ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ ಉಪೇಂದ್ರ; ಬುದ್ದಿವಂತ ಮಾಡಿದ ತಪ್ಪೇನು?
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಜೊತೆ ಕನ್ನಡ ನಟ ಉಪೇಂದ್ರ ಸಹ ನಟಿಸಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಈ ವಾರ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಕನ್ನಡ ಸೇರಿ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.
ನಾಗಾರ್ಜುನ, ಸತ್ಯರಾಜ್, ಆಮೀರ್ ಖಾನ್, ಶ್ರುತಿ ಹಾಸನ್ ಸೇರಿ ಘಟಾನುಘಟಿ ಕಲಾವಿದರು 'ಕೂಲಿ' ಚಿತ್ರದಲ್ಲಿ ನಟಿಸಿದ್ದಾರೆ. ಬಹುಕೋಟಿ ವೆಚ್ಚದ ಸಿನಿಮಾ ಬಾಕ್ಸಾಫೀಸ್ನಲ್ಲಿ ಭಾರೀ ಸದ್ದು ಮಾಡುವ ಲೆಕ್ಕಾಚಾರ ಶುರುವಾಗಿದೆ. ದಶಕಗಳ ಹಿಂದೆಯೇ ರಜನಿಕಾಂತ್ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಕಮಾಲ್ ಮಾಡಿದ್ದಾರೆ. ಉಪ್ಪಿ ನಿರ್ದೇಶನಕ್ಕೆ ದೊಡ್ಡ ಪರಭಾಷಿಕರು ಫಿದಾ ಆಗಿದ್ದಾರೆ. ತಮ್ಮ ಅದ್ಭುತ ಪ್ರತಿಭೆಯಿಂದ ಉಪೇಂದ್ರ ಭಾರತೀಯ ಚಿತ್ರರಂಗದಲ್ಲೇ ಅದ್ಭುತ ನಿರ್ದೇಶಕ ಎನಿಸಿಕೊಂಡವರು.

'ಕೂಲಿ' ಚಿತ್ರದ ಆಡಿಯೋ ಲಾಂಚ್ ವೇದಿಕೆಯಲ್ಲಿ ಕೂಡ ರಜನಿಕಾಂತ್ ಮಾತನಾಡಿ ಉಪೇಂದ್ರ ಪ್ರತಿಭೆ ಬಗ್ಗೆ ಹಾಡಿ ಕೊಂಡಾಡಿದ್ದಾರೆ. ರಿಯಲ್ ಸ್ಟಾರ್ ಸರಳತೆ ಎಂಥದ್ದು ಎನ್ನುವುದನ್ನು ಶ್ರುತಿ ಹಾಸನ್ ಹೇಳಿದ್ದಾರೆ. ಅವರನ್ನು ನೋಡಿ ನಾನು ಕಲಿತಿದ್ದೇನೆ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ಆದರೆ ಉಪೇಂದ್ರ ಮಾತ್ರ ತಮಿಳಿಗರನ್ನು ಮೆಚ್ಚಿಸುವ ಪ್ರಯತ್ನಿಸುತ್ತಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ನಟ, ನಿರ್ದೇಶಕ ಉಪೇಂದ್ರ ಪದೇ ಪದೆ ಟ್ರೋಲ್ ಆಗುತ್ತಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ತೆರವು ವಿಚಾರದ ಬಗ್ಗೆ ಉಪೇಂದ್ರ ಪೋಸ್ಟ್ ಕೂಡ ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಇದೀಗ 'ಕೂಲಿ' ಚಿತ್ರದ ಪ್ರಚಾರದ ಭಾಗವಾಗಿ ಉಪೇಂದ್ರ ನಡೆದುಕೊಳ್ಳುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವವರು ಇದ್ದಾರೆ. ನಿಮ್ಮ ಪ್ರತಿಭೆ ಏನು ಎನ್ನುವುದು ಎಲ್ಲರಿಗೂ ಗೊತ್ತು. ಅದನ್ನೆಲ್ಲಾ ಮರೆತು 'ಕೂಲಿ' ಚಿತ್ರದಲ್ಲಿ ಮಾಡಿರುವ ಸಣ್ಣ ಪಾತ್ರಕ್ಕಾಗಿ ಈ ಮಟ್ಟಕ್ಕೆ ಇಳಿದು ನಿಮ್ಮ ಘನತೆ ನೀವೆ ಕಮ್ಮಿ ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಸ್ವತಃ ರಜನಿಕಾಂತ್ 'ಕೂಲಿ' ಚಿತ್ರದ ಆಡಿಯೋ ಲಾಂಚ್ ವೇದಿಕೆಯಲ್ಲಿ ಉಪೇಂದ್ರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಭಾರತದಲ್ಲೇ ಬಹಳ ದೊಡ್ಡ ನಿರ್ದೇಶಕ, ಅವ್ರು ಮಾಡಿದ 'ಓಂ' ಸಿನಿಮಾ ನನ್ನ 10 'ಬಾಷಾ' ಸಿನಿಮಾಗಳಿಗೆ ಸಮ. ಲೋಕೇಶ್ ಕನಕರಾಜ್ ನಾನ್ ಲೀನಿಯರ್ ಸಿನಿಮಾ ಮಾಡ್ತಾರೆ. ಅದನ್ನೆಲ್ಲಾ 30 ವರ್ಷಗಳ ಹಿಂದೆ ಉಪೇಂದ್ರ ಮಾಡಿಬಿಟ್ಟಿದ್ದರು ಎಂದು ತಲೈವಾ ಹೇಳಿದ್ದರು. ಆದರೆ ಅದೇ ಉಪೇಂದ್ರ ವೇದಿಕೆ ಏರಿ "ಲೋಕೇಶ್ ಕನಕರಾಜ್ ಸರ್, ಸ್ಕ್ರೀನ್ಪ್ಲೇ ಮಾಡೋದ್ರಲ್ಲಿ ಮಾಸ್ಟರ್, ಇಂತಹ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ" ಎಂದು ಕೈಎತ್ತಿ ಮುಗಿದಿದ್ದಾರೆ.
ಶ್ರುತಿ ಹಾಸನ್ ವೇದಿಕೆ ಏರಿ "ಉಪೇಂದ್ರ ಸರ್" ಎನ್ನುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿ ಕೂತಿದ್ದ ಉಪ್ಪಿ ಎದ್ದು ಕೈ ಮುಗಿದಿದ್ದಾರೆ. ರಿಯಲ್ ಸ್ಟಾರ್ ಎಲ್ಲದ್ದಕ್ಕೂ ಕೊಂಚ ಅತಿಯಾಗಿಯೇ ರಿಯಾಕ್ಟ್ ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಎಲ್ಲಿ ಎಷ್ಟು ತಗ್ಗಬೇಕೋ ಅಷ್ಟೇ ತಗ್ಗಬೇಕು. ಅತಿಯಾದರೆ ಅಮೃತ ಕೂಡ ವಿಷ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಂದು ಸಿನಿಮಾ ಪಾತ್ರಕ್ಕಾಗಿ ಆತ್ಮಗೌರವವನ್ನು ಬಿಟ್ಟು ಬದುಕುವುದು ಬೇಡ ಎಂದು ಕಿವಿ ಮಾತು ಹೇಳುತ್ತಿದ್ದಾರೆ.
ಕಮಲ್ ಹಾಸನ್ 'ಕೂಲಿ' ಚಿತ್ರತಂಡಕ್ಕೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ರಜನಿಕಾಂತ್ ಅವರು ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಂಭ್ರಮದಲ್ಲಿ 'ಕೂಲಿ' ಚಿತ್ರ ಬರ್ತಿದೆ. ನಿರ್ದೇಶಕ ಲೋಕೇಶ್, ಚಿತ್ರದಲ್ಲಿ ನಟಿಸಿರುವ ನಾಗಾರ್ಜುನ, ಸತ್ಯರಾಜ್, ಉಪೇಂದ್ರ, ನನ್ನ ಮಗಳು ಶ್ರುತಿ ಹಾಸನ್ ಎಲ್ಲರಿಗೂ ಅಭಿನಂದನೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ. ಅದನ್ನು ರೀ-ಟ್ವೀಟ್ ಮಾಡಿ ಉಪೇಂದ್ರ "ಧನ್ಯವಾದ ಸರ್" ಎಂದು ಬರೆದುಕೊಂಡಿದ್ದಾರೆ.
'ಥಗ್ ಲೈಫ್' ಸಿನಿಮಾ ಬಿಡುಗಡೆ ಸಮಯದಲ್ಲಿ ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದರು. ಕಮಲ್ ಕೊನೆಗೂ ಕ್ಷಮೆ ಕೇಳಲಿಲ್ಲ. ಇಂತಹ ಸಮಯದಲ್ಲಿ ಕಮಲ್ ಮಾಡಿದ ಒಂದು ಟ್ವೀಟ್ಗೆ ಉಪೇಂದ್ರ ಈ ರೀತಿ ಸ್ಪಂದಿಸುವ ಅವಶ್ಯಕತೆ ಇರಲಿಲ್ಲ ಎಂದು ಕಾಮೆಂಟ್ ಬಾಕ್ಸ್ನಲ್ಲಿ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











