ನಟಿ ಆತ್ಮಹತ್ಯೆ ಪ್ರಕರಣ ಪ್ರಿಯಕರನ ಬಂಧಿಸಿದ ಪೊಲೀಸರು
ನಟಿ, ನಿರೂಪಕಿ ಚಂದನಾ ಮೇ 28 ರಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ನಟಿ ಚಂದನಾ, ಐದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಕೆಲವು ನಿರೂಪಣೆ ಮಾಡುತ್ತಿದ್ದ ಚಂದನಾ ಇನ್ನೂ ಬಿಡುಗಡೆ ಆಗದ ಕ್ವಾಟರ್ ಲೈಫ್ ಸಿನಿಮಾದಲ್ಲಿ ನಟಿಸಿದ್ದರು. ಕೆಲವು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಂಡಿದ್ದರು.
ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ನಲ್ಲಿ ಚಂದನಾ ಅವರು ಮೇ 28 ರಂದು ಸೆಲ್ಫಿ ವಿಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಿಯಕರ ದಿನೇಶ್ ಮೋಸ ಮಾಡಿದ್ದರಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿತ್ತು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ನಾಪತ್ತೆಯಾಗಿದ್ದ ಪ್ರಿಯಕರ ದಿನೇಶ
ಚಂದನಾ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ದಿನೇಶ್ ನಾಪತ್ತೆಯಾಗಿದ್ದ, ತನಿಖೆ ನಡೆಸುತ್ತಿದ್ದ ಸುದ್ದಗುಂಟೆ ಠಾಣೆಯ ಪೊಲೀಸರು ನಿನ್ನೆ ದಿನೇಶ್ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿದ್ದ
ದಿನೇಶ್ ಮತ್ತು ಚಂದನಾ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಸಂಬಂಧ ದೈಹಿಕ ಸಂಬಂಧದ ವರೆಗೆ ಮುಂದುವರೆದಿತ್ತು. ಬಾಷ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್, ಶೋಕಿಯ ಮನೋಭಾವದವನು. ಹೀಗಾಗಿ ತನ್ನ ಅನುಕೂಲಕ್ಕೆ ಚಂದನಾರನ್ನು ಬಳಸಿಕೊಳ್ಳುತ್ತಿದ್ದ. ಲಕ್ಷಗಟ್ಟಲೆ ಹಣವನ್ನೂ ಪಡೆದಿದ್ದ. 'ನಿನ್ನನ್ನು ಮದುವೆಯಾಗುತ್ತೇನೆ' ಎಂದು ಮಾತು ಕೊಟ್ಟಿದ್ದರಿಂದ ಆಕೆ ಬಲವಾಗಿ ನಂಬಿದ್ದರು. ಚಂದನಾ ಜೆಪಿ ನಗರದಲ್ಲಿ ವಾಸವಿದ್ದ ಮನೆಗೆ ದಿನೇಶ್ ಆಗಾಗ ಬರುತ್ತಿದ್ದ.

ಪೊಟೊ ಡಿಲೀಟ್ ಮಾಡುವಂತೆ ಒತ್ತಾಯ
ಇಬ್ಬರ ಪ್ರೀತಿ ವಿಚಾರ ದಿನೇಶ್ ಮನೆಯವರಿಗೆ ಗೊತ್ತಿತ್ತು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪಗಳು ಶುರುವಾಗಿದ್ದವು. ಚಂದನಾ ನಡತೆಯ ಬಗ್ಗೆ ದಿನೇಶ್ ಅನುಮಾನ ವ್ಯಕ್ತಪಡಿಸತೊಡಗಿದ್ದ. ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ತನ್ನೊಂದಿಗೆ ಇರುವ ಫೋಟೊಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದ. ಆದರೆ ಆತನ ಜತೆಗಿದ್ದ ಅನೇಕ ಫೋಟೊಗಳನ್ನು ಶೇರ್ ಮಾಡಿದ್ದರು. ಕೊನೆಗೆ ಮದುವೆಯಾಗಲು ನಿರಾಕರಿಸಿದ.

ಐದು ಲಕ್ಷ ಕೊಡುವಂತೆ ಕೇಳಿದ್ದ
ಮದುವೆಯಾಗಬೇಕೆಂದರೆ ಐದು ಲಕ್ಷ ರೂ ಕೊಡುವಂತೆ ಕೇಳಿದ. ಇದರ ಬಗ್ಗೆ ಚಂದನಾ ಮನೆಯಲ್ಲಿ ಹೇಳಿದಾಗ ಮದುವೆಯಾದ ನಂತರ ಹಣ ಕೊಡುವುದಾಗಿ ಮನೆಯವರು ಭರವಸೆ ನೀಡಿದ್ದರು. ದಿನೇಶ್ ಮನೆಗೆ ಹೋಗಿ ಮದುವೆ ವಿಚಾರ ಪ್ರಸ್ತಾಪಿಸಿದ್ದರು. ದಿನೇಶ್ ತಂದೆ ಲೋಕಪ್ಪ ಗೌಡ, ತಾಯಿ ಗಾಯತ್ರಿ, ಚಿಕ್ಕಮ್ಮ ಶೈಲಾ ಹಾಗೂ ಸೋದರಮಾವ ದಯಾನಂದ ಮದುವೆಗೆ ಸುತಾರಾಂ ಒಪ್ಪುವುದಿಲ್ಲ ಎಂದಿದ್ದರು. ಚಂದನಾ ನಡತೆ ಸರಿಯಿಲ್ಲ. ಅವಳನ್ನು ಹದ್ದುಬಸ್ತಿನಲ್ಲಿ ಇರಿಸಿಕೊಳ್ಳಿ ಎಂದು ಅವಮಾನಿಸಿದ್ದರು. ಅಷ್ಟೇ ಅಲ್ಲದೆ ದಿನೇಶ್ ಸೋದರ ಮಾವ ಚಂದನಾ ಮನೆಗೆ ಬಂದು ಬೆದರಿಕೆ ಸಹ ಹಾಕಿದ್ದರು ಎನ್ನಲಾಗಿದೆ.

ದಿನೇಶನೇ ಆಸ್ಪತ್ರೆಗೆ ಸೇರಿಸಿದ್ದ
ಚಂದನಾ ವಿಷ ಕುಡಿದಿರುವ ಸಂಗತಿ ತಿಳಿದ ದಿನೇಶ್ ತಾನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಪರಾರಿಯಾಗಿದ್ದಾನೆ. ಸದ್ದುಗುಂಟೆ ಪಾಳ್ಯ ಪೊಲೀಸರು ಚಂದನಾ ಮೊಬೈಲಿನಲ್ಲಿದ್ದ ವಿಡಿಯೋವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದಾರೆ. ದಿನೇಶ್ ಹಾಗೂ ಅವರ ಕುಟುಂಬದವರು ಸೇರಿ ಒಟ್ಟು ಐದು ಮಂದಿ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ವಂಚನೆ, ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.


Click it and Unblock the Notifications











