ಲೂಸಿಯಾ ಚಿತ್ರದ ಪತ್ತೇದಾರಿ ಸಂಜಯ್ ವಿಧಿವಶ
ಪವನ್ ಕುಮಾರ್ ನಿರ್ದೇಶನದ ಕನ್ನಡ ಚಿತ್ರ ಲೂಸಿಯಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಟರಾಗಿ ಪರಿಚಿತರಾದ ರಂಗಭೂಮಿ ಕಲಾವಿದ, ಲೇಖಕ, ಸಂಘಟಕ ಸಂಜಯ್ ಐಯರ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಸಂಜಯ್ ಅವರ ಅಗಲಿಕೆಯ ಸುದ್ದಿಯನ್ನು ನಿರ್ದೇಶಕ ಪವನ್ ಅವರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರ ಪತ್ತೇದಾರಿ ಪಾತ್ರದಲ್ಲಿ ಸಂಜಯ್ ಕಾಣಿಸಿಕೊಂಡಿದ್ದರು. ಬಿಳಿ ಕೂದಲು, ಕಪ್ಪು ಮೀಸೆ, ಕನ್ನಡಕಧಾರಿ ಸಂಜಯ್ ರನ್ನು ಮರೆಯಲು ಸಾಧ್ಯವಿಲ್ಲ.

'ನನ್ ಹೆಸರು ರವೀಂದ್ರನಾಥ್..ನಾನ್ ಮಿನರಲ್ ವಾಟರ್ ಬಿಸಿನೆಸ್ ಮಾಡ್ ಮಾಡ್ತೇನೆ. ಎಂದು ಕಷ್ಟಪಟ್ಟು ಸಂಪೂರ್ಣ ಕನ್ನಡದಲ್ಲಿ ಡೈಲಾಗ್ ಹೊಡೆಯುವ ಶೈಲಿ ಜನ ಮೆಚ್ಚುಗೆ ಪಡೆದಿತ್ತು.
ಸಂಜಯ್ ಐಯ್ಯರ್ ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಬಹಳ ಹೆಮ್ಮೆ ಇದೆ. ಅವರ ಅಗಲಿಕೆ ಬಹಳ ನೋವು ತಂದಿದೆ. ನನ್ನೊಬ್ಬನಿಗೆ ಅಲ್ಲ ಅವರ ಎಲ್ಲಾ ಅಭಿಮಾನಿಗಳಿಗೂ ನೋವುಂಟು ಮಾಡಿದೆ. ಲೂಸಿಯಾ ನಂತರ ನನ್ನ ಮುಂದಿನ ಚಿತ್ರ C10H14N2ನಲ್ಲೂ ಒಂದು ಪಾತ್ರದಲ್ಲಿ ಸಂಜಯ್ ನಟಿಸುತ್ತಿದ್ದಾರೆ. ಉಪೇಂದ್ರ ನಿರ್ದೇಶನದ ಉಪ್ಪಿ 2 ಬಹುಶಃ ಅವರ ಕೊನೆ ಚಿತ್ರವಾಗಿದೆ ಎಂದು ಪವನ್ ಹೇಳಿಕೊಂಡಿದ್ದಾರೆ.
ಚಿತ್ರರಂಗಕ್ಕಿಂತ ಹೆಚ್ಚಾಗಿ ರಂಗಭೂಮಿಯಲ್ಲಿ ಕಾಣಿಸಿಕೊಂಡಿದ್ದ ಸಂಜಯ್ ಅವರು ಹಲವಾರು ಪತ್ರಿಕೆಗಳಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವ ಲೇಖನಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಯೋಗರಾಜ್ ಭಟ್, ಪವನ್ ಕುಮಾರ್ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.


Click it and Unblock the Notifications











