'ಜೀವನ' ಹೋರಾಟದಲ್ಲಿ ಸೋತ ಜಯಶ್ರೀ: ಮಾಡೆಲಿಂಗ್, ಬಿಗ್ ಬಾಸ್, ಸಿನಿಮಾ ಕೈಹಿಡಿಯಲಿಲ್ಲ!
ಬಿಗ್ ಬಾಸ್ ಕಾರ್ಯಕ್ರಮದ ಮೂಲಕವೇ ಜಯಶ್ರೀ ರಾಮಯ್ಯ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಿದ್ದು. ಅಲ್ಲಿಯವರೆಗೂ ಜಯಶ್ರೀ ಯಾರು ಎಂದೇ ಬಹುತೇಕರಿಗೆ ತಿಳಿದೇ ಇರಲಿಲ್ಲ. 2015ರಲ್ಲಿ ನಡೆದ ಬಿಗ್ ಬಾಸ್ ಕನ್ನಡ ಮೂರನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು.
Recommended Video
ಹುಚ್ಚ ವೆಂಕಟ್, ಮಾಸ್ಟರ್ ಆನಂದ್, ಪೂಜಾ ಗಾಂಧಿ, ಹಿರಿಯ ನಟಿ ಶ್ರುತಿ, ಚಂದನ್, ನಿರೂಪಕ ರೆಹಮಾನ್ ಎಲ್ಲರೂ ಭಾಗಿಯಾಗಿದ್ದ ಆವೃತ್ತಿಯಲ್ಲಿ ಜಯಶ್ರೀ ಸಹ ಇದ್ದರು. ಆದರೆ, ಎರಡೇ ವಾರದಲ್ಲಿ ಜಯಶ್ರೀ ಬಿಗ್ಬಾಸ್ನಿಂದ ಎಲಿಮಿನೇಟ್ ಆದರು. ಬಿಗ್ ಬಾಸ್ ಮುಗಿದ ಬಳಿಕ ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ನಟಿಸಿದರೂ ಗೆಲುವಿನ ಸಿಂಚನ ಸಿಗಲಿಲ್ಲ.
ಇತ್ತೀಚಿಗೆ ಜಯಶ್ರೀ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಜೀವನ ಸಾಕು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಳಲು ತೋಡಿಕೊಂಡಿದ್ದರು. ಚೇತರಿಕೆ ಕಾಣಲಿ, ಹೊಸ ಜೀವನ ಆರಂಭಿಸಲಿ ಎಂದು ಹಲವು ಮಂದಿ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಆದರೆ, ಜಯಶ್ರೀ ಅವರ ಬದುಕನ್ನು ವಿಧಿ ಅಂತ್ಯಗೊಳಿಸಿದೆ. ಮುಂದೆ ಓದಿ....

ಎಚ್ಆರ್ ಆಗಿ ಕೆಲಸ ಮಾಡ್ತಿದ್ರು
ಸಿನಿಮಾ ಹಾಗೂ ಮಾಡೆಲಿಂಗ್ ಕ್ಷೇತ್ರಕ್ಕೆ ಬರುವ ಮೊದಲು ಜಯಶ್ರೀ ರಾಮಯ್ಯ ಖಾಸಗಿ ಕಂಪನಿಯೊಂದರಲ್ಲಿ ಎಚ್ಆರ್ ಆಗಿ ಕೆಲಸ ಮಾಡ್ತಿದ್ರು ಎಂದು ಅವರೇ ಹೇಳಿಕೊಂಡಿದ್ದರು. ತಂದೆಯನ್ನು ಕಳೆದುಕೊಂಡಿದ್ದ ಜಯಶ್ರೀ, ಅಮ್ಮ, ಅಜ್ಜ, ಅಜ್ಜಿ ಜೊತೆ ನೆಲೆಸಿದ್ದರು. ಎಚ್ಆರ್ ವೃತ್ತಿ ಅಷ್ಟು ಖುಷಿ ಇರಲಿಲ್ಲ ಎಂಬ ಕಾರಣಕ್ಕೆ ಬಿಟ್ಟು ಮಾಡೆಲಿಂಗ್ ಕಡೆ ಹೋಗಿದ್ದರಂತೆ.

ಸ್ನೇಹಿತರ ಸಲಹೆ ನಂತರ ಮಾಡೆಲಿಂಗ್
ಮಾಡೆಲಿಂಗ್ ಅಥವಾ ಸಿನಿಮಾದಲ್ಲಿ ಪ್ರಯತ್ನ ಮಾಡು ಎಂದು ಸ್ನೇಹಿತರು ಸಲಹೆ ಕೊಟ್ಟಿದ್ದರು. ಸ್ನೇಹಿತರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಜಯಶ್ರೀ, ಕೆಲವು ಕಾಸ್ಟಿಂಗ್ ನಿರ್ದೇಶಕರ ಇ-ಮೇಲ್ ಪಡೆದು ಫೋಟೋಗಳನ್ನು ಕಳುಹಿಸಿಕೊಟ್ಟಿದ್ದರು. ಅದರಲ್ಲಿ ಕೆಲವರು ಫೋನ್ ಮಾಡಿ ಅವಕಾಶ ಕೊಟ್ಟರಂತೆ. ಕೆಲವು ಟಿವಿ ಜಾಹೀರಾತು, ಪ್ರಿಂಟ್ ಜಾಹೀರಾತುಗಳಲ್ಲಿ ಜಯಶ್ರೀ ನಟಿಸಿದರು. ಮಾಡೆಲ್ ಆಗಿ ಗುರುತಿಸಿಕೊಂಡರು.

