ಭೋಜ್ಪುರಿಯಿಂದ ಬಿಡುವು ಮಾಡಿಕೊಂಡು ಕನ್ನಡಕ್ಕೆ ಬಂದ ಹರ್ಷಿಕಾ ಪೂಣಚ್ಚ!
ಕನ್ನಡದಲ್ಲಿ 'ಸ್ತಬ್ಧ' ಹೆಸರಿನ ಹೊಸ ಸಿನಿಮಾ ಒಂದು ಸೆಟ್ಟೇರಿದೆ. ಸದ್ಯ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದೆ. ಈ ಚಿತ್ರಕ್ಕೆ ನಿರ್ದೇಶಕ ಲಾಲಿ ರಾಘವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಟ ರಾಘವೇಂದ್ರ ರಾಜ್ಕುಮಾರ್ ಅವರು ಅಪ್ಪು ಅಗಲಿಕೆಯ ನಂತರ, ಕೊಂಚ ಸಮಯ ತೆಗೆದುಕೊಂಡು ತಮ್ಮ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈಗ ಅವರು 'ಸ್ತಬ್ಧ' ಎನ್ನುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಅಪ್ಪನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಭೋಜ್ಪುರಿ ಚಿತ್ರಗಳಲ್ಲಿ ಬ್ಯುಸಿ ಆಗಿದ್ದ ನಟಿ ಹರ್ಷಿಕಾ ಪೂಣಚ್ಚ ಅವರು, ಕನ್ನಡ ಸಿನಿಮಾಗಳಲ್ಲೂ ಕೂಡ ಬ್ಯುಸಿ ಆಗಿದ್ದಾರೆ. ಹರ್ಷಿಕಾ ಪೂಣಚ್ಚ ಅವರಿಗೆ ಭೋಜ್ಪುರಿ ಚಿತ್ರರಂಗದಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲಿ ಹರ್ಷಿಕಾ ಅವರು ಸ್ಟಾರ್ ನಟಿಯಾಗಿದ್ದಾರೆ. ಎರಡನೇ ಭೋಜ್ಪುರಿ ಸಿನಿಮಾಗಾಗಿ ಹರ್ಷಿಕಾ ಅವರು ಕೆಲವು ದಿನಗಳ ಕಾಲ ಅಲ್ಲೇ ಉಳಿದಿದ್ದರು. ಈಗ ಕನ್ನಡ ಚಿತ್ರಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ರಾಘವೇಂದ್ರ ರಾಜ್ಕುಮಾರ್ ಅವರ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಬಗ್ಗೆ ನಟಿ ಹರ್ಷಿಕಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. "ನನ್ನ ಮೊದಲ ಚಿತ್ರದ ನಂತರ ರಾಘಣ್ಣ ಫೋನ್ ಮಾಡಿದ್ದರು. ನಮ್ಮ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ 'ಜಾಕಿ' ಚಿತ್ರದಲ್ಲಿ ನೀವು ನಟಿಸಬೇಕೆಂದರು. ಆಗ ನನಗಾದ ಆನಂದಕ್ಕೆ ಪಾರವೇ ಇಲ್ಲ. ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ರಾಜಕುಮಾರ್ ಅವರ ಮೂರು ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿರುವ ಸಂತೋಷವಿದೆ" ಎಂದು ಹರ್ಷಿಕಾ ಪೂಣಚ್ಚ ಸಂತಸ ವ್ಯಕ್ತ ಪಡಿಸಿದ್ದಾರೆ. ಇದರೊಂದಿಗೆ ಹರ್ಷಿಕಾ ಅವರು 'ತಾಯ್ತ' ಎನ್ನುವ ಕನ್ನಡದ ಸಿನಿಮಾದಲ್ಲೂ ಕೂಡ ಅಭಿನಯಿಸುತ್ತಿದ್ದಾರೆ. ಕನ್ನಡ ಮತ್ತು ಭೋಜ್ಪುರಿ ಸಿನಿಮಾಗಳಲ್ಲಿ ಹರ್ಷಿಕಾ ಪೂಣಚ್ಚ ಅವರು ಬ್ಯುಸಿ ಆಗಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಪ್ರತಾಪ್ ಸಿಂಹ, ಪ್ರಶಾಂತ್ ಸಿದ್ದಿ, ಶ್ರುತಿ ರಾಜ್, ಬೇಬಿ ಅಂಕಿತ, ಚಿನ್ಮಯ್ ಮತ್ತು ಪ್ರಿಯಾಂಕಾ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಿ. ವಿ. ಆರ್ ಸ್ವಾಮಿ ಛಾಯಾಗ್ರಹಣ, ಹಂಸಲೇಖ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ಮಾಡುತ್ತಿದ್ದಾರೆ.


Click it and Unblock the Notifications











