ಸಿದ್ದರಾಮಯ್ಯ ಮನೆಯಲ್ಲಿ ಟೆನ್ನಿಸ್ ಕೃಷ್ಣ: ಚಿತ್ರರಂಗದಲ್ಲಿರುವ ಗುಂಪುಗಾರಿಕೆ ಬಗ್ಗೆ ಟೆನ್ನಿಸ್ ಬೇಸರ
ಸ್ಯಾಂಡಲ್ ವುಡ್ ನ ಹಿರಿಯ ನಟ ಟೆನ್ನಿಸ್ ಕೃಷ್ಣ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಮೈಸೂರಿನ ರಾಮಕೃಷ್ಣ ನಗರದಲ್ಲಿ ಇರುವ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಕೃಷ್ಣ, ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಟೆನ್ನಿಸ್ ಕೃಷ್ಣ ದಿಢೀರನೆ ಸಿಎಂ ಭೇಟಿಯಾಗುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಭೇಟಿಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಟೆನ್ನಿಸ್ ಕೃಷ್ಣ, ಸಿದ್ದರಾಮಯ್ಯರನ್ನು ಭೇಟಿಯಾದ ಕಾರಣವನ್ನು ಬಹಿರಂಗ ಪಡಿಸುವ ಜೊತೆಗೆ, ಚಿತ್ರರಂಗದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೊದಲು ಹಿರಿಯ ನಟರಿಗೆ ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದ ಟೆನ್ನಿಸ್, ಈಗ ಗುಂಪುಗಾರಿಕೆಯ ಬಗ್ಗೆ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಭೇಟಿಯಾಗಿದ್ದೇಕೆ?
ಸಿನಿಮಾಗಳಿಲ್ಲ, ಅವಕಾಶ ನೀಡುತ್ತಿಲ್ಲ ಎನ್ನುವ ಕೊರಗಿನಲ್ಲಿದ್ದ ಟೆನ್ನಿಸ್ ಇಂದು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಟೆನ್ನಿಸ್ "ನಾನೀಗ ಟೆಂಪರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಇಲ್ಲೆ ಪಕ್ಕದಲ್ಲೆ ಶೂಟಿಂಗ್ ಮಾಡುತ್ತಿದ್ದೆವು. ಹಾಗಾಗಿ ಸಾಹೇಬರನ್ನು ಭೇಟಿಯಾಗಲು ಬಂದೆ. ಅಗಾಗ ಇಲ್ಲಿಗೆ ಬರ್ತ ಇರುತ್ತೇನೆ. ಅವರು ಎಷ್ಟೊ ಬಾರಿ ನನಗೆ ಊಟ ಮಾಡಿಸಿದ್ದಾರೆ. ಅದನ್ನು ಮರೆಯಲು ಸಾಧ್ಯವಿಲ್ಲ" ಎಂದು ಸಿದ್ದರಾಮಯ್ಯ ಬಗ್ಗೆ ಹೇಳಿದ್ದಾರೆ.

ಮಾತನಾಡಲು ಕಲಾವಿದರು ಹೆದರುತ್ತಿದ್ದರು
ಅನೇಕ ದಿನಗಳ ಬಳಿಕ ಕಾಣಿಸಿಕೊಂಡ ಟೆನ್ನಿಸ್ ಅವಕಾಶದ ಬಗ್ಗೆ ಮಾತನಾಡಿದ್ದಾರೆ. "ಅಭಿಮಾನಿಗಳು, ಜನ ಸಿನಿಮಾ ನೋಡುವುದು ಕಡಿಮೆ ಆಗಿದೆ. ಒಳ್ಳೆಯ ಸಿನಿಮಾ ಬರುತ್ತೆ ಜನ ನೋಡಬೇಕು. ಹಿರಿಯ ನಟರಿಗೆ ಅವಕಾಶ ನೀಡುತ್ತಿರಲಿಲ್ಲ. ಈ ಬಗ್ಗೆ ಯಾರು ಮಾತನಾಡುತ್ತಿರಲ್ಲ. ಎಲ್ಲರೂ ಹೆದರುತಿದ್ದರು. ಆದರೆ ನಾನು ಎಷ್ಟು ವರ್ಷ ಅಂತ ಕಾಯಲಿ. ನಾನು ಧೈರ್ಯವಾಗಿ ಮಾತನಾಡಿದ ಮೇಲೆ ಈಗ ಅವಕಾಶ ಸಿಗುತ್ತಿದೆ" ಎಂದು ಹೇಳಿದ್ದಾರೆ.
ಅಭಿಮಾನಿಗಳ ಪ್ರಶ್ನೆಗೆ ಏನು ಹೇಳುವುದು?
ಎಲ್ಲಿ ಹೋದರು ಅಭಿಮಾನಿಗಳು ಕೇಳುತ್ತಿರುತ್ತಾರೆ. ಯಾವ ಸಿನಿಮಾ ಮಾಡುತ್ತೀರಿ, ಎಲ್ಲಿ ಇದ್ದೀರಿ ಎಂದು. ಅವರ ಪ್ರಶ್ನೆಗೆ ಏನು ಉತ್ತಿರಿಸುವುದು ಎಂದು ಟೆನ್ನಿಸ್ ಈ ಹಿಂದೆಯೆ ಬೇಸರ ಹೊರಹಾಕಿದ್ದರು. ಈಗನು ಅದೆ ಮಾತನ್ನು ಹೇಳಿದ್ದರೆ. "ಹಿರಿಯ ನಟರಿಗೂ ಅವಕಾಶ ಕೊಡಿ. ನನಗೆ ತಿನ್ನಲು ಅನ್ನ ಇದೆ. ನಾನು ಎಲ್ಲಾದರು ಬದುಕುತ್ತೇನೆ. ಇಂದಿಗೂ ನನಗೆ ಉತ್ತರ ಕರ್ನಾಟಕದಲ್ಲಿ 30 ಅಡಿ ಕಟೌಟ್ ಹಾಕುತ್ತಾರೆ. ನಾನು ಅಲ್ಲೂ ತಿನ್ನಬಹುದು. ಆದರೆ ಅಭಿಮಾನಿಗಳು ಕೇಳುತ್ತಿದ್ದಾರೆ. ಏನು ಮಾಡುವುದು" ಎಂದಿದ್ದಾರೆ.

ಗುಂಪು ಒಡೆದು ಒಳಹೋಗುವುದು ಕಷ್ಟ
ಚಿತ್ರರಂಗದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ. ಗುಂಪು ಮಾಡಿಕೊಂಡು ಒಂದು ಕೋಟೆ ಕಟ್ಟಿಕೊಂಡಿದ್ದಾರೆ. ಎಲ್ಲೂ ಒಳಗೆ ಹೋಗಲು ಬಿಡುವುದಿಲ್ಲ. ಈಗ ಆ ಕೋಟೆ ಒಡೆದಿದೆ. ಹಾಗಾಗಿ ನಮಗೆ ಅವಕಾಶ ಸಿಗುತ್ತಿದೆ" ಎಂದು ಹೇಳಿದ್ದಾರೆ. ಟೆನ್ನಿಸ್ ಕೃಷ್ಣ ಯಾವ ಗುಂಪಿನ ಬಗ್ಗೆ ಮಾತನಾಡಿದ್ದಾರೆ? ಯಾರ ಬಗ್ಗೆ ಬೇಸರ ಹೊರಹಾಕಿದ್ದಾರೆ ಎನ್ನುವುದು ಚರ್ಚೆಗೆ ಕಾರಣವಾಗಿದೆ.


Click it and Unblock the Notifications











