ಕನ್ನಡ ಪರ ನಿಲ್ಲದ ಯಶ್-ಸುದೀಪ್ : ಇಬ್ಬರ ವಿರುದ್ಧ ಕನ್ನಡಿಗರ ಬೇಸರ!
ಕನ್ನಡ ಬಾವುಟಕ್ಕೆ ಬೆಂಕಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ. ಹೀಗೆ ಕೆಲವು ದಿನಗಳಿಂದ ಕಿಡಿಗೇಡಿಗಳು ಕನ್ನಡಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಕನ್ನಡಪರ ಹೋರಾಟಗಾರರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಡಿಸೆಂಬರ್ 13 ರಂದು ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್ನವರು ಪ್ರತಿಭಟನಾ ರ್ಯಾಲಿ ಮಾಡಿ ತಿಲಕ್ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದರು.
ಎಂಇಎಸ್ನ ಕೆಲವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ''ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ'' ಎಂದು ಬರೆದು ಕೊಂಡಿದ್ದರು.
ಈ ಘಟನೆಯ ಬಳಿಕ ಕನ್ನಡದ ಹಲವು ಕಲಾವಿದರು ಇದರ ವಿರುದ್ಧ ರೊಚ್ಚಿಗೆದ್ದರು. ಈ ಘಟನೆಯನ್ನು ಖಂಡಿಸಿ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದರೆ ಕನ್ನಡದ ದೊಡ್ಡ ಸ್ಟಾರ್ ನಟರು ಎಂದು ಕರೆಸಿಕೊಳ್ಳುವ ಯಶ್ ಮತ್ತು ಸುದೀಪ್ ಈ ವಿಚಾರದ ಬಗ್ಗೆ ತುಟಿ ಬಿಚ್ಚಿಲ್ಲ.

ಮೌನ ವಹಿಸಿರುವ ಸೋ ಕಾಲ್ಡ್ ಸೂಪರ್ ಸ್ಟಾರ್ಗಳು!
ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟರು ಎಂದು ಕರೆಸಿಕೊಳ್ಳುವ ಮತ್ತು ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ನಟರು ಎನ್ನುವ ಹೆಗ್ಗಳಿಕೆ ಇರುವ ನಟ ಯಶ್ ಮತ್ತು ಸುದೀಪ್ ಕನ್ನಡ ಬಾವುಟ ಸುಟ್ಟು ಹಾಕಿದ್ದರ ಬಗ್ಗೆ ಏನನ್ನು ಮಾತನಾಡಿಲ್ಲ. ಕಡೆ ಪಕ್ಷ ಟ್ವೀಟ್ ಮಾಡಿಯೂ ಇದು ತಪ್ಪು ಎಂದು ಹೇಳಿಲ್ಲ. ತಪ್ಪು ಸರಿ ಪಕ್ಕಕ್ಕಿಟ್ಟು ನೋಡಿದರೆ, ನಾಡು ನುಡಿ ಎನ್ನುವ ವಿಚಾರ ಬಂದಾಗ ಸಿನಿಮಾ ಮಂದಿ ಅದರಲ್ಲಿ ಭಾಗಿ ಆಗುವುದು ಮುಖ್ಯ ಆಗುತ್ತದೆ. ಯಾಕೆಂದರೆ ಸಿನಿಮಾ ಮತ್ತು ಸ್ಟಾರ್ ಗಿರಿಯನ್ನು ಮೀರಿ ಭಾಷೆ ದೊಡ್ಡದು, ನಾಡು ದೊಡ್ಡದು.

