ಅಂಕಿತಾ ಅಮರ್ ಈಗ ಫುಲ್ ಬ್ಯುಸಿ ಹುಡುಗಿ
ನಟಿ ಅಂಕಿತಾ ಅಮರ್ ತಮ್ಮ ನಟನಾ ಕೌಶಲ್ಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದು, ಟಿವಿ ಶೋಗಳಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಇವರು, ಈಗ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ.
ಕನ್ನಡ ಮಾತ್ರವಲ್ಲದೇ, ತೆಲುಗಿನ ಕಿರುತೆರೆಯಲ್ಲೂ ನಟಿಸುತ್ತಿರುವ ಅಂಕಿತಾ, ಅಲ್ಲೂ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ, ಈ ಹಿಂದೆ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು. ಎಂಥಹಾ ಪಾತ್ರದಲ್ಲಿಯೂ ಲೀಲಾಜಾಲವಾಗಿ ನಟಿಸುವ ಅಂಕಿತಾ ಅಮರ್ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟ್ ಆಗೇ ಫೇಮಸ್ ಆಗಿದ್ದಾರೆ.
'ಜಗಳಗಂಟಿಯರು', 'ತುಂಟ' ಸಿನಿಮಾಗಳಲ್ಲಿ ನಟಿಸಿರುವ ಅಂಕಿತಾ, 'ಕುಲವಧು' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಈಗಾಗಲೇ ಬಾಲ ನಟಿಯಾಗಿ ಶಂಕರ್ ನಾಗ್ ಅವರ ಜೊತೆಗೆ ನಟಿಸಿದ್ದ ಅಂಕಿತಾ ಅವರು, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದರು. ಅಂಕಿತಾ ಈಗ ಸಿನಿಮಾ, ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ನಟನೆ, ನಿರೂಪಣೆಗೂ ಸೈ
ಅಂಕಿತಾ ಅಮರ್ ಕನ್ನಡ ಕಿರುತೆರೆಯ ಜನಪ್ರಿಯ ನಟಿ. 'ನಮ್ಮನೆ ಯುವರಾಣಿ'ಯ ಮೀರಾ ಪಾತ್ರದ ಮೂಲಕ ಖ್ಯಾತಿಯನ್ನು ಅಂಕಿತಾ ಗಳಿಸಿದ್ದಾರೆ. ಅಂಕಿತಾ ಅಭಿನಯದ ಜೊತೆಗೆ ಗಾಯಕಿಯೂ ಹೌದು, ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. 'ಪುಟ್ಟಗೌರಿ ಮದುವೆ', 'ಕುಲವಧು' ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಬಳಿಕ ನಟನೆಗಷ್ಟೇ ಸೀಮಿತವಾಗಿರದೇ, ನಿರೂಪಣೆಯನ್ನೂ ಮಾಡಿದ್ದಾರೆ. 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡಿ ಜನರ ಮನ ಗೆದ್ದಿದ್ದರು.

ಪರಭಾಷೆಯಲ್ಲೂ ಮಿಂಚುತ್ತಿರುವ ಅಂಕಿತಾ
ಅಂಕಿತಾ ಅಮರ್ ಅವರ ತಂದೆ ತಾಯಿ ಕೂಡ ರಂಗಭೂಮಿಯವರು. ಇದು ಅಂಕಿತಾ ಅವರ ಬಣ್ಣದ ಲೋಕದ ಪಯಣಕ್ಕೆ ಸಹಕಾರಿಯಾಗಿದೆ. ಅಂಕಿತಾ ಅಮರ್ ಮೆಡಿಕಲ್ ಬಯೋ ಕೆಮಿಸ್ಟ್ರಿಯಲ್ಲಿ ಗೋಲ್ಡ್ ಮೆಡಲಿಸ್ಟ್. ಮುಂದೆ ಪಿಎಚ್ಡಿ ಮಾಡುವ ಆಸೆ ಇದೆಯಂತೆ. ಆದರೆ, ನಟನೆಯಲ್ಲಿ ಬ್ಯುಸಿಯಾಗಿರುವುದರಿಂದ ಓದುವುದು ಸಾಧ್ಯವಾಗುತ್ತಿಲ್ಲ. ಇನ್ನು ಅಂಕಿತಾ ಅವರಿಗೆ ತೆಲುಗಿನಲ್ಲೂ ಆಫರ್ ಗಳು ಬಂದಿದ್ದು, 'ಶ್ರೀಮತಿ ಶ್ರೀನಿವಾಸ್' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಮೊದಲ ಚಿತ್ರದಲ್ಲಿ ನಟಿಸುವಾಗಲೇ ಮತ್ತೊಂದು ಆಫರ್
ಅಂಕಿತಾ ಅಮರ್ ಅವರು ಈಗಾಗಲೇ ಪೃಥ್ವಿ ಅಂಬಾರ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಆರ್ಜೆ ಮಯೂರ್ ರಾಘವೇಂದ್ರ ನಿರ್ದೇಶಿಸುತ್ತಿರುವ 'ಅಬ ಜಬ ದಬ' ಚಿತ್ರದಲ್ಲಿ ಅಂಕಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸೆಪ್ಟೆಂಬರ್ ನಲ್ಲಿ ಸಿನಿಮಾವನ್ನು ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಹಿರಿಯ ನಟಿ ಊರ್ವಶಿ ಅವರು ಕೂಡ ನಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಚಿತ್ರವನ್ನು ಅನಂತ ಕೃಷ್ಣ ಶಾಸ್ತ್ರಿ ಅವರ ಎಸ್ ರಾಮ್ ಪ್ರೊಡ್ಯೂಕ್ಷನ್ಸ್ ನ ನೇತೃತ್ವದಲ್ಲಿ ತಯಾರಿಸಲಾಗುತ್ತಿದೆ. ಈ ನಡುವೆಯೇ ಮತ್ತೊಂದು ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ.

ರಕ್ಷಿತ್ ಶೆಟ್ಟಿ ಬ್ಯಾನರ್ ನಲ್ಲಿ ಅಂಕಿತಾ
ಅಂಕಿತಾ ಅಮರ್ ಅವರ ನಟನೆಯ ಮೊದಲ ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಅಷ್ಟರಲ್ಲಾಗಲೇ ಮತ್ತೊಂದು ಚಿತ್ರದಲ್ಲಿ ನಟಿಸುವ ಲಕ್ ಇವರದ್ದಾಗಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಟಿಸುವ ಅವಕಾಶ ಅಂಕಿತಾ ಅವರಿಗೆ ಒದಗಿ ಬಂದಿದೆ. ಪಂಚತಂತ್ರ ಖ್ಯಾತಿಯ ವಿಹಾನ್ ಹೀರೋ ಆಗಿರುವ ಈ ಚಿತ್ರದಲ್ಲಿ ಅಂಖಿತಾ ಅಮರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಈ ಸಿನಿಮಾದ ನಿರ್ದೇಶಕರಾಗಿದ್ದು, ಸಿನಿಮಾ ಹೆಸರನ್ನು ಇನ್ನೂ ರಿವೀಲ್ ಮಾಡಿಲ್ಲ.


Click it and Unblock the Notifications











