ಯುವ 3ನೇ ಚಿತ್ರಕ್ಕೆ ಭಾರೀ ಪ್ಲ್ಯಾನ್; ನಿರ್ದೇಶಕರು, ನಿರ್ಮಾಪಕರು ಯಾರು ಗೊತ್ತಾ?
ದೊಡ್ಮನೆ ಕುಡಿ ಯುವ ರಾಜ್ಕುಮಾರ್ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಾಗಿದೆ. ಸದ್ಯ 'ಎಕ್ಕ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದೊಡ್ಡಮಟ್ಟದಲ್ಲೇ ಸಿನಿಮಾ ನಿರ್ಮಾಣ ಆಗುತ್ತಿದೆ. ಮೈಸೂರಿನ ಬಳಿಕ ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ಶುರುವಾಗಿದೆ. ಇದೆಲ್ಲದರ ನಡುವೆ ಯುವ 3ನೇ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಚಿತ್ರದ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಬಂದಿದ್ದರು. ಮೊದಲ ಪ್ರಯತ್ನದಲ್ಲೇ ಡ್ಯಾನ್ಸ್, ಆಕ್ಷನ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ನಮಗೆ ಮತ್ತೊಬ್ಬರು ಖಡಕ್ ಹೀರೋ ಸಿಕ್ರು ಅಂತ ದೊಡ್ಮನೆ ಅಭಿಮಾನಿಗಳು ಖುಷಿಯಾಗಿದ್ದರು. ರೋಹಿತ್ ಪದಕಿ ನಿರ್ದೇಶನದಲ್ಲಿ ಇದೀಗ 'ಎಕ್ಕ' ಚಿತ್ರದಲ್ಲಿ ಯುವ ನಟಿಸುತ್ತಿದ್ದಾರೆ.

ಪಿಆರ್ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ 'ಎಕ್ಕ' ಚಿತ್ರ ನಿರ್ಮಾಣ ಮಾಡುತ್ತಿವೆ. ಸಂಜನಾ ಆನಂದ್ ಹಾಗೂ ಸಂಪದಾ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಅತುಲ್ ಕುಲಕರ್ಣಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೂನ್ 6ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಹಾಗಾಗಿ ಭರದಿಂದ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ.
'ಎಕ್ಕ' ಸಿನಿಮಾ ಶೂಟಿಂಗ್ ಹಂತದಲ್ಲೇ ಯುವ ರಾಜ್ಕುಮಾರ್ 3ನೇ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಸುಕ್ಕಾ ಸೂರಿ ನಿರ್ದೇಶನದಲ್ಲಿ ಯುವ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೀತಿದೆಯಂತೆ. ಇಂತಾದೊಂದು ಚರ್ಚೆ ಆಗುತ್ತಿರುವುದು ನಿಜ ಎಂದು ಆಪ್ತ ಮೂಲಗಳಿಂದಲೇ ಫಿಲ್ಮಿಬೀಟ್ಗೆ ಮಾಹಿತಿ ಲಭ್ಯವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಯುವ- ಸೂರಿ- ಜಯಣ್ಣ ಕಾಂಬಿನೇಷನ್ ಸಿನಿಮಾ ಪಕ್ಕಾ ಎನ್ನಲಾಗ್ತಿದೆ.

ಮೊದಲ ಪ್ರಯತ್ನದಲ್ಲೇ ಯುವ ರಗನ್ ಹೀರೊ ಆಗಿ ಅಬ್ಬರಿಸಿದ್ದಾರೆ. 'ಎಕ್ಕ' ಚಿತ್ರದಲ್ಲಿ ಮತ್ತಷ್ಟು ರಾ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸೋಕೆ ತಯಾರಿ ನಡೀತಿದೆ. ಮತ್ತೊಂದು ರಕ್ತಸಿಕ್ತ ಅಧ್ಯಾಯವನ್ನು ರೋಹಿತ್ ಪದಕಿ ಬೆಯಲು ಮುಂದಾಗಿದ್ದಾರೆ. ಇನ್ನು ಸುಕ್ಕಾ ಸೂರಿ ಸಿಕ್ಕಾಪಟ್ಟೆ ರಿಯಲಿಸ್ಟಿಕ್, ರಾ ಮೇಕಿಂಗ್ ಸಿನಿಮಾಗಳಿಂದ ಸದ್ದು ಮಾಡಿದವರು. ಯುವ ರೀತಿಯ ರಗಡ್ ಹೀರೊ ಜೊತೆ ಸೂರಿ ಕೈ ಜೋಡಿಸಿದ್ರೆ ಸಿಲ್ವರ್ ಸ್ಕ್ರೀನ್ ಶೇಕ್ ಆಗೋದು ಗ್ಯಾರೆಂಟಿ.
ಸೂರಿ 'ಕಾಗೆ ಬಂಗಾರ' ಸಿನಿಮಾ ಮಾಡೋಕೆ ಸಿದ್ಧರಾಗಿದ್ದಾರೆ ಎನ್ನುವ ಮಾತುಗಳು ಕಳೆದ ವರ್ಷ ಕೇಳಿಬಂದಿತ್ತು. ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ವಿರಾಟ್ ಹೀರೊ ಆಗಿ ನಟಿಸುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ನಿರ್ಮಾಪಕರು ಕೂಡ ಪ್ರತಿಕ್ರಿಯಿಸಿದ್ದರು. ಹಾಗಾಗಿ ಕಾಗೆ ಬಂಗಾರ ಚಿತ್ರಕ್ಕಿಂತ ಮುನ್ನ ಯುವ ರಾಜ್ಕುಮಾರ್ ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳ್ತಾರಾ? ಕಾದು ನೋಡಬೇಕಿದೆ.
ಅಂದಹಾಗೆ ಸೂರಿ ನಿರ್ದೇಶನದ 'ಪಾಪ್ಕಾರ್ನ್ ಮಂಕಿ ಟೈಗರ್' ಹಾಗೂ 'ಬ್ಯಾಡ್ ಮ್ಯಾನರ್ಸ್' ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಆಗಾಗಿ ದೊಡ್ಡದಾಗಿ ಕಂಬ್ಯಾಕ್ ಮಾಡಲು ಸೂರಿ ಮನಸ್ಸು ಮಾಡಿದ್ದಾರೆ. 'ಕಾಗೆ ಬಂಗಾರ' ಅಥವಾ ಯುವ-3 ಎರಡು ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. ಯಾವುದನ್ನು ಮೊದಲು ಫೈನಲ್ ಮಾಡಿ ಚಿತ್ರೀಕರಣಕ್ಕೆ ಮುಂದಾಗುತ್ತಾರೆ ಗೊತ್ತಿಲ್ಲ. ಎರಡೂ ಕೂಡ ಜಯಣ್ಣ ಫಿಲ್ಮ್ಸ್ ಸಿನಿಮಾಗಳೇ ಆಗಿರುವುದರಿಂದ ಯುವ- 03 ಮೊದಲು ಶುರುವಾದರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











