ಟ್ರೋಲ್ ಮಾಡಿದವರ ವಿರುದ್ಧ ದೂರು ನೀಡಿದ ಅನಿತಾ ಭಟ್
ಸಿನಿಮಾ ಸೆಲೆಬ್ರಿಟಿಗಳಿಗೆ ಟ್ರೋಲ್ ಕಾಟ ತಪ್ಪಿದ್ದಲ್ಲ. ಅದರಲ್ಲೂ ನಟಿಯರಿಗಂತೂ ಇದು ನಿತ್ಯದ ಗೋಳು. ಅದರಲ್ಲೂ ಸಾಮಾಜಿಕ ವಿಷಯಗಳ ಬಗ್ಗೆ, ಪ್ರಸ್ತುತ ರಾಜಕೀಯ, ಧಾರ್ಮಿಕ ಸಂಗತಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವ ನಟಿಯರಿಗಂತೂ ಟ್ರೋಲರ್ಗಳು ಬಹುವಾಗಿ ಕಾಟ ಕೊಡುತ್ತಾರೆ.
ಕನ್ನಡದ ನಟಿ ಅನಿತಾ ಭಟ್ ಟ್ವಿಟ್ಟರ್ನಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತಮ್ಮ ಧಾರ್ಮಿಕ, ರಾಜಕೀಯ ಅನಿಸಿಕೆಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಇದು ತುಸು ವೈರಲ್ ಆಗಿತ್ತು. ನಿರೀಕ್ಷೆಯಂತೆಯೇ ಭಿನ್ನ ಅಭಿಪ್ರಾಯವುಳ್ಳ ಕೆಲವು ಟ್ರೋಲ್ ಮನಸ್ಥಿತಿಯ ನೆಟ್ಟಿಗರು ಅನಿತಾ ಭಟ್ ಪೋಸ್ಟ್ಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು.
ಇದೀಗ ನಟಿ ಅನಿತಾ ಭಟ್ ತಮ್ಮ ಮೇಲಿನ ಟ್ರೋಲ್ ದಾಳಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಟಿ ಅನಿತಾ ಭಟ್, ಗೋಡ್ಸೆ ಕುರಿತು ಅಭಿಮಾನದ ಸರಣಿ ಟ್ವೀಟ್ಗಳನ್ನು ಮಾಡಿದ್ದರು. ಜೊತೆಗೆ ಹಿಂದು ಧರ್ಮ, ಬ್ರಾಹ್ಮಣ್ಯ ಇನ್ನಿತರೆ ವಿಷಯಗಳ ಬಗ್ಗೆಯೂ ಅನಿತಾ ಟ್ವೀಟ್ ಮಾಡಿದ್ದರು. ನಟಿಯ ಟ್ವೀಟ್ಗಳು ವೈರಲ್ ಆಗಿದ್ದವು. ಅನಿತಾರ ಟ್ವೀಟ್ಗಳಿಗೆ ಹಲವರು ಪ್ರತಿಕ್ರಿಯೆ ನೀಡಿದ್ದರು. ಕೆಲವರು ಅತಿರೇಕದ ಕಮೆಂಟ್ಗಳನ್ನು, ವೈಯಕ್ತಿಕ ನಿಂದನೆಯ ಕಮೆಂಟ್ಗಳನ್ನು ಸಹ ಮಾಡಿದ್ದರು.
ತಮ್ಮ ಬಗ್ಗೆ ವೈಯಕ್ತಿಕ ನಿಂದನೆ ಮಾಡಿದ, ಅಪಮಾನಕರ ರೀತಿಯಲ್ಲಿ ಟ್ವೀಟ್ ಮಾಡಿದವರ ವಿರುದ್ಧ ನಟಿಯು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಪೊಲೀಸರು ನೀಡಿರುವ ಸ್ವೀಕೃತಿ ಪತ್ರದ ಪ್ರತಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡಿಗ (@vishwas3286) ಎಂಬ ಖಾತೆಯಿಂದ ಕೆಟ್ಟ-ಕೆಟ್ಟ ಟ್ವೀಟ್ಗಳನ್ನು ಕಮೆಂಟ್ಗಳನ್ನು ಅಪರಿಚಿತನೊಬ್ಬ ಮಾಡುತ್ತಿದ್ದು ಆತನನ್ನು ಠಾಣೆಗೆ ಕರೆಯಿಸಿ ಇನ್ನೊಮ್ಮೆ ಹೀಗೆ ಮಾಡದಂತೆ ತಿಳುವಳಿಕೆ ನೀಡಿ ಬಂದೊಬಸ್ತ್ ಮಾಡಬೇಕೆಂದು ಅನಿತಾ ಭಟ್ ಠಾಣೆಯಲ್ಲಿ ಮನವಿ ಮಾಡಿದ್ದಾರೆ.
