ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ ಎಂದ ಉಪೇಂದ್ರ!
ಪ್ರಜಾಕೀಯ 6 ವರ್ಷ ಪೂರೈಸಿದ ಸಂದರ್ಭದಲ್ಲಿ ಶನಿವಾರ (ಆಗಸ್ಟ್ 12) ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿದ್ದ ಬಹುಭಾಷಾ ನಟ ಉಪೇಂದ್ರ "ಊರು ಎಂದ ಮೇಲೆ ಹೊಲಗೇರಿ ಇರುತ್ತೆ" ಎಂದು ಗಾದೆ ಮಾತನ್ನು ಬಳಸಿದ್ದರು. ಇದನ್ನು ಖಂಡಿಸಿ ಹಲವು ಮಂದಿ ಸಾಮಾಜಿಕ ಕಾರ್ಯಕರ್ತರು ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಕೇಲವೆ ಗಂಟೆಗಳಲ್ಲಿ ನಟ ಕ್ಷಮೆ ಕೇಳಿದ್ದರು.
ಆದರೆ, ದಲಿತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ತಮ್ಮ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬುವವರು ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.

ಪ್ರತಿಭಟನೆ, ಎರಡು ದೂರು ದಾಖಲಾದ ಬೆನ್ನಲ್ಲೇ ಈ ಬಗ್ಗೆ ಟ್ವೀಟ್, ಫೇಸ್ಬುಕ್ಗಳಲ್ಲಿ ಹಂಚಿಕೊಂಡಿರುವ ನಟ, "ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ" ಎಂದು ಹೇಳಿದ್ದಾರೆ. ತಾವು ಬೆಳೆದ ಪರಿಸರ, ಬಡತನ, ತಾವು ಕಂಡ ಆತ್ಮಹತ್ಯೆಗಳ ಬಗ್ಗೆ ಮಾತನಾಡಿರುವ ಅವರು, ಯಾಕಿಷ್ಟು ದ್ವೇಷ ಎಂದು ಪ್ರಶ್ನೆ ಮಾಡಿದ್ದಾರೆ.
"ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ.. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ .... ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ.. ?" ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, "ನನಗೆ ಹುಚ್ಚೇ ..? ಅದಕ್ಕೆ ಕಾರಣವಾದರೂ ಏನು..? ಅದರಿಂದ ನನಗೆ ಸಿಗುವ ಲಾಭವಾದರೂ ಏನು...? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ..? ಯಾಕೆ ಇಷ್ಟೊಂದು ದ್ವೇಷ.. ?" ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.
ಇಂದಿನ ಪೋಸ್ಟ್ಗೂ ಹಲವು ಮಂದಿ ಕಾಮೆಂಟ್ ಮಾಡಿದ್ದು, "ಬಡತನದ ನೋವು ಕಂಡಿರಬಹುದು... ಆದರೆ ಅಸ್ಪ್ರಶ್ಯತೆ ನೋವನ್ನು ನೀವು ಕಂಡಿರಲಿಕ್ಕೆ ಸಾಧ್ಯವಿಲ್ಲ ಉಪೇಂದ್ರ ಅವರೇ.... ದಯವಿಟ್ಟು ತಿಳಿದು ಮಾತನಾಡಿ ಇನ್ನು ಮುಂದೆ...." ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು "ಒಂದು ವರ್ಗವನ್ನು ಎತ್ತಿಕಟ್ಟಿ ಮಾತನಾಡುವುದನ್ನು ನಿಲ್ಲಿಸಿ, ಕ್ಷಮೆ ಯಾಚನೆಗೆ ಅದರದೇ ಮಹತ್ವವಿದೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ವಿಚಾರಕ್ಕೆ ಮಹತ್ವ ಕೊಡಿ. ವ್ಯಕ್ತಿ ಎಂದಮೇಲೆ ಮಾತಿನ ಹಿಡಿತದಲ್ಲಿ ವ್ಯತ್ಯಾಸ ಆಗುತ್ತದೆ. ಕ್ಷಮೆ ಯಾಚಿಸಿದ್ದಾರೆ ಅದು ದೊಡ್ಡ ಗುಣ. ಎಲ್ಲದರಲ್ಲೂ ಬ್ರಹ್ಮಣ್ಯತ್ವದ ಹುಡುಕಾಟ ಕಾಮಾಲೆ ಕಣ್ಣಿನವರಿಗೆ ಸಾಮಾನ್ಯ ಅವರೇನು ಮನುಷ್ಯರಲ್ಲವೇ. ಭೂತಕಾಲದ ವಿಚಾರಗಳನ್ನು ಹಿಡಿದು ಮಾತನಾಡುತ್ತ ಒಂದು ವರ್ಗದವರನ್ನು ಹಿಂಸಿಸಬಾರದು.. ಸಂವಿಧಾನದಲ್ಲಿ ಎಲ್ಲರಿಗೂ ಮಾನ್ಯತೆ ಸಿಕ್ಕಿದೆ ಅನುಭವಿಸೋಣ ದೋಷಿಸುವುದನ್ನು ಬಿಟ್ಟು" ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ನಿನ್ನೆಯೇ ನಟ ಕ್ಷಮೆಯಾಚಿಸಿದ್ದರು. "ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ..." ಎಂದಿದ್ದರು.


Click it and Unblock the Notifications











