ನಟಿ ಚೈತ್ರಾ ಹಳ್ಳಿಕೆರೆ ವಿರುದ್ಧ ಸರಣಿ ಆರೋಪ ಮಾಡಿದ ಪತಿ
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಚೈತ್ರಾ ಹಳ್ಳಿಕೆರೆ ಸಂಸಾರ ಜಗಳ ಬೀದಿಗೆ ಬಂದಾಗಿದೆ. ಎರಡು ದಿನದ ಹಿಂದೆಯಷ್ಟೆ ಮೈಸೂರಿನಲ್ಲಿ ಪತಿಯ ವಿರುದ್ಧ ಚೈತ್ರಾ ಹಳ್ಳಿಕೆರೆ ವಂಚನೆ ಪ್ರಕರಣ ದಾಖಲಿಸಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಪತಿಯ ವಿರುದ್ಧ ಆರೋಪಗಳನ್ನು ಮಾಡಿದ್ದರು.
ಇದೀಗ ನಟಿ ಚೈತ್ರಾ ಹಳ್ಳಿಕೆರೆ ವಿರುದ್ಧ ಪತಿ ಬಾಲಾಜಿ ಸುದ್ದಿಗೋಷ್ಠಿ ನಡೆಸಿ ಚೈತ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ ಹಾಗೂ ಚೈತ್ರಾ ತಮ್ಮ ವಿರುದ್ಧ ನೀಡಿರುವ ದೂರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೈತ್ರಾ ಪತಿ ಬಾಲಾಜಿ, ಮೊದಲು ನಮ್ಮ ಸಂಸಾರ ಚೆನ್ನಾಗಿಯೇ ಇತ್ತು, ಇಬ್ಬರು ಮಕ್ಕಳಾದ ಮೇಲೆ ಚೈತ್ರಾಗೆ ಫ್ರೀಡಂ ಬೇಕು ಎಂದೆನಿಸಲು ಶುರುವಾಯಿತು. ಮಿಸೆಸ್ ಇಂಡಿಯಾ ಸ್ಪರ್ಧೆಗೂ ರೆಡಿಯಾಗಲು ಪ್ರಾರಂಭಿಸಿದರು. ಸ್ವಾತಂತ್ರ್ಯದ ವಿಷಯಕ್ಕೆ ನಮ್ಮಿಬ್ಬರ ನಡುವೆ ಜಗಳಗಳು ನಡೆಯಲು ಆರಂಭವಾಯಿತು. ಆದರೆ ಮಕ್ಕಳ ಕಾರಣಕ್ಕೆ ನಾನು ಎಲ್ಲವನ್ನು ಹಾಗೋ ಹೀಗೋ ಸಹಿಸಿಕೊಂಡು ಹೋದೆ'' ಎಂದಿದ್ದಾರೆ.

ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು: ಬಾಲಾಜಿ
''ನಮ್ಮಿಬ್ಬರ ನಡುವಿನ ಗಲಾಟೆ ಇತ್ತೀಚಿನದ್ದಲ್ಲ ಹಲವು ವರ್ಷಗಳಿಂದಲೂ ಇದು ನಡೆಯುತ್ತಲೇ ಇದೆ. ನನಗೆ ಪಬ್ಲಿಕ್ ಲೈಫ್ ಬೇಕು ಎಂದು ಗಲಾಟೆ ಮಾಡುತ್ತಿದ್ದರು. ಅವಳಿಗೆ ವ್ಯತಿರಿಕ್ತವಾಗಿ ನಾನು ಮಾತನಾಡಿದರೆ ಮಹಿಳಾಪರ ಕಾನೂನುಗಳು ಬಳಸಿಕೊಂಡು ನನ್ನನ್ನು ಜೈಲಿಗೆ ಅಟ್ಟುವುದಾಗಿ ಬೆದರಿಕೆ ಹಾಕಿದ್ದರು'' ಎಂದಿದ್ದಾರೆ ಬಾಲಾಜಿ.

