ಆಮ್ ಆದ್ಮಿ ಪಕ್ಷ ಸೇರಿದ 'ಅಧ್ಯಕ್ಷ' ನಟಿ: ವಸಂತ ನಗರದಿಂದ ಸ್ಪರ್ಧಿಸುವ ಬಯಕೆ
ಯುವ ಸಿನಿಮಾ ನಟಿ ಆರೋಹಿತ (ಪ್ರಿಯಾಂಕ) ಆಮ್ ಆದ್ಮಿ ಪಕ್ಷಕ್ಕೆ ಬುಧವಾರ ಸೇರ್ಪಡೆಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಆರೋಹಿತ ಅನ್ನು ಎಎಪಿಗೆ ಸ್ವಾಗತಿಸಿದರು.
ಸ್ವಚ್ಛ ರಾಜಕೀಯವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿರುವುದಾಗಿ ಹೇಳಿರುವ ನಟಿ ಆರೋಹಿತ, ವಸಂತನಗರದಿಂದ ಮುಂದಿನ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ವಸಂತ ನಗರ ನಿವಾಸಿಯಾಗಿರುವ ಆರೋಹಿತ ಬಿ.ಕಾಂ ಪದವೀಧರೆ. ಕರಾಟೆ ಪಟುವಾಗಿರುವ ಇವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಭಿನಯ ತರಂಗ ಸಂಸ್ಥೆಯಲ್ಲಿ ಅಭಿನಯ ಕಲಿತು, ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. 'ಆಟಗಾರ', 'ರಾಜ ರಾಜೇಂದ್ರ', 'ಜಗ್ಗಿ', 'ಭಾಗ್ಯ ರಾಜ್', 'ಕಿರಿಕ್ ಪಾರ್ಟಿ', 'ಗೌಡ್ರು ಹೋಟೆಲ್', 'ಕಾವೇರಿ', 'ಆಯುಷ್ಮಾನ್ ಭವ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಅಧ್ಯಕ್ಷ' ಸಿನಿಮಾದಲ್ಲಿನ ಇವರ ಪಾತ್ರ ಬಹಳ ಜನಪ್ರಿಯವಾಗಿತ್ತು. ಪ್ರಾಣಿಪ್ರಿಯಾಗಿರುವ ಆರೋಹಿತರವರು ತಮ್ಮ ಮನೆಯ ಸುತ್ತಮುತ್ತಲಿನ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

ಎಎಪಿ ಸೇರ್ಪಡೆ ಕುರಿತು ಮಾತನಾಡಿದ ನಟಿ ಆರೋಹಿತ, "ಕರ್ನಾಟಕ ಹಾಗೂ ದೇಶದೆಲ್ಲೆಡೆ ಯುವಜನತೆಯು ಬದಲಾವಣೆ ಬಯಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಬದಲಾವಣೆ ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ ತಂದಿದೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ. ಕರ್ನಾಟಕದಲ್ಲೂ ಅಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಎಎಪಿ ಸೇರಿದ್ದೇನೆ" ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, "ಆರೋಹಿತ ಅಂಥಹಾ ಪ್ರತಿಭಾವನ್ವಿತರು ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಛಲದೊಂದಿಗೆ ಎಎಪಿ ಸೇರುತ್ತಿರುವುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಇಂತಹ ನಿಪುಣ ಹಾಗೂ ಪ್ರಬಲ ವ್ಯಕ್ತಿತ್ವಗಳನ್ನು ಆಮ್ ಆದ್ಮಿ ಪಾರ್ಟಿ ಮಾತ್ರ ಆಕರ್ಷಿಸಿ, ಕರ್ನಾಟಕದಲ್ಲಿ ಬದಲಾವಣೆ ತರಬಲ್ಲದು" ಎಂದು ಹೇಳಿದರು,
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, "ತಮ್ಮ ಸ್ವಂತ ವಾರ್ಡ್ ವಸಂತ ನಗರದಿಂದ ಆರೋಹಿತರವರು ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಬಯಸಿರುವುದು ಸಂತಸ ತಂದಿದೆ. ಅವರು ಅಲ್ಲಿ ಜಯಗಳಿಸಿ ನವ ಬೆಂಗಳೂರು ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆಂಬ ವಿಶ್ವಾಸವಿದೆ" ಎಂದು ಹೇಳಿದರು.
ಇತ್ತೀಚೆಗೆ ನಟ ಟೆನ್ನಿಸ್ ಕೃಷ್ಣ ಎಎಪಿ ಪಕ್ಷ ಸೇರ್ಪಡೆಗೊಂಡರು. ಅವರನ್ನು ಮಾಜಿ ಐಪಿಎಸ್ ಅಧಿಕಾರಿ, ಬೆಂಗಳೂರು ಕಮೀನರ್ ಭಾಸ್ಕರ್ ರಾವ್ ಪಕ್ಷಕ್ಕೆ ಸ್ವಾಗತಿಸಿದ್ದರು.
ಇದೇ ಆಗಸ್ಟ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಯಬೇಕಿತ್ತು, ಆದರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಕಾರಣ ಚುನಾವಣೆ ವಿಳಂಬವಾಗುತ್ತಿದೆ. ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಎಎಪಿ ಪ್ರಬಲ ಸ್ಪರ್ಧೆಯನ್ನು ಒಡ್ಡುವ ನಿರೀಕ್ಷೆ ಇದೆ.


Click it and Unblock the Notifications