ಯಶ್, ಸುದೀಪ್ ನಡೆಗೆ ಭಾರಿ ವಿರೋಧ!
ಕನ್ನಡಿಗರ ಪವರ್ ತೋರಿಸುವುದು ಕೇಲವ ಸಾಮಾನ್ಯನ ಕೆಲಸ ಮಾತ್ರ ಅಲ್ಲ. ಕೆಚ್ಚೆದೆಯ ಸಾಮಾನ್ಯ ಕನ್ನಡಿಗ ಯಾವಾಗಲೂ ಕನ್ನಡದ ಪರವಾಗಿ ಇರುತ್ತಾನೆ. ಆದರೆ ಅದರ ಪವರ್ ಹೆಚ್ಚಬೇಕು ಅಂದರೆ ಪವರ್ನಲ್ಲಿ ಇರುವವರು ಅಖಾಡಕ್ಕೆ ಇಳಿಯ ಬೇಕು. ದಿನೇ ದಿನೇ ಈ ಪ್ರಕರಣದ ಕಾವು ಹೆಚ್ಚುತ್ತಿದ್ದರೂ ಕೂಡ, ಕನ್ನಡದ ಸೋ ಕಾಲ್ಡ್ ಸೂಪರ್ ಸ್ಟಾರ್ಗಳಾದ ಯಶ್ ಮತ್ತು ಸುದೀಪ್ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ನಟ ಯಶ್ ಮತ್ತು ಸುದೀಪ್ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡದ ಪರ ನಿಲ್ಲಲು ಪ್ಯಾನ್ ಇಂಡಿಯಾ 'ಸ್ಟಾರ್ ಡಮ್' ಅಡ್ಡಿ ಆಯ್ತಾ?
ನಟ ಸುದೀಪ್ ಕನ್ನಡದ ಜೊತೆಗೆ ಹಿಂದಿ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿ ಕೊಂಡಿದ್ದಾರೆ. ಇನ್ನು ನಟ ಯಶ್ ಕೆಜಿಎಫ್ ಚಿತ್ರದ ಮೂಲಕ ಭಾರತದಾತ್ಯಂತ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಹಾಗಾಗಿ ಈ ಇಬ್ಬರು ನಟರಿಗೆ ಮಹಾರಾಷ್ಟ್ರದ ಗಡಿಯಲ್ಲಿ ಅಭಿಮಾನಿಗಳು ಹೆಚ್ಚಾಗಿ ಇದ್ದಾರೆ. ಅಷ್ಟೆ ಅಲ್ಲ ಅವರ ಮುಂಬರುವ ಸಿನಿಮಾಗಳಿಗೆ ಮಹಾರಾಷ್ಟ್ರದ ನಂಟು ಹೆಚ್ಚು ಇರುವುದು ಅನಿವಾರ್ಯ ಆದಂತಿದೆ. ಬಹುಶಃ ಇದೆ ಕಾರಣಕ್ಕೆ ಈ ನಟರು ಕನ್ನಡದ ಪರವಾಗಿ ಧ್ವನಿ ಎತ್ತುತ್ತಿಲ್ಲ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ.

ಕೆಂಡಾಮಂಡಲವಾದ ಶಿವಣ್ಣ, ದರ್ಶನ್, ಜಗ್ಗೇಶ್!
ಕನ್ನಡದ ಬಾವುಟಕ್ಕೆ ಬೆಂಕಿ ಇಟ್ಟಿರುವ ವಿಚಾರ ತಿಳಿದ ಕೂಡಲೇ ನಟ ಜಗ್ಗೇಶ್, ಶಿವರಾಜ್ಕುಮಾರ್, ದರ್ಶನ್, ದುನಿಯಾ ವಿಜಯ್ ಸೇರಿದಂದೆ ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟವರು ಹೇಡಿಗಳು ಎಂದು ದರ್ಶನ್ ಟ್ವಿಟ್ಟರ್ನಲ್ಲಿ ಗುಡುಗಿದರು. ಜಗ್ಗೇಶ್ ಕೂಡ ಟ್ವೀಟ್ ಮಾಡಿ ವಿರೋಧ ವ್ಯಕ್ತ ಪಡಿಸಿದರು. ಇನ್ನು ನಟ ಶಿವರಾಜ್ಕುಮಾರ್ ಕನ್ನಡಕ್ಕಾಗಿ ಪ್ರಾಣ ಹೋದರು ಪರವಾಗಿಲ್ಲ, ತಾಯಿಯನ್ನು ಸುಟ್ಟರೆ ಬಿಡುವುದಿಲ್ಲ ಎಂದು ದೊಡ್ಡ ಹೋರಟಕ್ಕೆ ಮುನ್ನುಡಿ ಬರೆದಿದ್ದಾರೆ. ಇಷ್ಟಾದರೂ ಕೂಡ ಯಶ್ ಮತ್ತು ಸುದೀಪ್ ಈ ಬಗ್ಗೆ ಮಾತನಾಡದೇ ಇರುವುದು ಕನ್ನಡಿಗರಲ್ಲಿ ಬೇಸರ ತಂದಿದೆ.


Click it and Unblock the Notifications











