twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಹೇಳಿದ ಕೊನೆಯ ಮಾತು ನೆನಪಿಸಿಕೊಂಡ ಮಾಲಾಶ್ರೀ

    |

    ನಟಿ ಮಾಲಾಶ್ರೀ ತಮ್ಮ ಜೀವನದ ಅತ್ಯಂತ ನೋವಿನ ಕ್ಷಣಗಳನ್ನು ಈ ವರ್ಷ ಕಂಡಿದ್ದಾರೆ. ಮಾಲಾಶ್ರೀ ಅವರ ಪತಿ, ನಿರ್ಮಾಪಕ ರಾಮು ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಕೊರೊನಾದಿಂದ ನಿಧನ ಹೊಂದಿದರು.

    ಕೋಟಿ ರಾಮು ಎಂದೇ ಖ್ಯಾತರಾಗಿದ್ದ ಕನ್ನಡದ ಜನಪ್ರಿಯ ಹಾಗೂ ಯಶಸ್ವಿ ನಿರ್ಮಾಪಕ ರಾಮು ಬಿಟ್ಟುಹೋಗಿದ್ದ ಜವಾಬ್ದಾರಿಗಳನ್ನು ಇದೀಗ ಮಾಲಾಶ್ರೀ ಹೆಗಲಿಗೆ ಏರಿಸಿಕೊಂಡಿದ್ದಾರೆ. ಸಿನಿಮಾದ ಜವಾಬ್ದಾರಿ ಜೊತೆಗೆ ಮಕ್ಕಳ ಜವಾಬ್ದಾರಿಯೂ ಮಾಲಾಶ್ರೀ ಅವರ ಬೆನ್ನಿಗಿದೆ.

    ಪತಿಯನ್ನು ಕಳೆದುಕೊಂಡು ಅತೀವ ದುಃಖದಲ್ಲಿದ್ದ ನಟಿ ಮಾಲಾಶ್ರೀಗೆ ಅಪ್ಪು ನಿಧನವೂ ದೊಡ್ಡ ದುಃಖವನ್ನೇ ತಂದಿತ್ತು. ಮಾಲಾಶ್ರೀ ಹಾಗೂ ಅಪ್ಪು ಬಾಲ್ಯದ ಗೆಳೆಯರು. ಪುನೀತ್‌ಗಿಂತಲೂ ಕೇವಲ ಎರಡೇ ವರ್ಷ ದೊಡ್ಡವರಾಗಿದ್ದ ಮಾಲಾಶ್ರೀ, ಅಪ್ಪುವಿನೊಂದಿಗೆ ಆಪ್ತ ಗೆಳೆತನ ಹೊಂದಿದ್ದರು. ಗೆಳೆಯ ಅಪ್ಪು ನಿಧನ ಹೊಂದುವುದಕ್ಕೆ ಮುಂಚೆ ತಮ್ಮೊಂದಿಗೆ ಆಡಿದ್ದ ಸ್ಪೂರ್ತಿದಾಯಕ ಮಾತುಗಳನ್ನು ಮಾಲಾಶ್ರೀ ನೆನಪಿಸಿಕೊಂಡಿದ್ದಾರೆ.

