಳಲ್ಲಿ ಪಾತ್ರಕ್ಕೆ ಸುಮುಖ ಜೀವ ತುಂಬಿದ್ದಾರೆ.
ಇಂಥಾ ಸುಮುಖ ಸದ್ಯ ಸದ್ದಿಲ್ಲದೇ ಸಪ್ತಪದಿಯನ್ನು ತುಳಿದಿದ್ದಾರೆ. ಮೈತ್ರಿ ಉಕಾ ಅವರ ಜೊತೆ ಹೊಸ ಬುದಕಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಸದ್ಯ ಇವರ ಮದುವೆಯ ಆಲ್ಬಂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ನವ ಜೋಡಿಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಸುಮುಖ ಅವರ ಅಭಿಮಾನಿಗಳು ಮತ್ತು ಹಿಂಬಾಲಕರು ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ.

ಯಾರು ಈ ಮೈತ್ರಿ ಉಕಾ..?
ಸುಮುಖ ಅವರ ಕೈ ಹಿಡಿದ ಚೆಲುವೆ ಮೈತ್ರಿ ಮೂಲತಃ ಮುಂಬೈದವರು. ವೃತ್ತಿಯಲ್ಲಿ ಆರ್ಕಿಟೆಕ್ಟ್. ಮುಂಬೈನ ಪ್ರತಿಷ್ಠಿತ ಕಂಪನಿಗಳಲ್ಲಿ ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡುವ ಮೈತ್ರಿ ಇಂದು ನಿನ್ನೆಯಲ್ಲ ಬದಲಿಗೆ ಸುಮುಖ ಅವರನ್ನು ಕಳೆದ 7 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.
ಕಳೆದ 7 ವರ್ಷಗಳ ಹಿಂದೆ ಸುಮುಖ ನಟನೆಯಲ್ಲಿ ಹೆಚ್ಚಿನ ತರಬೇತಿ ಪಡೆಯಲು ಮುಂಬೈಗೆ ತೆರಳಿದ್ದಾಗ ಅಲ್ಲಿ ಮೈತ್ರಿ ಅವರ ಮುಖಾಮುಖಿಯಾಗಿತ್ತು. ಇವರ ಸಂಬಂಧಕ್ಕೆ ರಂಗಭೂಮಿ
ಭದ್ರ ಬುನಾದಿ ಹಾಕಿತು. ಹೀಗೆ ಸುಮ್ಮನೆ ಶುರುವಾದ ಸ್ನೇಹ ಆ ನಂತರ ಪ್ರೇಮದ ಸ್ವರೂಪ ಪಡೆಯಿತು.
ನಾಯಕನಾಗಬೇಕೆಂಬ ಇರಾದೆಯಲ್ಲಿ ಸುಮುಖ ಸ್ಯಾಂಡಲ್ವುಡ್ಗೆ ಬಂದಾಗ ಮೈತ್ರಿ ಮುಂಬೈನಲ್ಲೇ ಇದ್ದರು. ಈ ಲಾಂಗ್ ಡಿಸ್ಟೆನ್ಸ್ ರಿಲೇಶನ್ಶಿಪ್ ಸಹಿಸಿಕೊಳ್ಳಲು ಅಸಾಧ್ಯವಾದರು ಇಬ್ಬರಲ್ಲಿಯೂ ಪ್ರೀತಿ ಹಾಗೇ ಇತ್ತು.
ಸದ್ಯ ಇಬ್ಬರು ಮನೆಯವರ ಸಮ್ಮತಿ ಪಡೆದು ತಮ್ಮ ಪ್ರೀತಿಯ ಮೇಲೆ ದಾಂಪತ್ಯದ ಮುದ್ರೆಯನ್ನು ಸದ್ದುಗದ್ದಲ ಇಲ್ಲದೇ ಒತ್ತಿದ್ದಾರೆ. ಉತ್ತರಾಖಂಡದ ರಿಷಿಕೇಶದ ಸುಂದರ ಪರಿಸರದಲ್ಲಿ, ಗಂಗಾ ನದಿಯ ತಟದಲ್ಲಿ, ಹೊಸ ಬದುಕಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಈ ನವ ಜೋಡಿಗೆ ನಿಮ್ಮ ಆಶೀರ್ವಾದ ಮತ್ತು ಹಾರೈಕೆ ಕೂಡ ಇರಲಿ. ಅಭಿನಂದನೆಗಳು ಸುಮುಖ...!


Click it and Unblock the Notifications