@vishwas3286 ಖಾತೆಯಿಂದ ಅನಿತಾ ಭಟ್ರ ಖಾಸಗಿ ವಿಷಯದ ಬಗ್ಗೆ ಕೆಟ್ಟ ರೀತಿಯ ಕಮೆಂಟ್ ಬಂದಿರುವುದನ್ನು ಅನಿತಾ ಭಟ್ ಅವರೇ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. @vishwas3286 ಮಾಡಿರುವ ಕೆಟ್ಟ ಕಮೆಂಟ್ಗೆ ಪ್ರತಿಕ್ರಿಯೆ ಕೊಟ್ಟಿರುವ ಮತ್ತೊಬ್ಬ ವ್ಯಕ್ತಿ, ''ಅರೆನಗ್ನ ಚಿತ್ರಗಳನ್ನು ತೋರಿಸಿಯೂ ಈ ನಟಿ ಜನಪ್ರಿಯವಾಗಲಿಲ್ಲ'' ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ. ಇವುಗಳನ್ನು ಅನಿತಾ ಭಟ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿ ''ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಅಂತ ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಯವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರಿಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿನಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು'' ಎಂದಿದ್ದರು ಅನಿತಾ ಭಟ್.
''ಬ್ರಾಹ್ಮಣರು ತೋರಿಸೋದು ಬ್ರಾಹ್ಮಣ್ಯ , ಗೌಡ್ರು ತೋರ್ಸೋದು ಗೌಡತ್ವ, ದಲಿತರು ತೋರಸೋದು ದಲಿತತ್ವ , ಲಿಂಗಾಯತರು ತೋರ್ಸೋದು ಲಿಂಗಾಯತತ್ವ .. ಎಲ್ಲ ಜಾತಿಯವರೂ ಮೇಲು ಕೀಳು ಅನ್ನೋ ಅಸಮಾನತೆ ತೋರಿಸುವಾಗ ಬ್ರಾಹ್ಮಣ್ಯ ಅನ್ನೋ ಹಣೆಪಟ್ಟಿ ಯಾಕೆ ? ದಲಿತರಲ್ಲೂ ಒಳ ಜಾತಿ ಇದೆ ಅಂತ ಕೇಳಿಪಟ್ಟೆ. ಓದಿದಿನಿ ಕೂಡ. ಅದನ್ನ ಯಾವಾಗ ತೊಲಗಿಸೋದು'' ಎಂದು ಇನ್ನೊಂದು ಟ್ವೀಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ ಅನಿತಾ ಭಟ್. ''ನನ್ನ ಅಮ್ಮ ಎಷ್ಟೋ ವರ್ಷಗಳಿಂದ ಜಾತಿ ಪದ್ಧತಿಯನ್ನು ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೆ ದೇವರಿಗೆ ಪೂಜೆ ಸಹ ಮಾಡಿದ್ದಾಳೆ ಆ ಹುಡುಗಿ. ನನಗೆ ಇದರಲ್ಲಿ ವಿಶೇಷತೆ ಏನೂ ಕಂಡಿಲ್ಲ'' ಎಂದು ಬ್ರಾಹ್ಮಣರ ಅವಹೇಳನದ ಬಗ್ಗೆ ಟ್ವೀಟ್ ಮಾಡಿದ್ದರು ನಟಿ.
ನಟಿ ಅನಿತಾ ಭಟ್, 2008ರಲ್ಲಿ ಬಿಡುಗಡೆ ಆದ 'ಸೈಕೊ' ಸಿನಿಮಾದಿಂದ ಆರಂಭಿಸಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ', 'ದೊಡ್ಮನೆ ಹುಡ್ಗಾ', 'ಟಗರು' (ಡಾಲಿ ಗರ್ಲ್ಫ್ರೆಂಡ್ ಪಾತ್ರ), 'ಹೊಸ ಕ್ಲೈಮ್ಯಾಕ್ಸ್', 'ಡಿಎನ್ಎ', 'ಕನ್ನೇರಿ', 'ಕಲಿವೀರ', 'ಬೆಂಗಳೂರು-69', 'ಬಳೆಪೇಟೆ', 'ಜೂಟಾಟ', ತೆಲುಗಿನ 'ಕೃಷ್ಣ ಲಂಕಾ' ಸಿನಿಮಾ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