    ಮೂರು ದಿನ ಮೊದಲು ಭೇಟಿಯಾಗಿದ್ದೆವು: ಮಾಲಾಶ್ರೀ

    ಮೂರು ದಿನ ಮೊದಲು ಭೇಟಿಯಾಗಿದ್ದೆವು: ಮಾಲಾಶ್ರೀ

    ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಾಲಾಶ್ರೀ, ''ಅಪ್ಪು ನಿಧನವಾಗುವ ಮೂರು ದಿನ ಮೊದಲು ಒಂದು ಮದುವೆಯಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ರಾಮು ನಿಧನದ ಬಳಿಕ ನಾನು ಹೋಗಿದ್ದ ಮೊದಲ ಕಾರ್ಯಕ್ರಮ ಅದು. ಅಲ್ಲಿ ಅಪ್ಪು ಸಿಕ್ಕರು. ಅಪ್ಪು ಕೂಡಲೇ ನನ್ನ ತಬ್ಬಿಕೊಂಡು ನೀವು ಹೀಗಿರಬಾರದು. ನೀವು ದುಃಖದಿಂದ ಹೊರಗೆ ಬರಬೇಕು. ನಾನು ನಿಮ್ಮನ್ನು ದುರ್ಗಿ. ಚಾಮುಂಡಿಯಂತೆ ನೋಡಬೇಕು. ರಾಮು ಅವರು ಇಲ್ಲ ಎಂದುಕೊಳ್ಳಬೇಡಿ, ಅವರು ಯಾವಾಗಲೂ ನಮ್ಮ ಜೊತೆ ಇದ್ದಾರೆ, ನಮ್ಮ ಸುತ್ತಮುತ್ತಲೇ ಇದ್ದಾರೆ ಎಂದುಕೊಳ್ಳಿ, ಈ ದುಃಖದಿಂದ ಹೊರಗೆ ಬನ್ನಿ ಎಂದಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ.

    ಕತ್ತಲು ಕವಿದಂತೆ ಆಗಿಬಿಟ್ಟಿತು: ಮಾಲಾಶ್ರೀ

    ಕತ್ತಲು ಕವಿದಂತೆ ಆಗಿಬಿಟ್ಟಿತು: ಮಾಲಾಶ್ರೀ

    ''ಈ ಘಟನೆ ನಡೆದ ಮೂರು ದಿನಕ್ಕೆ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿ ಕತ್ತಲು ಕವಿದಂತೆ ಭಾಸವಾಯಿತು. ಮೂರು ದಿನದ ಮುಂದೆ ನನಗೆ ಧೈರ್ಯ, ಸ್ಪೂರ್ತಿ ತುಂಬಿದ್ದ ವ್ಯಕ್ತಿ ಇಂದು ಇಲ್ಲವೆಂಬುದನ್ನು ನನಗೆ ಜೀರ್ಣಿಸಿಕೊಳ್ಳಲೇ ಆಗಲಿಲ್ಲ. ಎಂಥ ಕೆಟ್ಟ ವರ್ಷ ಇದು ಎನಿಸಿಬಿಟ್ಟಿತು. ನನಗೆ ಹಲವು ಚಾನೆಲ್‌ನವರು ಕರೆ ಮಾಡುತ್ತಿದ್ದರು. ಆದರೆ ನಾನು ಯಾರ ಕರೆಯನ್ನೂ ಸ್ವೀಕರಿಸಲಿಲ್ಲ. ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ'' ಎಂದು ಅಂದಿನ ದಿನವನ್ನು ನೆನಪು ಮಾಡಿಕೊಂಡರು.

