ಕಲಾವಿದರ ಸಂಘದಲ್ಲಿ ಪೂಜೆ ವೇಳೆ ಮೈ ಮೇಲೆ ದೇವರು ಬಂದಂತೆ ವರ್ತಿಸಿದ ನಟಿ
ಕನ್ನಡ ಚಿತ್ರರಂಗ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಬಾಕ್ಸಾಫೀಸ್ನಲ್ಲಿ ಸಿನಿಮಾಗಳು ಗೆಲ್ಲುತ್ತಿಲ್ಲ. ಸಾವು ನೋವು ಕೂಡ ಸಂಭವಿಸುತ್ತಿದ್ದೆ. ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘ ಕಟ್ಟಡದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಇಂದು(ಆಗಸ್ಟ್ 14) ಬೆಳಗ್ಗೆ 8 ಗಂಟೆಯಿಂದಲೇ ವಿಶೇಷ ಪೂಜೆಗಳು ನಡೆದವು. ಗಣಪತಿ ಹೋಮ , ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನೆರವೇರಿಸಲಾಯಿತು. ಕನ್ನಡ ಚಿತ್ರರಂಗದ ಹಲವರು ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಈ ಪೂಜೆಯಲ್ಲಿ ಭಾಗಿ ಆಗಿದ್ದರು. ಜ್ಯೋತಿಷಿ- ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ ನೇತೃತ್ವದಲ್ಲಿ ಪೂಜೆಗಳು ನಡೆದವು. ಬಳಿಕ ಊಟದ ವ್ಯವಸ್ಥೆಯೂ ಇತ್ತು.

ಚಿತ್ರರಂಗದ ಒಳಿತಿಗಾಗಿ ಪೂಜೆ ಎಂದಾಗ ಸಾಕಷ್ಟು ಪರ- ವಿರೋಧ ಚರ್ಚೆ ನಡೆಯಿತು. ಕೆಲವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ಗಾಗಿ ಪೂಜೆ ಮಾಡುತ್ತಿದ್ದೀರಾ? ಎಂದು ಕೇಳಿದ್ದರು. ಅದನ್ನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ನಿರಾಕರಿಸಿದ್ದರು. ನಾವು ಚಿತ್ರರಂಗದ ಒಳ್ಳೆಯದ್ದಕ್ಕಾಗಿ ಪೂಜೆ ಮಾಡುತ್ತಿದ್ದೇವೆ ಎಂದರು.
ಇನ್ನು ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ನಡೆದ ಪೂಜೆಯಲ್ಲಿ ಗಣಯಾಗ, ಆಶ್ಲೇಷ ಬಲಿ, ಸರ್ಪಶಾಂತಿ, ಮೃತ್ಯುಂಜಯ ಹೋಮ ಕೂಡ ನೇರವೇರಿಸಿದರು. ಇನ್ನು ಪೂಜೆ ವೇಳೆ ಹಿರಿಯ ನಟಿ ಜ್ಯೋತಿ ಬಂಟ್ವಾಳ ತಮ್ಮ ಮೇಲೆ ದೈವ ಬಂದಂತೆ ಕೆಲವೊತ್ತು ಆವೇಶದಿಂದ ವರ್ತಿಸಿದರು. ಇದು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಕೆಲ ಹೊತ್ತಿನ ಬಳಿಕ ಆಕೆ ಸಮಾಧಾನಗೊಂಡರು.
ನಾಗದರ್ಶನದ ವೇಳೆ ಮೈಮೇಲೆ ದೈವ ಬಂದಂತೆ ವರ್ತಿಸಿದ ನಟಿ ಜ್ಯೋತಿ ಬಂಟ್ವಾಳ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದರು. "ನನಗೆ ಪೂಜೆ ಪುನಸ್ಕಾರ ಮಾಡುವ ವೇಳೆ ಈ ರೀತಿ ಭಾವೋದ್ವೇಗಕ್ಕೆ ಒಳಗಾಗಿ ಹೀಗೆ ವರ್ತಿಸುತ್ತೀನಿ. ಮುಖ್ಯವಾಗಿ ದೇವಿ ಆರಾಧನೆ ವೇಳೆ ಈ ರೀತಿ ಆಗುತ್ತದೆ. ದೇವರ ಮೇಲಿನ ಭಕ್ತಿ ಕಾರಣಕ್ಕೆ ಹೀಗೆ ಆಗಬಹುದು ಎನಿಸುತ್ತದೆ" ಎಂದಿದ್ದಾರೆ.

"ನಾಗಾರಾಧನೆ ಸಮಯದಲ್ಲೂ ಹೀಗೆ ದೇವರು ಮೈಮೇಲೆ ಬರುತ್ತದೆ. ಇವತ್ತು ನಾನು ಇಲ್ಲೀದ್ದೀನಿ ಎಂದು ತೋರಿಸಿಕೊಳ್ಳಲು ನನ್ನ ಮೈಮೇಲೆ ಬಂತು. ದೇವರು ಇಲ್ಲಿದ್ದಾರೆ. ಪೂಜೆ ಸ್ವೀಕರಿಸಿದ್ದಾರೆ. ಚಿತ್ರರಂಗದ ಸಂಕಷ್ಟ ಪರಿಹಾರ ಆಗುತ್ತದೆ ಎಂದು ನನಗೆ ಅನಿಸುತ್ತಿದೆ" ಎಂದು ಜ್ಯೋತಿ ಬಂಟ್ವಾಳ ಹೇಳಿದ್ದಾರೆ. 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ನಟಿ ಜ್ಯೋತಿ ನಟಿಸುತ್ತಿದ್ದಾರೆ. ಕೆಲ ಸಿನಿಮಾಗಳಲ್ಲೂ ಮಿಂಚಿದ್ದಾರೆ.
ಗಿರಿಜಾ ಲೋಕೇಶ್, ಪದ್ಮಜಾ ರಾವ್, ವನಿತಾ ವಾಸು, ರಾಗಿಣಿ ಸೇರಿದಂತೆ ಹಲವು ನಟಿಯರು ಈ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ನಟ ಜಗ್ಗೇಶ್, ನೆನೆಪಿರಲಿ ಪ್ರೇಮ್, ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್ ಕೂಡ ಆಗಮಿಸಿದ್ದರು.
ನಟ ಜಗ್ಗೇಶ್ ಮಾತನಾಡಿ "ಆರಂಭದಲ್ಲಿ ನನಗೂ ದರ್ಶನ್ಗಾಗಿ ಪೂಜೆ ಎನ್ನುವಂತೆ ಮಾಹಿತಿ ಬಂತು. ದರ್ಶನ್ಗಾಗಿ ಪೂಜೆ ಆಗಿದ್ದರೆ ನಾನು ಬರುತ್ತಿರಲಿಲ್ಲ. ಯಾಕಂದರೆ ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಕಲಾವಿದರ ಒಳಿತಿಗಾಗಿ ಮಾಡುತ್ತಿರುವ ಪೂಜೆ. ಹಾಗಾಗಿ ನಾನು ಬಂದೆ" ಎಂದಿದ್ದಾರೆ.


Click it and Unblock the Notifications