''ಫ್ರೀಡಂ ಬೇಕು ಎಂದು ಸ್ವಂತ ಮನೆ ಬಿಡಿಸಿದರು''
''ಫ್ರೀಡಂ ಬೇಕು ಎಂದು ಇರುವ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆ ಬಾಡಿಸಿದರು. ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಪ್ರತಿದಿನವೂ ಕಿರಕಿರಿಯೇ. ಪ್ರತಿ ದಿನವೂ ಜಗಳವೇ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು. ಈಗಲೂ ಮಕ್ಕಳು ಆಕೆಯ ಬಳಿಯೇ ಇದ್ದಾರೆ. ನನ್ನ ಬಳಿಗೆ ಆಗಾಗ ಬಂದು ಹೋಗುತ್ತಿರುತ್ತಾರೆ. ಇಂಥಹಾ ಒಳ್ಳೆಯ ಮಕ್ಕಳಿರುವಾಗ ಗಲಾಟೆ ಏಕೆ ಎಂದರೂ ಕೇಳುತ್ತಿಲ್ಲ. ಮಕ್ಕಳ ಈವರೆಗಿನ ಎಲ್ಲ ಜವಾಬ್ದಾರಿಯನ್ನು ನಾನೇ ನೋಡಿಕೊಂಡಿದ್ದೇನೆ'' ಎಂದಿದ್ದಾರೆ ಬಾಲಾಜಿ.

ಚೈತ್ರಾಗೆ ಹಣ ಆಸೆ ಹೆಚ್ಚಾಗಿದೆ: ಬಾಲಾಜಿ
''ಚೈತ್ರಾಗೆ ಹಣದ ಆಸೆ ವಿಪರೀತಕ್ಕೆ ಹೋಗಿದೆ. ಒಮ್ಮೆಲೆ 25 ಕೋಟಿ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ಕೋರ್ಟ್ಗೆ ಹೋದಾಗ ನನಗೆ ಅಷ್ಟು ಲಕ್ಷ ಬೇಕು, ಇಷ್ಟು ಲಕ್ಷ ಬೇಕು ಎಂದು ಡಿಮ್ಯಾಂಡ್ ಮಾಡಿದರು. 'ನನಗೆ ಐಶಾರಾಮಿ ಜೀವನ ಅಭ್ಯಾಸವಾಗಿದೆ, ನನಗೆ ಹೆಚ್ಚು ಹಣ ಬೇಕು' ಎಂದು ಚೈತ್ರಾ ನ್ಯಾಯಾಲಯದಲ್ಲಿಯೇ ಹೇಳಿಕೊಂಡಿದ್ದಾರೆ. ಈಗ, ಆಕೆ ಮಾತ್ರವಲ್ಲ, ಆಕೆಯ ಸಹೋದರರು ಬಂದು ನನ್ನ ಬಳಿ ಹಣ ಕೇಳುತ್ತಿದ್ದಾರೆ'' ಎಂದಿದ್ದಾರೆ ಬಾಲಾಜಿ ಪೋತುರಾಜ್.

''ನನ್ನ ತಂದೆಯ ಬಗ್ಗೆ ಆರೋಪ ಮಾಡಿದ್ದು ಬೇಸರವಾಗಿದೆ''
''ಚೈತ್ರಾ ನನ್ನ ಬಗ್ಗೆ ಆರೋಪ ಮಾಡಿದ್ದಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ. ನನ್ನ ತಂದೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವರು ಎಂಥಹಾ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತು, ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಅವರು ಮಾಡಿದ್ದಾರೆ. ನನ್ನ ತಂದೆಯ ವಿರುದ್ಧ ಆರೋಪ ಮಾಡಿದ್ದು ನನಗೆ ಸಹಿಸಿಕೊಳ್ಳಲು ಆಗಲಿಲ್ಲ. ನಾನು ಎಂಥಹಾ ವ್ಯಕ್ತಿ ಎಂಬುದು ಚೈತ್ರಾರ ಅಭಿಮಾನಿಗಳಿಗೂ ಗೊತ್ತು, ನಾನು ಸ್ಪಷ್ಟನೆ ನೀಡುವಂತೆ ಅವರೇ ಒತ್ತಾಯಿಸಿದರು. ಅಲ್ಲದೆ ನನ್ನ ತಂದೆಯ ಬಗ್ಗೆ ಮಾತನಾಡಿದ್ದಕ್ಕೆ ಬೇಸರಗೊಂಡು ನಾನು ಸುದ್ದಿಗೋಷ್ಠಿ ನಡೆಸಬೇಕಾಯಿತು'' ಎಂದಿದ್ದಾರೆ ಬಾಲಾಜಿ.


Click it and Unblock the Notifications