    ಚಿತ್ರರಂಗಕ್ಕೆ, ಅವರ ಕುಟುಂಬಕ್ಕೆ ದೊಡ್ಡ ನಷ್ಟ: ಮಾಲಾಶ್ರೀ

    ಚಿತ್ರರಂಗಕ್ಕೆ, ಅವರ ಕುಟುಂಬಕ್ಕೆ ದೊಡ್ಡ ನಷ್ಟ: ಮಾಲಾಶ್ರೀ

    ''ಅಪ್ಪು ಎಂಥಹಾ ಅದ್ಭುತ ವ್ಯಕ್ತಿ. ಎಷ್ಟು ಫಿಟ್ ಆಗಿದ್ದರು. ಯಾರನ್ನೂ ನೋಯಿಸುತ್ತಿದ್ದವರಲ್ಲ. ಎಲ್ಲರೊಟ್ಟಿಗೆ ಪ್ರೀತಿಯಿಂದ ನಗುತ್ತಾ ವ್ಯವಹರಿಸುತ್ತಿದ್ದರು. ಅಂಥಹಾ ವ್ಯಕ್ತಿಯೇ ಹೋಗಿಬಿಟ್ಟರು ಎಂದರೆ ಎಂಥಹಾ ನಷ್ಟ. ಕನ್ನಡ ಚಿತ್ರರಂಗಕ್ಕೆ ಎಷ್ಟು ದೊಡ್ಡ ನಷ್ಟ. ಅವರ ಕುಟುಂಬಕ್ಕೆ ಎಷ್ಟು ದೊಡ್ಡ ನಷ್ಟ. ಎಷ್ಟು ಅದ್ಭುತ ವ್ಯಕ್ತಿಯಾಗಿದ್ದರು ಅಪ್ಪು, ಎಷ್ಟು ಪ್ರತಿಭಾವಂತರಾಗಿದ್ದರು, ಅವರ ನಿಧನ ಬಹಳ ದೊಡ್ಡ ನಷ್ಟ'' ಎಂದರು ಮಾಲಾಶ್ರೀ.

    ನಾವಿಬ್ಬರೂ ಒಟ್ಟಿಗೆ ಆಟವಾಡುತ್ತಿದ್ದೆವು: ಮಾಲಾಶ್ರೀ

    ನಾವಿಬ್ಬರೂ ಒಟ್ಟಿಗೆ ಆಟವಾಡುತ್ತಿದ್ದೆವು: ಮಾಲಾಶ್ರೀ

    ''ನಾವೆಲ್ಲ ಬಹಳ ಸಣ್ಣವರಾಗಿದ್ದಾಗಿನಿಂದಲೂ ಗೆಳೆಯರು. ಸಿನಿಮಾ ಶೂಟಿಂಗ್ ವೇಳೆಯಲ್ಲಿ ನಾವಿಬ್ಬರೂ ಒಟ್ಟಿಗೆ ಆಟ ಆಡುತ್ತಿದ್ದೆವು. ಕಣ್ಣಾ-ಮುಚ್ಚಾಲೆ, ಗೋಲಿ ಇನ್ನೂ ಏನೇನೋ ಆಟವನ್ನು ಪುನೀತ್ ನನಗೆ ಹೇಳಿಕೊಟ್ಟಿದ್ದ. 'ನಂಜುಡಿ ಕಲ್ಯಾಣ' ಸಿನಿಮಾ ನಿರ್ದೇಶಕ ಎಂಎಸ್ ರಾಜಶೇಖರ್ ಕರೆದು ಕರೆದು ನಮಗೆ ಹೊಡೆಯುತ್ತಿದ್ದರು. ಮಾಲಾಶ್ರೀಯನ್ನು ಅಪ್ಪು ಜೊತೆ ಕಳಿಸಬೇಡಿ ಎನ್ನುತ್ತಿದ್ದರು. ಆಟ ಆಡಿ ಮುಖವೆಲ್ಲ ಬೆವರು ಮಾಡಿಕೊಂಡು, ಕೂದಲೆಲ್ಲ ಕೆದರಿಕೊಂಡು ಬರುತ್ತಿದ್ದೆ, ಎಲ್ಲರೂ ಬೈದು ಮತ್ತೆ ಮೇಕಪ್‌ ಹಾಕುತ್ತಿದ್ದರು. ಚಿತ್ರೀಕರಣ ಮುಗಿಯುತ್ತಿದ್ದಂತೆ ಐಸ್‌ಕ್ರಿಮ್ ತಿನ್ನಲು ಹೋಗಿಬಿಡುತ್ತಿದ್ದೆವು'' ಎಂದು ಅಪ್ಪು ಜೊತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡರು ಮಾಲಾಶ್ರೀ.

    English summary
    Actress Malashri remembered Puneeth Rajkumar's last words with her. She said Puneeth Rajkumar met in a wedding three days before his death. He tried to cheer me up.
    Tuesday, December 28, 2021, 22:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X