"ಸ್ಮಾರ್ಟ್ ಆಗಿದ್ರೆ ನನ್ನತ್ರ ಬನ್ನಿ, ಇಲ್ಲಾಂದ್ರೆ ಬರ್ಬೇಡಿ.. ನಂಗೂ ನಿಮ್ಮ ಗಾಳಿ ಸೋಕುತ್ತೆ ಅಂತೀನಿ"; ನಟಿ ಲಕ್ಷ್ಮಿ
ಸಿನಿಮಾ ತಾರೆಯರು ಕೆಲವೊಮ್ಮೆ ನೀಡುವ ಹೇಳಿಕೆ ವಿವಾದಕ್ಕೆ ಕಾರಣವಾಗಿಬಿಡುತ್ತದೆ. ಯಾವುದೋ ಅರ್ಥದಲ್ಲಿ ಹೇಳಿದ್ದು ಮತ್ಯಾವುದೋ ಅರ್ಥ ಪಡೆದುಕೊಂಡು ಚರ್ಚೆ ಹುಟ್ಟು ಹಾಕುತ್ತದೆ. ಸದ್ಯ ನಟಿ ಲಕ್ಷ್ಮಿ ನೀಡಿರುವ ಹೇಳಿಕೆಯೊಂದು ಅಭಾಸವಾಗಿ ಟ್ರೋಲ್ ಆಗುವಂತಾಗಿದೆ.
ವಯಸ್ಸು 30 ದಾಟಿದರೆ ಎಲ್ಲಾ ಮುಗಿದೇ ಹೋಯ್ತು, ನನಗೆ ಬಹಳ ವಯಸ್ಸಾಗಿ ಬಿಡ್ತು, ಜೀವನದಲ್ಲಿ ಇನ್ನೇನು ಸಾಧಿಸಲು ಸಾಧ್ಯವಿಲ್ಲ ಎನ್ನುವಂತೆ ಕೆಲವರು ಭಾವಿಸುತ್ತಾರೆ. ಮತ್ತೊಬ್ಬರನ್ನು ನೋಡಿ ಇದೇ ರೀತಿ ಮಾತನಾಡಿ ಉತ್ಸಾಹ ಕುಗ್ಗಿಸುವವರು ನಮ್ಮ ಸುತ್ತಾ ಇದ್ದಾರೆ. ಇದೇ ವಿಚಾರದ ಚರ್ಚಿಸಿ ಎಷ್ಟೇ ವಯಸ್ಸಾದರೂ ಆತ್ಮವಿಶ್ವಾಸದಿಂದ ಇರಬೇಕು ಎಂದು ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವಿಶೇಷ ಲೇಖನ ಪ್ರಕಟವಾಗಿತ್ತು. ಇದಕ್ಕೆ ನಟಿ ಲಕ್ಷ್ಮಿ ಅವರ ಪ್ರತಿಕ್ರಿಯೆಯನ್ನು ಪಡೆದು ಲೇಖನದಲ್ಲಿ ಮುದ್ರಿಸಲಾಗಿತ್ತು. ಆದರೆ ನಟಿ ಲಕ್ಷ್ಮಿ ನೀಡಿರುವ ಹೇಳಿಕೆ ಬಗ್ಗೆ ಕೆಲವರು ಚಕಾರ ಎತ್ತಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ನಟಿ ಲಕ್ಷ್ಮಿ ಇದೇ ಮಾತನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಆಡಿದ್ದರು. ಆಗ ಅದನ್ನು ಯಾರು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. ಸಾಕಷ್ಟು ಜನ ನಟಿ ಲಕ್ಷ್ಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಅದು ಆಕೆಯ ವೈಯಕ್ತಿಕ ಅಭಿಪ್ರಾಯ ಎಂದು ಬೆಂಬಲಿಸುತ್ತಿದ್ದಾರೆ. ಕೆಲವರು ಮಾತ್ರ ಲಕ್ಷ್ಮಿ ಅವರ ವೈವಾಹಿಕ ಬದುಕಿದ ವಿಚಾರವನ್ನು ಎಳೆದುತಂದು ಟ್ರೋಲ್ ಮಾಡುತ್ತಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಟಿ ಲಕ್ಷ್ಮಿ "ನನ್ನ ಫ್ರೆಂಡ್ಸ್ ಕೋಪ ಮಾಡಿಕೊಳ್ಳಬಾರದು. ಒಮ್ಮೆ ವಿಶಾಖಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಒಬ್ಬಳು ಜಯಾ ಅಂತ ನನ್ನನ್ನು ನೋಡಲು ಬಂದಿದ್ದಳು. ಅವಳ ತಲೆ ಕಲೆ ಕೂದಲು ಬೆಳ್ಳಗಾಗಿಬಿಟ್ಟಿತ್ತು. ಸೊರಗಿ ಹೋದಂತೆ ಮೊಮ್ಮಗನನ್ನು ಆಡಿಸುತ್ತಾ ಕೂತಿದ್ದಳು. ಲಕ್ಷ್ಮಿ ನನ್ನ ಫ್ರೆಂಡ್ ಅಂತ ಹೇಳಿ ಕಳುಹಿಸಿದ್ದಳು. ಅವಳು ನನ್ನ ಸೀನಿಯರ್, ತುಂಬಾ ವರ್ಷ ಫೇಲ್ ಆಗಿ ಆಗಿ ಓದಿದ್ದಾಳೆ. ಅವಳ ಜೊತೆ ನಾನು ಸೇರಲ್ಲ, ಮಾತನಾಡಲ್ಲ ಎಂದುಬಿಟ್ಟೆ" ಎಂದು ನಟಿ ಲಕ್ಷ್ಮಿ ನಕ್ಕಿದ್ದರು.

