ಸಾವಿನ ಬಗ್ಗೆ ನಟಿ ಜಯಂತಿ ಹೀಗೆ ಹೇಳಿದ್ದರು
ಹಿರಿಯ ನಟಿ ಜಯಂತಿ ನಿಧನ ಹೊಂದಿದ್ದಾರೆ. ಜಯಂತಿ ನಿಧನದಿಂದಾಗಿ ಕನ್ನಡ ಮೇರು ಸಿನಿಮಾ ಕಲಾವಿದರ ಸಾಲಿನ ಮತ್ತೊಬ್ಬ ಕಲಾವಿದೆ ಕಣ್ಮುಚ್ಚಿದಂತಾಗಿದೆ.
Recommended Video
ಸಾವು, ಜಯಂತಿಯನ್ನು ಬಹುವಾಗಿ ಕಾಡುತ್ತಿದ್ದ ವಿಷಯವಾಗಿತ್ತು. ಸಾವು ಜಯಂತಿಯವರನ್ನು ಅಧೀರರನ್ನಾಗಿಸುತ್ತಿತ್ತು. ಈ ಬಗ್ಗೆ ಕೆಲವು ಭಾರಿ ಜಯಂತಿ ಮಾತನಾಡಿದ್ದರು. ಜಯಂತಿಯವರು ತಮ್ಮ ಆತ್ಮೀಯರೊಂದಿಗೂ ಸಹ ಈ ಬಗ್ಗೆ ಹಲವು ಬಾರಿ ಚರ್ಚೆ ಮಾಡಿದ್ದರು.
''ನಾನು ಯಾರ ಅಂತಿಮ ದರ್ಶನಕ್ಕೂ ಹೋಗುವುದಿಲ್ಲ. ಸಾವನ್ನು ನೋಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಈ ನಡವಳಿಕೆಯನ್ನು ಹಲವರು ಅಹಂಕಾರ ಎಂದೂ ಭಾವಿಸಿದ್ದಿದೆ. ಸಾವನ್ನು ನೋಡಿದರೆ ಅದರಿಂದ ಹೊರಗೆ ಬರುವುದು ನನಗೆ ಬಹಳ ಕಷ್ಟ'' ಎಂದಿದ್ದರು ಜಯಂತಿ.
''ಕಲ್ಪನಾ ನನ್ನ ಆತ್ಮೀಯ ಗೆಳತಿ. ಮದ್ರಾಸಿನಲ್ಲಿ ನನ್ನ ಮನೆಯ ಹಿಂದೆಯೇ ಆಕೆಯ ಮನೆ ಇತ್ತು. ಕಲ್ಪನಾ ತೀರಿಹೋದ ವಿಷಯ ಗೊತ್ತಾದಾಗ ಚೀರಿ ಚೀರಿ ಅತ್ತಿದ್ದೆ. ಕಲ್ಪನಾ ಹೊಸ ಮನೆ ಕಟ್ಟಿದಾಗ ಹೋಗಲು ಆಗಿರಲಿಲ್ಲ. ಕಲ್ಪನಾ ಮೃತದೇಹವನ್ನು ಅದೇ ಮನೆಯ ಹಾಲ್ನಲ್ಲಿ ಇಟ್ಟಿದ್ದರು. ಹೋದೆ ಮುಖವನ್ನು ನೋಡುವುದು ಸಹ ಅಂದು ನನ್ನಿಂದ ಸಾಧ್ಯವಾಗಿರಲಿಲ್ಲ. 'ಯಾರಾದರೂ ಜಯಂತಿಯನ್ನು ಮನೆಗೆ ತಲುಪಿಸಿ ಇಲ್ಲವಾದರೆ ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ' ಎಂದಿದ್ದರು ಅಬ್ಬಾಯಿನಾಯ್ಡು ಅವರು'' ಎಂದು ನೆನಪಿಸಿಕೊಂಡಿದ್ದರು ಜಯಂತಿ.

ಹಾಡಿನಲ್ಲಿ ನಟಿಸುವಾಗ ಕಣ್ಣೀರು ಹಾಕಿದ್ದ ಜಯಂತಿ
ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಹತ್ತಿರದ ಪಾತ್ರ ಸಾಯುವ ಸನ್ನಿವೇಶದಲ್ಲಿ ನಟಿಸುವಾಗಲೂ ಜಯಂತಿ ಭಾವುಕರಾಗಿ ಬಿಡುತ್ತಿದ್ದರಂತೆ, 'ಚಕ್ರತೀರ್ಥ' ಸಿನಿಮಾದಲ್ಲಿ ನಟಿಸುವಾಗ ಜಯಂತಿಯವರ ಪತಿಯ ಪಾತ್ರ ಅಪಘಾತದಲ್ಲಿ ನಿಧನವಾಗುತ್ತದೆ. ಆಗ ನಿನ್ನ ರೂಪ ಕಣ್ಣಲ್ಲಿ' ಎಂದು ಹಾಡುತ್ತಾ ಬಿಕ್ಕಳಿಸುತ್ತಾ ಹಾಡುವ ದೃಶ್ಯ ಚಿತ್ರೀಕರಣವಾಗುತ್ತಿರುತ್ತದೆ. ಆ ಹಾಡಿನಲ್ಲಿ ನಟಿಸುವಾಗ ಜಯಂತಿ ಬಹಳ ಅತ್ತಿದ್ದರಂತೆ, ಶಾಟ್ ಕಟ್ ಆಗಿದ್ದು ಸಹ ಗೊತ್ತಾಗದೇ ಅಳುತ್ತಲೇ ಇದ್ದರಂತೆ ಜಯಂತಿ, ಕೊನೆಗೆ ನಿರ್ದೇಶಕರು, ಕ್ಯಾಮೆರಾಮನ್ ಬಂದು ಸಮಾಧಾನ ಮಾಡಿದರಂತೆ ಜಯಂತಿಯವರನ್ನು. 'ನಾನು ಚೆನ್ನಾಗಿದ್ದೇನೆ. ಸಿನಿಮಾದಲ್ಲಿನ ಪಾತ್ರವಷ್ಟೆ ಸತ್ತಿದೆ' ಎಂದು ರಾಜ್ಕುಮಾರ್ ಸಹ ಸಮಾಧಾನಪಡಿಸಿದ್ದರಂತೆ.