ಡ್ಯಾನ್ಸ್ ಅಂದ್ರೆ ಹೆಚ್ಚು ಇಷ್ಟ
ಮಾಡೆಲಿಂಗ್ ಜೊತೆ ಜೊತೆಯಲ್ಲಿ ಡ್ಯಾನ್ಸ್ ಸಹ ಕಲಿತಿದ್ದರು. ಸುಮಾರು ನಾಲ್ಕು ವರ್ಷ ಕಥಕ್ಕಳಿ ತರಬೇತಿ ಪಡೆದಿದ್ದರು. ಮಾಡೆಲಿಂಗ್, ಡ್ಯಾನ್ಸ್ ಹೀಗೆ ಸಾಗುತ್ತಿದ್ದ ಜೀವನದಲ್ಲಿ ದಿಕ್ಕು ಬದಲಿಸಿದ್ದು ಬಿಗ್ ಬಾಸ್ ಕಾರ್ಯಕ್ರಮ.

ಬಿಗ್ ಬಾಸ್ಗೆ ಅವಕಾಶ ಸಿಕ್ಕಿದ್ದು ಹೇಗೆ?
ಕಾಸ್ಟಿಂಗ್ ನಿರ್ದೇಶಕರ ಮೂಲಕವೇ ಬಿಗ್ ಬಾಸ್ ಶೋಗೆ ಹೋಗುವ ಅವಕಾಶ ಜಯಶ್ರೀಗೆ ಸಿಕ್ಕಿತ್ತು. ಬಿಗ್ ಬಾಸ್ ಸೀಸನ್ ಮೂರರಲ್ಲಿ ಮಾಡೆಲ್ ಒಬ್ಬರನ್ನು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಕಾಸ್ಟಿಂಗ್ ನಿರ್ದೇಶಕರೊಬ್ಬರು ಜಯಶ್ರೀ ಅವರ ಹೆಸರು ಸೂಚಿಸಿದ್ದರು. ಆಮೇಲೆ ಜಯಶ್ರೀ ಅವರನ್ನು ಬಿಗ್ ಬಾಸ್ ಆಯೋಜಕರು ಸಂಪರ್ಕಿಸಿ ಓಕೆ ಮಾಡಿದ್ದರು.

'ಉಪ್ಪು ಹುಳಿ ಖಾರ' ಚಿತ್ರದಲ್ಲಿ ಜಯಶ್ರೀ
ಬಿಗ್ ಬಾಸ್ ಮುಗಿಸಿ ಬಂದ ಜಯಶ್ರೀಗೆ ಮೊದಲ ಬಾರಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ತು. ನೃತ್ಯ ಸಂಯೋಜನ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಚಿತ್ರದಲ್ಲಿ ಜಯಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಮಾಲಾಶ್ರೀ, ನಿರೂಪಕಿ ಅನುಶ್ರೀ ಸಹ ಕಾಣಿಸಿಕೊಂಡಿದ್ದರು.

'ನಟ-ನಟಿಯರು' ವಿವಾದ
ನಟ-ನಟಿಯರು ಎಂಬ ಸಿನಿಮಾದಲ್ಲಿ ಜಯಶ್ರೀ ನಟಿಸಬೇಕಿತ್ತು. ಎರಡು ದಿನಗಳ ಚಿತ್ರೀಕರಣ ಸಹ ಮಾಡಿದ್ದರು. ನಂತರ ಸಿನಿಮಾದಿಂದ ಜಯಶ್ರೀ ಅವರನ್ನು ಕೈಬಿಡಲಾಗಿತ್ತು. ಈ ಘಟನೆ ಬಳಿಕ ನಿರ್ದೇಶಕರು ಮೋಸ ಮಾಡಿದ್ರು ಎಂದು ಜಯಶ್ರೀ ಆರೋಪಿಸಿದರು. ಇದು ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ಚಿತ್ರದಲ್ಲಿ ಜಯಶ್ರೀ ನಟಿಸಲೇ ಇಲ್ಲ. ಗಡ್ಡ ವಿಜಿ ನಿರ್ದೇಶನದ 'ಶಿರಾಢಿ ಘಾಟ್' ಸಿನಿಮಾದಲ್ಲಿ ಜಯಶ್ರೀ ಅಭಿನಯಿಸಿದ್ದರು. ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಕನ್ನಡ್ ಗೊತ್ತಿಲ್ಲ' ಸಿನಿಮಾದಲ್ಲಿ ಜಯಶ್ರೀ ಅತಿಥಿ ಪಾತ್ರ ಮಾಡಿದ್ದರು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777


Click it and Unblock the Notifications