ಮಾತು ಮುಂದುವರೆಸಿ "ನೀನು ಎಷ್ಟೇ ವಯಸ್ಸಾಗಿದ್ದರೂ ಯಾಕೆ ತೋರಿಸಿಕೊಳ್ತೀಯಾ. ಇರುವುದು ಒಂದೇ ಜೀವನ. ಚೆನ್ನಾಗಿರಿ. ವಯಸ್ಸಾದರೆ ವಯಸ್ಸಾದಂತೆ ಇರಬೇಕಂತಿಲ್ಲ. ಅಯ್ಯೋ ನನಗೆ ವಯಸ್ಸಾಯ್ತು ಎನ್ನಬಾರದು. ಅವರ ಎಜರ್ನಿ ಹೋಗಿಸಿಕೊಂಡು ನಮ್ಮನ್ನು ಅವರಂತೆ ಎಳೆದುಬಿಡುತ್ತಾರೆ. ಅಂತಹವರ ಜೊತ ನಾನು ಸೇರುವುದಿಲ್ಲ. ನನ್ನ ಫ್ರೆಂಡ್ಸ್, ನೆಂಟರು ಯಾರೇ ಆಗಿದ್ದರೂ ಸ್ಮಾರ್ಟ್ ಆಗಿದ್ದರೆ ಮಾತ್ರ ನನ್ನ ಬಳಿ ಬನ್ನಿ. ಇಲ್ಲದಿದ್ದರೆ ನಿಮ್ಮ ಗಾಳಿ ನನಗೂ ಸೋಕಿಬಿಡುತ್ತೆ ಅಂತೀನಿ" ಎಂದು ನಟಿ ಲಕ್ಷ್ಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಜಾವಾಣಿ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಕೂಡ ಇದೇ ಮಾತನ್ನು ನಟಿ ಲಕ್ಷ್ಮಿ ಯತಾವತ್ತಾಗಿ ಹೇಳಿದ್ದಾರೆ. "ಸ್ಮಾರ್ಟ್ ಆಗಿದ್ದರೆ ಮಾತ್ರ ನನ್ನ ಬಳಿ ಬನ್ನಿ" ಎಂದು ನಟಿ ಲಕ್ಷ್ಮಿ ಹೇಳಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ಸ್ಮಾರ್ಟ್ ಅಲ್ಲದವರು ಮನುಷ್ಯರಲ್ಲವೇ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನೂರಾರು ಸಿನಿಮಾಗಳಲ್ಲಿ ನಟಿ ಲಕ್ಷ್ಮಿ ನಾಯಕಿ ಆಗಿ ನಟಿಸಿ ಗೆದ್ದಿದ್ದರು. ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಒಳ್ಳೆ ಪಾತ್ರಗಳು ಬಂದರೆ ಈಗಲೂ ಒಪ್ಪಿ ನಟಿಸುತ್ತಾರೆ. ಕಿರುತೆರೆ ಶೋಗಳ ತೀರ್ಪುಗಾರ್ತಿಯಾಗಿಯೂ ಕಾಣಿಸಿಕೊಳ್ಳುತ್ತಾರೆ. 'ತ್ರಿಕೋನ' ಎಂಬ ಕನ್ನಡ ಚಿತ್ರದಲ್ಲಿ ಆಕೆ ಕೊನೆಯದಾಗಿ ಬಣ್ಣ ಹಚ್ಚಿದ್ದರು.


Click it and Unblock the Notifications