ಪುಟ್ಟಣ್ಣನವರ ಸಾವು ಬಹುವಾಗಿ ಕಾಡಿತ್ತು
ಪುಟ್ಟಣ್ಣ ಕಣಗಾಲ್ ಸಾಯುವ ಹಿಂದಿನ ದಿನವಷ್ಟೆ ಆಸ್ಪತ್ರೆಯಲ್ಲಿ ಅವರನ್ನು ಕಂಡು ಧೈರ್ಯ ತುಂಬಿದ್ದ ಜಯಂತಿ, ಪುಟ್ಟಣ್ಣನವರ ಸಾವಿನ ಸುದ್ದಿ ತಿಳಿದಾಗ ಅತೀವವಾಗಿ ಕುಸಿದುಹೋಗಿದ್ದರು ಜಯಂತಿ. ಪುಟ್ಟಣ್ಣ ಕಣಗಾಲ್ ಅವರೊಟ್ಟಿಗೆ ಒಳ್ಳೆಯ ಸ್ನೇಹ ಇಟ್ಟುಕೊಂಡಿದ್ದ ಜಯಂತಿ, ಪುಟ್ಟಣ್ಣ ಕಣಗಾಲ್ ಅವರನ್ನು ಪುಟ್ಟು ಎಂದೇ ಸಂಭೋಧಿಸುತ್ತಿದ್ದರು.

ಆತ್ಮೀಯರ ಅಗಲಿಕೆ ಬಗ್ಗೆ ಹಲವು ಬಾರಿ ಮಾತನಾಡಿದ್ದರು: ಅನು
ಇಂದು ಟ್ವೀಟ್ ಮಾಡಿರುವ ಜಯಂತಿಯವರ ಮಾಜಿ ಸೊಸೆ, ನಟಿ ಅನು ಪ್ರಭಾಕರ್ ಸಹ, ಆತ್ಮೀಯರ ಸಾವು, ಅಗಲಿಕೆ ಬಗ್ಗೆ ಜಯಂತಿಯವರು ಬಹಳ ಬಾರಿ ಮಾತನಾಡಿದ್ದುದಾಗಿ ನೆನಪಿಸಿಕೊಂಡಿದ್ದಾರೆ. ಜಯಂತಿ ತಮ್ಮ ಅಮ್ಮನನ್ನು ಸಹ ಬಹಳವಾಗಿ ಮಿಸ್ ಮಾಡಿಕೊಳ್ಳುತ್ತಿದ್ದರಂತೆ, ಹಾಗಾಗಿಯೇ 'ಅಮ್ಮಮ್ಮನ ಜೊತೆ ನೆಮ್ಮದಿಯಿಂದಿರಿ' ಎಂದು ಅನು ಪ್ರಭಾಕರ್ ಹಾರೈಸಿ ಟ್ವೀಟ್ ಮಾಡಿದ್ದಾರೆ.

ಶಾಂತವಾಗಿ ಸಾವನ್ನು ಅಪ್ಪಿಕೊಂಡಿದ್ದಾರೆ
ಎಲ್ಲರನ್ನೂ ಅತಿಯಾಗಿ ಪ್ರೀತಿಸುತ್ತಿದ್ದ, ಆತ್ಮೀಯವಾಗಿ ಕಾಣುತ್ತಿದ್ದ ಜಯಂತಿ ಸ್ವತಃ ಇಂದು ಕಾಲವಾಗಿದ್ದಾರೆ. ಸಾವಿನ ಬಗ್ಗೆ ಅತೀವ ಆತಂಕವನ್ನು ಹೊಂದಿದ್ದ ಜಯಂತಿ ನಿದ್ದೆಯಲ್ಲಿದ್ದಾಗ ಯಾವುದೇ ಸಂಕಟಗಳಿಲ್ಲದೆ ಸಾವನ್ನು ಅಪ್ಪಿಕೊಂಡಿದ್ದಾರೆ.


Click it and Unblock the Notifications











